ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸ್ವಸಹಾಯ ಸಂಘಗಳ ಮಹಿಳೆಯರ ಉತ್ಪನ್ನಗಳ ಮಾರಾಟಕ್ಕಾಗಿ ಕುಮಟಾದಲ್ಲಿ ಸಂಜೀವಿನಿ ಮಾರ್ಟ್ ಉದ್ಘಾಟನೆ

ಸ್ವಸಹಾಯ ಸಂಘಗಳ ಮಹಿಳೆಯರ ಉತ್ಪನ್ನಗಳ ಮಾರಾಟಕ್ಕಾಗಿ ಕುಮಟಾದಲ್ಲಿ ಸಂಜೀವಿನಿ ಮಾರ್ಟ್ ಉದ್ಘಾಟನೆ

Thu, 20 Jul 2023 01:45:52  Office Staff   SO News

ಕಾರವಾರ : ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸುವಂತ ಆದಾಯೋತ್ಪನ್ನಗಳ ಮಾರಾಟಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧೀಕಾರಿಗಳಾದ ಈಶ್ವರ ಕಾಂದೂ ರವರ ನಿರ್ದೇಶನದಂತೆ ಕುಮಟಾದಲ್ಲಿ ಪ್ರಾರಂಭವಾದ ಸಂಜೀವಿನಿ ಮಾರ್ಟ್‌ನ್ನು ಬುಧವಾರ ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ   ದಿನಕರ ಕೆ ಶೆಟ್ಟಿ ರವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೆಎಸ್‍ಆರ್‍ಎಲ್‍ಪಿಎಸ್‍ ಸಂಸ್ಥೆ ಬೆಂಗಳೂರು, ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕ ಪಂಚಾಯತ ಕುಮಟಾ ಸಂಭ್ರಮ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ(ರಿ) ಕಲ್ಲಬ್ಬೆ ಇದರ ಆಶ್ರಯದಲ್ಲಿ ಪ್ರಪ್ರಥಮವಾಗಿ ಕುಮಟಾ ತಾಲೂಕಿನ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮಹಿಳಾ ಸ್ವಸಹಾಯ ಸಂಘಗಳು ಉತ್ಪಾದಿಸಲ್ಪಡುವ ಗ್ರಹ ಉತ್ಪನ್ನಗಳನ್ನು ಒಂದೇ ವೇದಿಕೆಯಡಿ ಪ್ರಚಾರ ಮತ್ತು ಮಾರಾಟ ಮಾಡುವ ದೃಷ್ಠಿಯಿಂದ ಶಹರದ ಗಿಬ್ ಸರ್ಕಲ್ ಬಳಿಯ ಪ್ರಮೀಳಾ ಕಾಂಪ್ಲೆಕ್ಸ್‌ನಲ್ಲಿ ಸಂಜೀವಿನಿ ಮಾರ್ಟ್ ತೆರೆದಿರುವುದು ಮಹಿಳೆಯರಿಗೆ ಪೂರಕವಾಗಿದೆ ಎಂದರು.

