ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಬರಿಯ ಉತ್ಪಾದಕತೆಯ ಹೆಚ್ಚಳದಿಂದ ಕೃಷಿ ಬಿಕ್ಕಟ್ಟು - ಹಸಿವಿನ ಸಮಸ್ಯೆ ಬಗೆಹರಿಯದು

ಬೆಂಗಳೂರು: ಬರಿಯ ಉತ್ಪಾದಕತೆಯ ಹೆಚ್ಚಳದಿಂದ ಕೃಷಿ ಬಿಕ್ಕಟ್ಟು - ಹಸಿವಿನ ಸಮಸ್ಯೆ ಬಗೆಹರಿಯದು

Mon, 11 Jan 2010 18:50:00  Office Staff   S.O. News Service

ಇದೇ ದಕ್ಷಿಣ ಭಾರತದಲ್ಲೇ ಅತ್ಯಂತ ಹೆಚ್ಚು ಬಡತನ, ಹಸಿವು, ಅಪೌಷ್ಠಿಕತೆ, ರೈತರ ಆತ್ಮಹತ್ಯೆಗಳು ಕರ್ನಾಟಕದಲ್ಲಿ ತಾಂಡವವಾಡುತ್ತಿದೆ. ಹಸಿವು, ಬಡತನಗಳಿಗೆ ಹಲವು ಜನ ತಜ್ಞರೆನಿಸಿಕೊಂಡವರು. ಸರ್ಕಾರಿ ಅಧಿಕಾರಿಗಳು ಉತ್ಪಾದಕತೆ ಹೆಚ್ಚಳದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ.  ಕರ್ನಾಟಕದ ಆಹಾರ ಉತ್ಪಾದನೆ ಸರಿಸುಮಾರು ರಾಜ್ಯದ ಅಗತ್ಯಕ್ಕಾಗುವಷ್ಟಿದೆ. ಮುಖ್ಯವಾದ ಸಮಸ್ಯೆ ಇರುವುದು ಹಂಚಿಕೆಯಲ್ಲಿ. ಈ ಸಮಸ್ಯೆ ಪರಿಹರಿಸದೆ ಬಿಕ್ಕಟ್ಟಿನ ಪರಿಹಾರ ಸಾಧ್ಯವಿಲ್ಲ ಎಂಬ ಅಭಿಪ್ರಾಯವು ಕರ್ನಾಟಕ ಪ್ರಾಂತ ರೈತ ಸಂಘದ 14ನೇ ರಾಜ್ಯ  ಸಮ್ಮೇಳನದ ಅಂಗವಾಗಿ  `ಕೃಷಿ ಬಿಕ್ಕಟ್ಟು, ನೆರೆ, ಆಹಾರದ ಪ್ರಶ್ನೆ' ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ವ್ಯಕ್ತವಾಯಿತು.

ಕೃಷಿ ಬಿಕ್ಕಟ್ಟಿನ ಕುರಿತು ಬೆಂಗಳುರು ಕೃಷಿ ವಿ.ವಿ.ಕೃಷಿ ಅರ್ಥ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ|| ಟಿ.ಎನ್.ಪ್ರಕಾಶ್ ಕಮ್ಮರಡಿ ಮಾತನಾಡಿ, ತರಕಾರಿ ಮತ್ತು ಆಹಾರ ಧಾನ್ಯಗಳ ಬೆಲೆಗಳು ಕೊಳ್ಳುವ ಗ್ರಾಹಕರಿಗೆ ತುಂಬಾ ದುಬಾರಿಯಾಗಿವೆ. ಹುರುಳಿಕಾಯಿಗೆ ಕೆ.ಜಿ. 25, 30 ರೂ. ಬದನೆ 24 ರೂ. ಎಲೆಕೋಸು ರೂ.14, ಹೀಗೆಲ್ಲಾ ಇದ್ದಾಗಲೂ ಈ ತರಕಾರಿ ಬೆಳೆದ ರೈತನಿಗೆ ಎಂದೂ ಕೆ.ಜಿ.ಗೆ ಎರಡಂಕಿಯ ಬೆಲೆ ಅಂದರೆ 10 ರೂಪಾಯಿ ಸಿಕ್ಕಿಲ್ಲ. ಬಹಳ ಸಾರಿ ಕೆ.ಜಿ. 3-4 ರೂಪಾಯಿಗಳಷ್ಟೇ ಸಿಗುತ್ತದೆ. ಲಾಭದ ಹಂಚಿಕೆಯಲ್ಲಿ ರೈತನಿಗೆ ತುಂಬಾ ಮೋಸವಾಗುತ್ತದೆ. ತಾನು ಬೆಳೆದ ಬೆಲೆಗೆ ರೈತ ತಾನು ಬೆಲೆ ನಿಗದಿ ಮಾಡಲಾರ. ಕೃಷಿ ಉತ್ಪನ್ನಗಳು ಮಾರಾಟವಾಗುವ ಬೆಲೆಯಲ್ಲಿ ಕನಿಷ್ಠ ಅರ್ಧದಷ್ಟಾದರೂ ಬೆಲೆ ರೈತನಿಗೆ ಸಿಗಬೇಕು ಬಹುರಾಷ್ಟ್ರೀಯ ಕಂಪನಿಗಳ ಆಗಮನ, ಜೈವಿಕ ತಂತ್ರಜ್ಞಾನ, ಉತ್ಪಾದಕತೆ ಹೆಚ್ಚಳದಿಂದ ಈ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಪ್ರಕಾಶ್ ಪ್ರತಿಪಾದಿಸಿದರು.   ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸರ್ಕಾರ ಸಂಪೂರ್ಣ ಮಧ್ಯ ಪ್ರವೇಶಿಸಬೇಕು. ಮಾರುಕಟ್ಟೆ ಕೇಂದ್ರಗಳಿಗೆ ಅದನ್ನು ಬಿಡಬಾರದು ಎಂದು ಪ್ರಕಾಶ್ ಹೇಳಿದರು.

