ಭಟ್ಕಳ: ಬಿಜೆಪಿ ರಾಷ್ಟ್ರೀಯ ಪ್ರಧಾನ ಸಿ.ಟಿ. ರವಿ ಅವರು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಮತ್ತು ಅವರ ಜಾತಿಯ ಹೆಸರನ್ನು ಎತ್ತಿಕೊಂಡು ಕೀಳಾಗಿ ಮಾತನಾಡಿರುವುದು ಖಂಡನೀಯವಾಗಿದೆ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂತೋಷ ನಾಯ್ಕ ಹೇಳಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿ, ಒಂದು ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಒಂದು ಜಾತಿ ಯಾ ಸಮುದಾಯದ ಕಸುಬಿನ ಬಗ್ಗೆ ಹಾಗೂ ನಾಯಕರ ಬಗ್ಗೆ ನಿಂದನೆ ಮಾಡಿರುವುದು ಅಕ್ಷಮ್ಯ. ಅವರ ದುರಹಂಕಾರದ ಮಾತು ಮತ್ತು ವರ್ತನೆ ಅವರಂತಹ ಅಯೋಗ್ಯರಿಗೆ ಮಾತ್ರವೇ ಖುಷಿ ತರ ಬಲ್ಲುದೇ ಹೊರತೂ ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ಸಿ.ಟಿ. ರವಿ ಅವರ ವರ್ತನೆಯ ಕಾರಣಕ್ಕೆ ಅವರನ್ನು ಈಗಾಗಲೇ ಮಂತ್ರಿಮಂಡಲದಿಂದ ಹೊರ ಹಾಕಲಾಗಿದೆ. ಬಿ.ಕೆ. ಹರಿಪ್ರಸಾದ್ ಅವರ ಜಾತಿಯ ಕುಲ ಕಸುಬಿನ ಬಗ್ಗೆ ಮಾತನಾಡುವ ನೈತಿಕತೆ ಸಿ.ಟಿ.ರವಿಯವರಿಗೆ ಇಲ್ಲ, ಯಾವುದೇ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ರಾಜ್ಯದ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.