ಸಿದ್ದಾಪುರ : ತಾಲೂಕಿನ ಕಾನಗೋಡು ಗ್ರಾಮದಲ್ಲಿ ಆಯೋಜಿಸಿದ ಕೆರೆಬೇಟೆಯಲ್ಲಿ ನಾಗರಿಕರು ರೊಚ್ಚಿಗೆದ್ದ ಘಟನೆ ಭಾನುವಾರ ನಡೆದಿದೆ.
ಇಲ್ಲಿನ ಈಶ್ವರ ದೇವಾಲಯದ ಕಟ್ಟಡ ಜೀರ್ಣೋದ್ದಾರ ಸಂಬಂಧ ಆಡಳಿತ ಮಂಡಳಿ ಈ ಬಾರೀ 600 ರೂ. ಪ್ರವೇಶ ಶುಲ್ಕ ವಿಧಿಸಿ ಮೀನು ಹಿಡಿಯಲು ಅವಕಾಶ ಕಲ್ಪಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಹಣ ಪಾವತಿಸಿ ಮೀನು ಬೇಟೆಗೆ ಇಳಿದಿದ್ದರು. ಆದರೆ ಕೆರೆಯಲ್ಲಿ ಮೀನು ಸಿಗದೇ ಇರೋದ್ರಿಂದ ಜನರು ಸಮಿತಿಯ ವಿರುದ್ಧ ಆಕ್ರೋಶಗೊಂಡು ಗಲಾಟೆ ಮಾಡಿದ್ದಾರೆ.
ಸಿದ್ದಾಪುರ ತಾಲೂಕು ಮಾತ್ರವಲ್ಲದೆ ಪಕ್ಕದ ಶಿವಮೊಗ್ಗ, ಸಾಗರ, ಹಾವೇರಿ ಹಾಗೂ ಸುತ್ತಮುತ್ತಲ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆದರೆ ಮೀನು ಸಿಗದೇ ನಿರಾಶೆ ಅನುಭವಿಸಿದ್ದರು. ಇದ್ರಿಂದ ಆಕ್ರೋಶಗೊಂಡ ಜನತೆ ಆಯೋಜಕರ ವಿರುದ್ಧ ತಿರುಗಿ ಬಿದ್ದರು. ತಮ್ಮ ಹಣ ವಾಪಾಸ್ ನೀಡಿ ಎಂದು ಒತ್ತಾಯಿಸಿದ್ದರು. ಇದಕ್ಕೆ ಒಪ್ಪದ ಸಮಿತಿಯವರ ಜೊತೆ ಜಗಳಕ್ಕೆ ಮುಂದಾಗಿದ್ದರಲ್ಲದೇ, ಶಾಮಿಯಾನವನ್ನ ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ರು. ಸಮಿತಿ ಸದಸ್ಯರ ಮೇಲೂ ಹಲ್ಲೆಗೂ ಮುಂದಾಗಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆಸಿದ ಘಟನೆ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ . ಪೊಲೀಸರನ್ನ ನಿಯೋಜಿಸಲಾಗಿತ್ತು.
ಪೊಲೀಸರು ಕಾರ್ಯಕ್ರಮ ಆಯೋಜಕರ ಜೊತೆ ಮಾತುಕತೆ ನಡಸಿ ಜನರ ಹಣವನ್ನ ವಾಪಸ್ ಕೊಡಿಸುವ ಪ್ರಯತ್ನ ಮಾಡಿದ್ದರಿಂದ ಕೆಲವರಿಗೆ ಸಂಘಟಕರು ಹಣವನ್ನ ವಾಪಾಸ್ ನೀಡಿದ್ದಾರೆಂದು ತಿಳಿದುಬಂದಿದೆ.