ಮಂಗಳೂರು: ಜೂನ್ 9 ರಿಂದ ಜೂನ್ 20 ರವರೆಗೆ ನಡೆಯುವ ದ್ವಿತೀಯ ಪಿ.ಯು.ಸಿ ಪರೀಕ್ಷೆ–3 ಅನ್ನು ಶಾಂತಿಯುತ, ಸುಸೂತ್ರ ಹಾಗೂ ದೋಷರಹಿತವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭ, ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಅಥವಾ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಬಂಟ್ವಾಳ ತಾಲೂಕುಗಳ ಕೆಲ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ.
ಜಿಲ್ಲಾಧಿಕಾರಿ ಡಾ. ಆನಂದ್ ಕೆ ಅವರ ಆದೇಶದಂತೆ, ಪುತ್ತೂರಿನ ದರ್ಬೆ ಸೈಂಟ್ ಫಿಲೋಮಿನಾ ಪಿ.ಯು. ಕಾಲೇಜು, ಬೆಳ್ತಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಸುಳ್ಯ ತಾಲೂಕಿನ ಗಾಂಧಿನಗರ ಸರ್ಕಾರಿ ಪಿ.ಯು. ಕಾಲೇಜು ಮತ್ತು ಬಂಟ್ವಾಳದ ಬಿ ಮೂಡಾ ಸರ್ಕಾರಿ ಪಿ.ಯು. ಕಾಲೇಜು ಪರಿಸರದಲ್ಲಿ ಈ ನಿರ್ಬಂಧ ಜಾರಿಯಲ್ಲಿರುತ್ತದೆ.