`ಕೃಷಿ ಬಿಡುವ, ಇಲ್ಲ ಜೀವ ಬಿಡುವ ಪರಿಸ್ಥಿತಿ' - ಜಿ.ಎನ್.ನಾಗರಾಜ್

ರಾಜ್ಯದಲ್ಲಿ ಕೃಷಿ ಬಿಡು ಇಲ್ಲ ಜೀವ ಬಿಡು ಎಂಬಂತಹ ಮಟ್ಟದ ಬಿಕ್ಕಟ್ಟಿದೆ. ರೈತರ ಆತ್ಮಹತ್ಯೆಗಳಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ರೈತರು ಹೆಚ್ಚೆಚ್ಚು ಭೂಮಿ ಬೀಳು ಬಿಟ್ಟು ಕೂಲಿಕಾರರಾಗುತ್ತಿದ್ದಾರೆ. ರಾಜ್ಯದಲ್ಲಿ ಬೀಳು ಭೂಮಿ 2005-06 ರಲ್ಲಿ 6.6 ಲಕ್ಷ ಎಕರೆ ಇದ್ದದ್ದು ಈಗ 18 ಲಕ್ಷ ಎಕರೆಗೆ ಏರಿದೆ. 91ರ ನಂತರ ಜಾಗತೀಕರಣ ನೀತಿ ಜಾರಿಯಾದ ಮೇಲೆ ಸಾಲದ ಸಮಸ್ಯೆ ಏರಿ ಮತ್ತೆ ಭೂಮಿ ಬೀಳು ಬಿಡುವುದು ಹೆಚ್ಚಿದೆ.

6 ರಿಂದ 35 ತಿಂಗಳ ವಯಸ್ಸಿನ ಮಕ್ಕಳಲ್ಲಿ ರಾಜ್ಯದಲ್ಲಿ ಶೇ.82.7 ಮಕ್ಕಳು  ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಕೇರಳದಲ್ಲಿ ಇದು ಶೇ.55 ಇದೆ. ಬೆಳವಣಿಗೆ ಕುಂಠಿತವಾದ ಮಕ್ಕಳ ಸಂಖ್ಯೆ ಕರ್ನಾಟಕದಲ್ಲಿ ಶೇ.38 ಇದೆ. ಕೇರಳದಲ್ಲಿ ಇದು ಶೇ.21 ಇದೆ. ಕರ್ನಾಟಕದ ಶೇ.59 ಶೇ ಮಹಿಳೆಯರು ರಕ್ತ ಹೀನತೆ ಅನುಭವಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಸರಿಸುಮಾರು ಆಹಾರದ ಕೊರತೆ ಇಲ್ಲದ ಸ್ಥಿತಿ ಇದೆ. ಆದರೆ ಆಹಾರದ ಹಂಚಿಕೆಯ ಸಮಸ್ಯೆ ಇದೆ. ಭೂಮಿಯಂತಹ ಆಸ್ತಿಯಲ್ಲಿ ಅಸಮಾನ ಹಂಚಿಕೆ ಇದೆ. ರಾಜ್ಯದ ಶೇ.5-6 ರಷ್ಟು ಭೂ ಮಾಲೀಕರು ಶೇ.40-45 ರಷ್ಟು ಭೂಮಿಯ ಮಾಲೀಕತ್ವ ಹೊಂದಿದ್ದಾರೆ. ಪಶ್ಚಿಮ ಬಂಗಾಳ, ಕೇರಳಗಳಂತೆ ಭೂ ಹೀನರಿಗೆ ಭೂಮಿ ಹಂಚಿಕೆಯಾಗಬೇಕು. ಭೂ ಸುಧಾರಣೆಯಾಗಬೇಕು. ಅದರಿಂದ ಆಹಾರದ ಹಾಗೂ ಸಂಪತ್ತಿನ ಅಸಮಾನ ಹಂಚಿಕೆ ತಗ್ಗುತ್ತದೆ. ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು. ಇದರಿಂದ ರೈತರ ಬೆಳೆಗೆ ಒಳ್ಳೆಯ ಬೆಲೆ ಕೊಡಲು ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ತಡೆಯಲು ಸಹಕಾರಿಯಾಗುತ್ತದೆ ಎಂದು ಕೃಷಿ ತಜ್ಞ ಜಿ.ಎನ್.ನಾಗರಾಜ್ ಪ್ರತಿಪಾದಿಸಿದರು.

ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ, ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಮಾರುತಿ ಮಾನ್ಪಡೆಯವರು ಪ್ರವಾಹದ ಸಮಸ್ಯೆ ಬಗೆಗೆ ಮಾತನಾಡಿ, 100 ವರ್ಷಗಳಲ್ಲೇ ಎಂದೂ ಕಾಣದ ಬಾರಿ ಮಳೆ ಬಂದು 6 ಲಕ್ಷ ಮನೆಗಳು ಕುಸಿದುಬಿದ್ದವು. ಸಮಸ್ಯೆಗೆ ಸರ್ಕಾರ ಸ್ಪಂದಿಸಲಿಲ್ಲ. 30 ಸಾವಿರ ಕೋಟಿ ರೂ. ಮೌಲ್ಯದ ಬೆಳೆ ಹಾನಿ ಸಂಭವಿಸಿತು. ರಾಜ್ಯ ಸರ್ಕಾರ  115 ರೂ., 40 ರೂ. 30 ರೂ. ಪರಿಹಾರದ ಚೆಕ್ ನೀಡುವ ಅತ್ಯಂತ ಕ್ರೂರ ಪರಿಸ್ಥಿತಿಯನ್ನು ರಾಜ್ಯದ ಹಲವೆಡೆ ನೋಡಬೇಕಾಗಿದೆ. ರಾಜ್ಯ ಸರ್ಕಾರ ಕೇವಲ 71 ಸಾವಿರ ಮನೆ ನಿರ್ಮಿಸುವುದಾಗಿ ಹೇಳುತ್ತಿದೆ. ಬಿಜೆಪಿ ಕಾರ್ಯಕರ್ತರಾದವರು, ಬೆಂಬಲಿಗರಿಗೆ ಮನೆ ಬಿದ್ದಿಲ್ಲದಿದ್ದರೂ 30-35 ಸಾವಿರ ರೂಗಳ ಪರಿಹಾರ, ಮನೆ ಬಿದ್ದವರಿಗೆ 2 ಸಾವಿರ, 3 ಸಾವಿರ ಪರಿಹಾರ ಮಾತ್ರ ಸಿಕ್ಕಿದೆ. ಎಷ್ಟೋ ಜನಕ್ಕೆ ಅಂತಹ ಪರಿಹಾರವೂ ಸಿಕ್ಕಿಲ್ಲ. ಪರಿಹಾರ ನೀಡಿಕೆಯಲ್ಲಿ ಜಾತಿ ರಾಜಕೀಯ, ಮತೀಯ ರಾಜಕೀಯವನ್ನು ನಡೆಸಲಾಗಿದೆ.

ಕನಿಷ್ಠ 1 ಲಕ್ಷ ಹಣ ಬಳಸಿ 6 ಲಕ್ಷ ಮನೆ ನಿರ್ಮಾಣವಾಗಬೇಕು. ಬೆಳೆ ಹಾನಿಗೆ ಎಕರೆಗೆ 10 ಸಾವಿರ ಪರಿಹಾರ ಸಿಗಬೇಕು ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಬೇಕು ಎಂದು ಮಾರುತಿ ಮಾನ್ಪಡೆಯವರು ಆಗ್ರಹಿಸಿದರು. ಆರಂಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಸ್ವಾಗತವನ್ನು ಆರ್.ಚಂದ್ರತೇಜಸ್ವಿಯವರು, ವಂದನೆಯನ್ನು ಎಂ.ಶ್ರೀನಿವಾಸ್ ನೆರವೇರಿಸಿದರು.

ಸೌಜನ್ಯ: ಜನಶಕ್ತಿ 


Share: