ಚಿಕ್ಕಬಳ್ಳಾಪುರ ಡಿ.೮ : ತಾಲೂಕಿನ ನಂದಿ ಗಿರಿಧಾಮದಲ್ಲಿ ಇತ್ತೀಚೆಗೆ ಚಿತ್ರೀಕರಣದಲ್ಲಿ ತೊಡಗಿದ್ದ ’ಜೈ ಹೇ’ ಚಿತ್ರದ ನೃತ್ಯ ಸಂಯೋಜಕನ ಮೇಲೆ ರಾಜ್ಯ ನೃತ್ಯ ಕಲಾವಿದರ ಸಂಘದ ಸದಸ್ಯರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಥ್ರಿಲ್ಲರ್ ಮಂಜು ನಿರ್ದೇಶನದ ’ಜೈ ಹೇ’ ಚಿತ್ರದ ನೃತ್ಯ ಸಂಯೋಜಕ ತ್ರಿಭುವನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಗ ಸ್ಥಳಕ್ಕೆ ಆಗಮಿಸಿದ ರಾಜ್ಯ ನೃತ್ಯ ಕಲಾವಿದರ ಸಂಘದ ಸದಸ್ಯರು ಮಾತನಾಡುವ ನೆಪದಲ್ಲಿ ಪಕ್ಕಕ್ಕೆ ಕರೆಕೊಂಡುಹೋಗಿ ತ್ರಿಭುವನ್ರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ತ್ರಿಭುವನ್ ರಾಜ್ಯ ನೃತ್ಯ ಕಲಾವಿದರ ಸಂಘದ ಸದಸ್ಯತ್ವವನ್ನು ಪಡೆಯದೇ ಇರವುದರಿಂದ, ಅವರು ಕನ್ನಡ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಬಾರದು ಎಂದು ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ತಮ್ಮ ಮೇಲೆ ನಡೆದ ಹಲ್ಲೆ ಕುರಿತು ತ್ರಿಭುವನ್ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆಯ ಕುರಿತು ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್.ಚಂದ್ರು ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ.