ಸುಮಾರು 10-15 ವರ್ಷಗಳ ಹಿಂದೆ ಅಡಿಕೆಗೆ ಒಳ್ಳೆಯ ಮಾರುಕಟ್ಟೆ ಇತ್ತು. ಇದರಿಂದಾಗಿ ಪ್ರೋತ್ಸಾಹಗೊಂಡ ರೈತರು ಅಡಿಕೆ ಕೃಷಿಗೆ ಆಕರ್ಷಿತರಾಗಿ ಈ ಬೆಳೆಗೆ ಆದ್ಯತೆ ನೀಡಿ ಇದ್ದ ತೋಟಗಳನ್ನು ಅಭಿವೃದ್ಧಿಪಡಿಸಿದ್ದು ಮಾತ್ರವಲ್ಲ, ಇನ್ನಷ್ಟು ವಿಸ್ತಾರಗೊಳಿಸಿದ್ದಾರೆ. ಸಾಲ ಮಾಡಿ ಖರ್ಚು ಮಾಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಲೆ ಕುಸಿಯುತ್ತಾ ಬಂದಿದೆ.ಕೆಲವು ವರ್ಷಗಳ ಹಿಂದೆ ಅಡಿಕೆ ಮಾರುಕಟ್ಟೆಗೆ ಪ್ರವೇಶಿಸಿದ್ದ ಗುಜರಾತಿ ಹಾಗೂ ಇತರ ವ್ಯಾಪಾರಿಗಳು ಧಾರಾಳ ಬೆಲೆ ನೀಡಿ ಅಡಿಕೆಯನ್ನು ರೈತರಿಂದ ಖರೀದಿಸುತ್ತಿದ್ದರು. ಇದರಿಂದ ಉತ್ತೇಜಿತರಾದ ಭತ್ತ ಸಾಗುವಳಿ ರೈತರು ತಮ್ಮ ಗದ್ದೆಗಳನ್ನು ಅಡಿಕೆ ತೋಟಗಳಾಗಿ ಪರಿವರ್ತನೆ ಮಾಡಿದರು; ಅಡಿಕೆಯಲ್ಲದೆ ಇತರ ವಾಣಿಜ್ಯ ಬೆಳೆಗಳನ್ನೂ ಬೆಳೆಯತೊಡಗಿದರು. ಅಡಿಕೆ ತೋಟಗಳು ಹೆಚ್ಚೆಚ್ಚು ವಿಸ್ತರಣೆಯಾದಂತೆ, ಖರೀದಿ ಮಾಡುವ ವ್ಯಾಪಾರಿಗಳು ಮಾರುಕಟ್ಟೆ ಬೆಲೆಗಳನ್ನು ನಿಯಂತ್ರಿಸತೊಡಗಿದರು. ವಾಣಿಜ್ಯ ಬೆಳೆಗಳ ಮಾರುಕಟ್ಟೆಯನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳದ ಸರ್ಕಾರದ ನೀತಿಗಳಿಂದಾಗಿ ದಲ್ಲಾಳಿಗಳೂ ವ್ಯಾಪಾರಿಗಳೂ ಹೇರಳ ಲಾಭ ಬಾಚತೊಡಿಗಿದರೆ, ರೈತರು ವರ್ಷದಿಂದ ವರ್ಷಕ್ಕೆ ಕಡಿಮೆ ಬೆಲೆ ಪಡೆಯತೊಡಗಿದರು. ಕರಾವಳಿ ಜಿಲ್ಲೆಗಳಲ್ಲಿ ಇದೀಗ ಮಾರುಕಟ್ಟೆಗೆ ಹೊಸ ಅಡಿಕೆ ಬರುತ್ತಿದ್ದು, ಕೆ.ಜಿ. ಒಂದಕ್ಕೆ ಬರೇ ರೂ. 60-70ಸಿಗುತ್ತಿದೆ. ಕಳೆದ ವರ್ಷ ಅದಕ್ಕೆ ರೂ. 75 ರ ವರೆಗೆ ಸಿಗುತ್ತಿತ್ತು. ಇದರಿಂದಾಗಿ ಅಡಿಕೆ ಬೆಳೆಗಾರರಿಗೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ. ಅಡಿಕೆ ಬೆಳೆಯ ಉತ್ಪಾದನೆ ಬಗ್ಗೆ ಆಗುವ ಖರ್ಚಿನ ಒಂದು ವೈಜ್ಞಾನಿಕ ಅಧ್ಯಯನದ ಪ್ರಕಾರ ಒಂದು ಕೇಜೀ ಅಡಿಕೆ ಉತ್ಪಾದಿಸಲು ಕನಿಷ್ಟ ರೂ. 