ಭಟ್ಕಳ: ಅಧಿಕಾರಿಗಳ ಉತ್ತಮ ಕೆಲಸಕ್ಕೆ ನಾಗರೀಕರ ಹಾಗೂ ಅವರ ಅಧೀನ ಸಿಬ್ಬಂದಿಗಳ ಸಹಕಾರವೇ ಮುಖ್ಯವಾಗುತ್ತದೆ ಎಂದು ನಗರ ಠಾಣೆಯ ಇನ್ಸಪೆಕ್ಟರ್ ಹುದ್ದೆಯಿಂದ ವರ್ಗಾವಣೆಗೊಂಡು ಬ್ರಹ್ಮಾವರ ಠಾಣೆಗೆ ಹೋಗುತ್ತಿರುವ ದಿವಾಕರ ಪಿ.ಎಂ. ಅವರಿಗೆ ಇಲಾಖೆಯ ವತಿಯಿಂದ ಹಾಗೂ ನಾಗರೀಕರು ಸನ್ಮಾನಿಸಿ ಬೀಳ್ಕೊಡುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಅಧಿಕಾರಿಗಳಿಗೆ ಸೇವೆ ಸಲ್ಲಿಸಲು ಭಟ್ಕಳ ಒಂದು ಉತ್ತಮ ಪ್ರದೇಶವಾಗಿದ್ದು, ಇಲ್ಲಿನ ನಾಗರೀಕರ ಹಾಗೂ ಸಿಬ್ಬಂದಿಗಳ ಸಹಕಾರ ಉತ್ತಮವಾಗಿ ದೊರೆತಿದ್ದರಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು. ಸಿಬ್ಬಂದಿಗಳು ನಾಗರೀಕರೊಂದಿಗೆ ತಾಳ್ಮೆಯಿಂದ ವರ್ತಿಸಿದಾಗ ಸಮಾಜದಲ್ಲಿ ಉತ್ತಮ ವಾತಾವರಣ ಮೂಡಲು ಸಾಧ್ಯ. ಎಂದ ಅವರು ತಮ್ಮ ಸಿಬ್ಬಂದಿಗಳಿಗೂ ಕೂಡಾ ಇದೇ ತರಬೇತಿಯನ್ನು ನೀಡಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿ.ವೈ.ಎಸ್.ಪಿ. ಶ್ರೀಕಾಂತ ಮಾತನಾಡಿ ದಿವಾಕರ್ ಓರ್ವ ಜನಸ್ನೇಹೀ ಪೊಲೀಸ್ ಆಗಿದ್ದುಕೊಂಡು ಉತ್ತಮ ಕರ್ತವ್ಯ ನಿರ್ವಹಸಿದ್ದಾರೆ. ಸಿಬ್ಬಂದಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುವ ಇವರು ಸಿಬ್ಬಂದಿಗಳ ಕಷ್ಟ ಸುಖದಲ್ಲಿ ಸದಾ ಭಾಗಿಯಾಗಿರುವುದು ಅವರ ಗುಣ ಎಂದರು. ಸರಕಾರದ ನಿಯಮದಂತೆ ವರ್ಗಾವಣೆಗೊಂಡಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಎಂದೂ ಹಾರೈಸಿದರು.
ವೇದಿಕೆಯಲ್ಲಿದ್ದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ದಿವಾಕರ್ ಓರ್ವ ಉತ್ತಮ ಅಧಿಕಾರಿಯಾಗಿದ್ದು ತಮ್ಮ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ವ್ಯಕ್ತಿತ್ವ ಉಳ್ಳವರು. ಬಹಳ ಸ್ನೇಹಜೀವಿಯಾಗಿದ್ದ ಅವರು ಸದಾ ಕಾಲ ಕರೆಗಳಿಗೆ ಸ್ಪಂಧಿಸಿ ಪ್ರತಿಯೊಂದು ಸಮಸ್ಯೆಗಳಿರೂ ಪರಿಹಾರ ಕಂಡುಕೊಳ್ಳುತ್ತಿದ್ದರು ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಮಹಾಬಲೇಶ್ವರ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಸಬ್ ಇನ್ಸಪೆಕ್ಟರ್ ಸುಮಾ ಬಿ. ಉಪಸ್ಥಿತರಿದ್ದರು.
ಸಾರ್ವಜನಿಕರ ಪರವಾಗಿ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ, ಯುತ್ ಫೆಡರೇಶನ್ನ ಅಝೀಜುರ್ ರೆಹಮಾನ ಶಾಬಂದ್ರಿ, ಮುನೀರ್ ಸಾಬ್, ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿದರು. ಇಲಾಖೆಯ ವತಿಯಿಂದ ಬೀಳ್ಕೊಡುಗೆ, ಸನ್ಮಾನದ ಜೊತೆಗೆ ನಾಗರೀಕ ಸನ್ಮಾನವನ್ನು ಕೂಡಾ ನಡೆಸಿಕೊಟ್ಟರು