ಭಟ್ಕಳ, ನವೆಂಬರ್ 11: ಕಳೆದೊಂದು ತಿಂಗಳ ಅವಧಿಯಲ್ಲಿ ಕ್ವಾರಿಗಳ ತಾಣ ಶಿರಾಲಿ ಬಂಗಾರಮಕ್ಕಿಯ ಬಳಿ ಕರಾವಳಿ ಕಾವಲುಪಡೆಯವರು ವಶಪಡಿಸಿಕೊಂಡ ಲಕ್ಷಾಂತರ ರೂಪಾಯಿ ಸ್ಪೋಟಕ ಸಾಮಗ್ರಿಗಳನ್ನು ಬೆಂಗಳೂರಿನಿಂದ ಆಗಮಿಸಿದ ಬಾಂಬ್ ಪತ್ತೆ ಹಾಗೂ ನಿಷ್ಕ್ರೀಯ ದಳದ ಸಿಬ್ಬಂದಿಗಳು ಬುಧವಾರ ಕಟಗಾರಕೊಪ್ಪ ಗುಡ್ಡದ ಪ್ರದೇಶದಲ್ಲಿ ನಾಶಗೊಳಿಸಿದರು.


ಸುಮಾರು 3000 ಕ್ಕೂ ಅಧಿಕ ಇಲೆಕ್ಟ್ರಿಕಲ್ ಹಾಗೂ ನಾನ್ ಇಲೆಕ್ಟ್ರಿಕಲ್ ಡಿಟೋನೇಟರ್ಗಳು ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಸಿದ ಸರಣಿ ಸ್ಪೋಟಗಳಲ್ಲಿ ನಾಶಗೊಂಡರೆ, 12 ಕ್ವಿಂಟಾಲಿಗೂ ಅಧಿಕ ಭಾರದ ಅಮೋನಿಯಮ್ ನೈಟ್ರೇಟ್ನ್ನು ನೀರಿನೊಂದಿಗೆ ವಿಲೀನಗೊಳಿಸಲಾಯಿತು. ಈ ಕಾರ್ಯಕ್ಕಾಗಿ ಬೆಂಗಳೂರಿನ ಬಾಂಬ್ ನಿಷ್ಕ್ರೀಯ ದಳದ ನಾಲ್ಕು ಸಿಬ್ಬಂದಿಗಳೊಂದಿಗೆ, ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಕೈಜೋಡಿಸಿದರು. ಈ ಸಂದರ್ಭದಲ್ಲಿ ಕರಾವಳಿ ಕಾವಲುಪಡೆಯ ಸಿಪಿಐ ಪ್ರಮೋದರಾವ್, ಎಸೈ ನಂದೀಶ ಮುಂತಾದವರು ಉಪಸ್ಥಿತರಿದ್ದರು. ಅನಧಿಕೃತ ಸ್ಪೋಟಕ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಾವಳಿ ಕಾವಲು ಪಡೆಯ ಪೊಲೀಸರು ೨ ಜನರನ್ನು ಬಂಧಿಸಿದ್ದು, ಒಟ್ಟೂ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.