82 ಬೇಕಾಗುತ್ತದೆ; ಆದರೆ ರೈತರಿಗೆ ಅಷ್ಟು ಬೆಲೆ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ. ಈ ಮಧ್ಯೆ ಫೆಬ್ರವರಿ ಎರಡನೇ ವಾರದಲ್ಲಿ ಅಡಿಕೆಗೆ ರೂ. 75 ಬೆಂಬಲ ಬೆಲೆ ಕೊಟ್ಟು ಕ್ಯಾಂಪ್ಕೋ ಮೂಲಕ ಖರೀದಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತು. ಆ ಘೋಷಣೆಯ ಬಳಿಕ ಮಾರುಕಟ್ಟೆ ದರ ರೂ. 65-73 ರಲ್ಲಿ ಓಡಾಡುತ್ತಿದ್ದರೂ ಕನಿಷ್ಟ ವೆಚ್ಚಕ್ಕೂ ತಲುಪಿರುವುದಿಲ್ಲ. ಇದರಿಂದಾಗಿ ಅಡಿಕೆ ಬೆಳೆಗಾರರಿಗೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ. ಈಗ ಸಿಗುವ ದರ ಅದರ ಮೂಲ ಉತ್ಪಾದನೆಗೇ ಸಾಲದು. ಮಾಡಿದ ಸಾಲವನ್ನು ಸಂದಾಯ ಮಾಡಲೂ ಅಸಾಧ್ಯವಾಗಿದೆ. ಅಡಿಕೆಗೆ ಕನಿಷ್ಟ ಬೆಲೆ ಕೆ.ಜಿ. ಒಂದಕ್ಕೆ ರೂ. 125 ಆದರೂ ಸಿಗಬೇಕು.
ತೆಂಗು ಬೆಳೆಗಾರರದ್ದೂ ಅದೇ ಪಾಡು
ಇದೇ ರೀತಿ ತೆಂಗು ಬೆಳೆಗಾರರು ಆರ್ಥಿಕ ಬಿಕ್ಕಟ್ಟಿನ ಸುಳಿವಿಗೆ ಸಿಲುಕಿದ್ದಾರೆ. ಒಂದು ತೆಂಗಿನ ಕಾಯಿಗೆ ರೂಪಾಯಿ 6 ರಿಂದ 8ರವರೆಗೆ ಸಿಗುತ್ತಿದ್ದ ಬೆಲೆಯೂ ರೂ. 3-4 ಕ್ಕೆ ಇಳಿದಿದೆ. ಅಂಗಡಿಯಿಂದ ಖರೀದಿಸುವ ಕಾಯಿಗೆ ರೂ. 8-10 ಇದ್ದರೆ, ರೈತನ ಮನೆಯಲ್ಲಿ ರಾಶಿ ಹಾಕಿರುವ ಕಾಯಿಗಳನ್ನು ಕೇಳಿ ಖರೀದಿಸುವ ವ್ಯಾಪಾರಿಗಳೇ ಇಲ್ಲ. ಕೊಬ್ಬರಿಗೂ ದರ ತಗ್ಗಿದೆ. ಕೆ.ಜಿ. ಒಂದಕ್ಕೆ ರೂ. 30-40 ರಲ್ಲೇ ಇದೆ. ನುಸಿ ಬಾಧೆಯಿಂದ ಕೆಲವು ವರ್ಷಗಳಿಂದ ನಷ್ಟವನ್ನು ಅನುಭವಿಸಿದ್ದ ಬೆಳೆಗಾರರಿಗೆ ಈ ದರ ಇಳಿಕೆ ಇನ್ನಷ್ಟು ಸಂಕಷ್ಟ ತಂದಿದೆ. ಒಂದು ತೆಂಗಿನಕಾಯಿಗೆ ಕನಿಷ್ಟ ಬೆಲೆ ರೂ. 7-8 ಆದರೂ ಸರ್ಕಾರ ನಿಗದಿ ಮಾಡಬೇಕು. ಅಂತೆಯೇ ಕೊಬ್ಬರಿಗೂ ಕೆ.ಜಿ.ಗೆ ರೂ. 50 ಆದರೂ ಸಿಗುವಂತಾಗಬೇಕು.