ಒಕ್ಕೂಟದ ಮೂಲಕ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದ್ದು ಇದನ್ನು ಮುಂದುವರೆಸುವುದರ ಜೊತೆಗೆ ನಿರಂತರವಾಗಿ ನಡೆಸಿಕೊಂಡು ಹೋಗಬೇಕೆಂದು ತಿಳಿಸಿದರು. ಹಾಗೂ ಮುಂದಿನ ದಿನದಲ್ಲಿ ಸಂಜೀವಿನಿ ಮಾರ್ಟ್ ನಡೆಸಲು ಸರಕಾರಿ ಮಳಿಗೆಯ ಅವಕಾಶವನ್ನು ಕಲ್ಪಿಸಿಕೊಡುವಲ್ಲಿ ತಮ್ಮಿಂದಾಗುವ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕಾಂದೂ ಮಾತನಾಡಿ,  ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸುತ್ತಿದ್ದು ಮಾರಾಟದ ನಿಟ್ಟಿನಲ್ಲಿ ಯೋಗ್ಯವಾದ ವೇದಿಕೆಯ ಕೊರತೆಯಿಂದ ಅವರಿಗೆ ಈವರೆಗೆ ಉತ್ತೇಜನ ಸಿಗುತ್ತಿರಲಿಲ್ಲ. ಆದ್ದರಿಂದ ಸಂಜೀವಿನಿ ಎನ್‍ಆರ್‍ಎಲ್‍ಎಂ ಯೋಜನೆಯಡಿ ಜಿಲ್ಲೆಯಾದ್ಯಂತ ಪ್ರತಿ ತಾಲೂಕು ಕೇಂದ್ರಗಳಲ್ಲಿ ಮತ್ತು ಪ್ರಮುಖ ಪ್ರವಾಸಿ ತಾಣಗಳಲ್ಲಿ “ಸಂಜೀವಿನಿ ಮಾರ್ಟ್” ಸ್ಥಾಪಿಸುವ ಮೂಲಕ ಆಯಾ ತಾಲೂಕಿನ ಸ್ವಸಹಾಯ ಸಂಘದ ಮಹಿಳೆಯರಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಉತ್ತಮ ಅವಕಾಶ ಕಲ್ಪಿಸುವ ದೃಷ್ಠಿಯಿಂದ ಈ ಯೋಜನೆಯನ್ನು ರೂಪಿಸಲಾಗಿದ್ದು ಇದು ರಾಜ್ಯದಲ್ಲಿಯೇ ಒಂದು ವಿನೂತನ ಪ್ರಯತ್ನವಾಗಿದೆ. ಈಗಾಗಲೇ ಜಿಲ್ಲೆಯ ಮುರುಡೇಶ್ವರ, ಸಿದ್ದಾಪುರ ಮತ್ತು ಕುಮಟಾಗಳಲ್ಲಿ ಸಂಜೀವಿನಿ ಮಾರ್ಟ್ ಪ್ರಾರಂಭಿಸಲಾಗಿದ್ದು ಆಗಸ್ಟ್‌ 2023ರ ಅಂತ್ಯದೊಳಗಾಗಿ ಜಿಲ್ಲೆಯ ಬಾಕಿ ಉಳಿದ ತಾಲೂಕಿನಲ್ಲಿಯೂ ತಲಾ ಒಂದು “ಸಂಜೀವಿನಿ ಮಾರ್ಟ್” ಪ್ರಾರಂಭಿಸುವ ಗುರಿ ಹೊಂದಲಾಗಿದೆ. “ಸಂಜೀವಿನಿ “ ಉತ್ಪನ್ನಗಳಿಗೆ ಪ್ರಚಾರ ನೀಡುವ ಉದ್ದೇಶದಿಂದ ಎನ್‍ಆರ್‍ಎಲ್‍ಎಂ ಯೋಜನೆಯಲ್ಲಿಯೇ ಪ್ರಪ್ರಥಮವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳ “ಸಂಜೀವಿನಿ ಜಿಯೋ ಮ್ಯಾಪ್‍” ಸಿದ್ದಪಡಿಸಲಾಗಿದ್ದು, ಇದರಿಂದ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಸಂಜೀವಿನಿ ಉತ್ಪನ್ನಗಳ ಕುರಿತು ಮಾಹಿತಿ ಪಡೆಯಲು ಅನುಕೂಲವಾಗಲಿದೆ ಎಂದರು.

ಕುಮಟಾ ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಾಗರತ್ನ ನಾಯಕ ಮಾತನಾಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರ ಮಾರ್ಗದರ್ಶನದಲ್ಲಿ  ಈ ವಿನೂತನ ಯೋಜನೆಯನ್ನು ಒಕ್ಕೂಟದ ಮೂಲಕ ಅನುಷ್ಠಾನ ಗೊಳಿಸುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದ ಮಹಿಳೆಯರಿಗೆ ಪೂರಕವಾಗಿ ಮಾರ್ಟ್ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಈ ಸಂದರ್ಭದಲ್ಲಿ ಕುಮಟಾ ತಾಲೂಕ ಪಂಚಾಯತ್‌ನ ಅಧಿಕಾರಿ, ಸಿಬ್ಭಂದಿ, ಸಂಭ್ರಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ತಾಲೂಕಿನ ಉಳಿದ ಒಕ್ಕೂಟದ ಎಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.


Share: