ಗಂಗೊಳ್ಳಿ, ಮಾರ್ಚ್ ೯: ಮುಸ್ಲಿಂ ಮೀಸಲಾತಿಗಾಗಿ ರಾಷ್ಟ್ರಮಟ್ಟದಲ್ಲಿ ಅಭಿಯಾನ ನಡೆಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜನರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಕಾರವಾನ್ ಇಂದು ಗಂಗೊಳ್ಳಿಗೆ ಆಗಮಿಸಿತು.

ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಪಿ.ಎಫ್.ಐ. ಉಡುಪಿ ಜಿಲ್ಲಾಧ್ಯಕ್ಷ ಅಮೀರ್ ಹಂಜಾರವರು ಇಂದು ನಾಯಿಕೊಡೆಗಳಂತೆ ಹಲವಾರು ಸಂಘಟನೆಗಳು ಪ್ರಾರಂಭವಾಗಿ ಮುಗ್ಗರಿಸುತ್ತಿದ್ದರೂ ಉನ್ನತ ಧ್ಯೇಯ ಹೊಂದಿರುವ ಪಿ.ಎಫ್.ಐ ಮಾತ್ರ ಹಲವು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ೨೦೦೧ರ ಗಣತಿ ಪ್ರಕಾರ ಭಾರತದಲ್ಲಿ ಮುಸ್ಲಿಮರ ಶೇಖಡಾವಾರು ಜನಸಂಖ್ಯೆ ೧೩.೪% ಇದ್ದರೂ ಮುಸ್ಲಿಂ ಸಮುದಾಯವನ್ನು ಅಲ್ಪಸಂಖ್ಯಾತ ಸಮುದಾಯವನ್ನಾಗಿ ಬಿಂಬಿಸುತ್ತಾ ಬರಲಾಗಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಸ್ಲಿಮರ ಆಹಾರದ ಹಕ್ಕು ನಿರಾಕರಿಸುತ್ತಿದ್ದಾರೆ, ಧಾರ್ಮಿಕ ಹಕ್ಕನ್ನು ನಿರಾಕರಿಸುತ್ತಿದ್ದಾರೆ ಎಂದು ತಿಳಿಸಿದರು. ಇಂದು ಮುಸ್ಲಿಂ ಸಮುದಾಯದ ಎಂಭತ್ತು ಶೇಖಡಾ ಜನರು ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿದ್ದು ಈ ಬಗ್ಗೆ ಹಲವು ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ಸಿದ್ದಪಡಿಸಿ ನೀಡಲಾಗಿದೆ ಆದರೆ ಇದುವರೆಗೆ ಯಾವುದೇ ವರದಿಯನ್ನು ಅನುಷ್ಠಾನಕ್ಕೆ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ತಿಳಿಸಿದರು.
ಅಖಿಲ ಭಾರತ ಇಮಾಂ ಕೌಂಸಿಲ್ ನ ಕರ್ನಾಟಕ ವಿಭಾಗದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮುಅಜ್ಜಮ್ ರವರು ಮಾತನಾಡಿ ಮೀಸಲಾತಿಯ ಬಗ್ಗೆ ಹಲವು ವಿವರಗಳನ್ನು ನೀಡಿದರು. ಗಂಗೊಳ್ಳಿಯಲ್ಲಿ ಹೋಳಿ ಹಬ್ಬ ಆಚರಣೆಯ ದಿನವೇ ಈ ಸಮಾರಂಭವೂ ಇದ್ದುದರಿಂದ ಗಂಗೊಳ್ಳಿ ಠಾಣಾಧಿಕಾರಿ ಗೋಪಾಲ ನಾಯಕ್ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಚಿತ್ರ, ವರದಿ: ಇಬ್ರಾಹಿಂ ಗಂಗೊಳ್ಳಿ.