ಮುಕ್ತ ಆಮದು ಒಪ್ಪಂದಗಳ ಪರಿಣಾಮ
ಈ ಪರಿಸ್ಥಿತಿಗೆ ಕಾರಣವೇನು ಆದ್ದರಿಂದ ಕೇಂದ್ರ ಮತ್ತು ರಾಜ್ಯಗಳು ತಮ್ಮ ರೈತ ವಿರೋಧಿ ನೀತಿಯನ್ನು ಬದಲಿಸದಿದ್ದಲ್ಲಿ ಖಂಡಿತವಾಗಿ ಅಡಿಕೆ, ತೆಂಗು ಬೆಳೆಯುವ ರೈತರಿಗೆ ಉಳಿಗಾಲವಿಲ್ಲ. ಕೇಂದ್ರ-ರಾಜ್ಯ ಸರ್ಕಾರಗಳು ಶೀಘ್ರ ಈ ಬೆಳೆಗಾರರ ಬೇಡಿಕೆಗೆ ಸ್ಪಂದಿಸಿ ಬೆಂಬಲ ಬೆಲೆ ಘೋಷಿಸಬೇಕಾಗಿದೆ.
ಕೇಂದ್ರ ಸರ್ಕಾರ ವಿಶ್ವ ವ್ಯಾಪಾರ ಸಂಘಟನೆ ಹಾಗೂ ವಿಶ್ವಬ್ಯಾಂಕಿನ ಸಾಲ ಶರತ್ತುಗಳಿಗೆ ಬಾಗಿ ವಿದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇದರಿಂದ ವಿದೇಶಗಳಿಂದ ಮುಕ್ತ ಆಮದು ಮಾಡಲು ಅವಕಾಶ ಉಂಟಾಗಿದೆ.ಇದೀಗ ಆಗ್ನೇಷ್ಯಾ ದೇಶಗಳೊಂದಿಗೆ ಮಾಡಿಕೊಂಡ ಆಸಿಯಾನ್ ಒಪ್ಪಂದದಿಂದಾಗಿ ತೆಂಗು, ಅಡಿಕೆ, ಎಣ್ಣೆಕಾಳು ಮೊದಲಾದ ಕೃಷ್ಯುತ್ಪನ್ನಗಳೂ ದೇಶೀಯ ಮಾರುಕಟ್ಟೆಗೆ ಅಗ್ಗದ ದರದಲ್ಲಿ ಬಂದು ಬೀಳುತ್ತಿವೆ. ಇವುಗಳನ್ನೇ ಬೆಳೆಯುವ ನಮ್ಮ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಮಾರಬೇಕು? ಆಳುವ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಈ ಬಗ್ಗೆ ಏನನ್ನೂ ಚಿಂತಿಸುವುದಿಲ್ಲ.
ರೈತರ ಪ್ರತಿಭಟನೆ
ಕರ್ನಾಟಕ ಪ್ರಾಂತ ರೈತ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಡಿಕೆ ತೆಂಗು ಬೆಳೆಗಾರರ ಸಮಸ್ಯೆಯನ್ನು ಪರಿಶೀಲಿಸಿದ್ದು,ಬೆಂಬಲ ಬೆಲೆ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸುವ ನಿಟ್ಟಿನಲ್ಲಿ ವಿವಿಧ ಬೆಳೆಗಾರ ರೈತರನ್ನು ಸಂಘಟಿಸಿ, ಚಳುವಳಿಯನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಯಿತು. ಈ ಸಂಬಂಧ ಅಡಿಕೆ, ತೆಂಗು ಬೆಳೆಗಾರ ರೈತ ಸಮೀಕ್ಷೆಯನ್ನು ನಡೆಸಿದೆಯಲ್ಲದೆ, ಆ ಸಮೀಕ್ಷೆ ಇನ್ನು ಮುಂದಕ್ಕೂ ಮುಂದುವರೆಯಲಿದೆ. ಬೆಳ್ತಂಗಡಿ, ವಿಟ್ಲ ಮತ್ತು ಬಂಟ್ವಾಳದಲ್ಲಿ ಅಡಿಕೆ, ತೆಂಗು ಬೆಳೆಗಾರರ ಸಮಾವೇಶಗಳನ್ನು ಏರ್ಪಡಿಸಿ ಈ ಮೂಲಕ ಬೆಳೆಗಾರರ ಬೇಡಿಕೆಗಳಿಗೆ ಖಚಿತರೂಪ ನೀಡಲಾಯಿತು. ಫೆಬ್ರವರಿ22 ರಂದು ದ.ಕ. ಜಿಲ್ಲಾಧಿಕಾರಿ ಕಛೇರಿ ಎದುರು 24 ಗಂಟೆಗಳ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಯಿತು. ಸತ್ಯಾಗ್ರಹದಲ್ಲಿ ಮುಂದಿಟ್ಟ ಬೇಡಿಕೆಗಳು ಇವು
