ಭಟ್ಕಳ, ನವೆಂಬರ್ 20: ಭಟ್ಕಳದಲ್ಲಿ ಕಳೆದ 2003 ರಿಂದ ಇಲ್ಲಿಯ ತನಕ ಒಟ್ಟೂ 40 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ 1416 ಲೀಟರ್ ಆಕ್ರಮ ಮದ್ಯವನ್ನು ಇಂದು ಇಲ್ಲಿನ ಸಾಗರ ರಸ್ತೆಯ ನಿರ್ಜನ ಪ್ರದೇಶದಲ್ಲಿ ನಾಶ ಪಡಿಸಿದ್ದು ಪ್ಲಾಸ್ಟಿಕ್ ಸಾಚೆಟ್ಗಳು ಹಾಗೂ ಬಾಟಲಿಗಳನ್ನು ಬೆಂಕಿಯಿಂದ ಸುಟ್ಟು ನಾಶಪಡಿಸಲಾಯಿತು.
ನಾಶಪಡಿಸಿದವುಗಳಲ್ಲಿ ಕಳ್ಳ ಭಟ್ಟಿ ಸರಾಯಿ ೯೬೬.೪೦೦ ಲೀಟರ್, ಸರಕಾರಿ ಸರಾಯಿ ೧೦೭ ಲೀಟರ್, ಗೋವಾ ಫೆನ್ನಿ ೧೫೧.೫೦೦ ಲೀಟರ್, ಗೋವಾ ವಿಸ್ಕಿ ೦.೦೭೫ ಲೀಟರ್, ಗೋವಾ ಬ್ರಾಂಡಿ ೧೨೯.೧೯೦ ಲೀಟರ್, ವಿಸ್ಕಿ ೫೮.೨೦ ಲೀಟರ್, ಬೀರು ೫.೪೫೦ ಲೀಟರ್ ಸೇರಿದೆ ಎನ್ನಲಾಗಿದೆ.
ನಾಶಪಡಿಸುವ ಪ್ರಕ್ರಿಯೆಯನ್ನು ತಹಸೀಲ್ದಾರ್ ಎಸ್. ಎಂ. ನಾಯ್ಕ ಅವರ ಸಮ್ಮುಖದಲ್ಲಿಯೇ ನಡೆಸಲಾಯಿತು. ಅಬಕಾರಿ ಇನ್ಸಪೆಕ್ಟರ್ ಗೀತಾ ಅವರು ಉಪಸ್ಥಿತರಿದ್ದರು.
ಉಪ ತಹಸೀಲ್ದಾರ್ ಡಿ.ಜಿ.ಹೆಗಡೆ, ಕಂದಾಯ ನಿರೀಕ್ಷಕ ಬಂಟ, ಅಬಕಾರಿ ಉಪ ನಿರೀಕ್ಷಕ ಎನ್. ಜಿ.ನಾಯ್ಕ ಮತ್ತು ಸಿಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.