1. ಅಡಿಕೆ ಕೆ.ಜಿ.ಗೆ ರೂ. 125 ಬೆಂಬಲ ಬೆಲೆ
2. ತೆಂಗಿನ ಕಾಯಿ ಒಂದಕ್ಕೆ ರೂ. 7 ಬೆಂಬಲ ಬೆಲೆ
3. ಕೊಬ್ಬರಿ ಕೆ.ಜಿ.ಗೆ ರೂ. 50 ಬೆಂಬಲ ಬೆಲೆ
ಈ ಮೇಲಿನ ಉತ್ಪನ್ನಗಳನ್ನು ರಾಜ್ಯ ಸಕರ್ಾರವೇ ಸ್ಥಳೀಯ ಸಹಕಾರಿ ಸಂಘಗಳ ಮೂಲಕ ಖರೀದಿಸಬೇಕೆಂದು ಒತ್ತಾಯಿಸಲಾಯಿತು
ಹೊಸ ಆರ್ಥಿಕ ನೀತಿಗಳೇ ರೈತರ ಆತ್ಮಹತ್ಯೆಗೆ ಪ್ರೇರಣೆ
ಧರಣಿ ಸತ್ಯಾಗ್ರಹವನ್ನು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾ. ಜಿ.ಸಿ. ಬಯ್ಯಾರೆಡ್ಡಿ ಉದ್ಘಾಟಿಸಿದರು.
ದೇಶದಲ್ಲಿ ಮುಕ್ತ ಆರ್ಥಿಕ ನೀತಿ ಜಾರಿಯಾದ ಬಳಿಕ ರೈತರ ಹಿತಾಸಕ್ತಿ ಕಡೆಗಣಿಸಲ್ಪಟ್ಟಿದೆ.
ದೇಶದ ಕೃಷಿ ರಂಗ ದಿವಾಳಿಯೆದ್ದಿದೆ. ಕೈಗಾರಿಕೆಗಳ ಆರಂಭದ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರ ರೈತರನ್ನು ನಿರಾಶ್ರಿತರನ್ನಾಗಿಸಿ ಆತ್ಮಹತ್ಯೆಗೆ ಪ್ರೇರೇಪಿಸುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ರೈತರ ಕಾಲ್ನಡಿಗೆ ಜಾಥಾ
ಧರಣಿ ಸತ್ಯಾಗ್ರಹಕ್ಕೆ ಪೂರಕವಾಗಿ ಬೆಳ್ತಂಗಡಿ ವಲಯ ಪ್ರಾಂತ ರೈತ ಸಂಘವು ದಿನಾಂಕ 19 ರಿಂದ 4 ದಿನಗಳ ಕಾಲ್ನಡಿಗೆ ಜಾಥಾವನ್ನು ಏರ್ಪಡಿಸಿದ್ದು, ಧರಣಿ ಸತ್ಯಾಗ್ರಹ ಉದ್ಘಾಟನೆ ವೇಳೆ ಮಂಗಳೂರಿಗೆ ತಲುಪಿದ 50 ಮಂದಿಯ ತಂಡವನ್ನು ಸತ್ಯಾಗ್ರಹಿಗಳು ಸಂಭ್ರಮೋಲ್ಲಾಸಗಳಿಂದ ಕ್ರಾಂತಿಕಾರಿ ಅಭಿನಂದನೆಗಳೊಂದಿಗೆ ಸ್ವಾಗತಿಸಿದರು. ಈ ಜಾಥಾದ ನೇತೃತ್ವವನ್ನು ಅಲ್ಲಿನ ರೈತ ಸಂಘದ ಕಾರ್ಯಕರ್ತರಾದ ಹರಿದಾಸ ಎಸ್.ಎಂ., ಪರಮೇಶ್ವರ ನಾಯಕ್, ಸುಕನ್ಯಾ, ಬಿ.ಎಂ.ಭಟ್, ಶಿವಕುಮಾರ ಎಸ್.ಎಂ. ಮತ್ತು ನಿಲೇಶಾ ವಹಿಸಿದ್ದರು. 4 ದಿನಗಳ ಕಾಲ ಹಾಡು, ಘೋಷಣೆಗಳೊಂದಿಗೆ ಸಾಗಿಬಂದ ತಂಡದ ಸದಸ್ಯರು ಧರಣಿ ಸತ್ಯಾಗ್ರಹದಲ್ಲೂ ಸ್ಫೂರ್