ಭಟ್ಕಳ: ನಗರದ ಮೂಡಭಟ್ಕಳ ಬೈಪಾಸ್ ಬಳಿಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಲೋಕೇಶ ನಾಯ್ಕ ಹಾಗೂ ಶೇಖರ ನಾಯ್ಕ ಎಂದು ಗುರುತಿಸಲಾಗಿದೆ. ಹೊನ್ನಾವರ ಕಡೆಯಿಂದ ಬಂದ ಮೀನು ಲಾರಿಯನ್ನು ಚಾಲಕ ಮೂಡಭಟ್ಕಳ ಬೈಪಾಸ್ ಹತ್ತಿರ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೋಟೆಲ್ ಕಾರ್ಮಿಕರು ಬರುತ್ತಿರುವ ಬೈಕಿಗೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಡಿಸಿದ್ದಾನೆ. ಅಪಘಾತದ ವೇಗಕ್ಕೆ ಬೈಕ್ ಸವಾರ ಹಾಗೂ ಹಿಂಬದಿಯ ಸವಾರ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಾರಿ ರಸ್ತೆಯ ಮೇಲೆಯಾ ಮಗುಚಿ ಬಿದ್ದಿದೆ.
| ಐ.ಆರ್.ಬಿ.ಯವರ ಅವೈಜ್ಞಾನಿಕ ಹಾಗೂ ಅಪೂರ್ಣ ಕಾಮಗಾರಿಯಿಂದಾಗಿ ಈ ಭಾಗದಲ್ಲಿ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಜನಪರ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು ಸೇರಿ ಈ ಕುರಿತು ಪ್ರತಿಭಟನೆಯನ್ನು ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಅಮಾಯಕರು ಜೀವ ತೆರವುದುನ್ನು ತಪ್ಪಿಸುವಲ್ಲಿ ಮುಂದಾಗಬೇಕಾಗಿದೆ. ಜೀವ ಕಳೆದುಕೊಳ್ಳುವ ಅಮಾಯಕರ ಕುಟುಂಬದ ರೋಧನ ನಿಲ್ಲಬೇಕಾಗಿದೆ. ಶ್ರೀಕಾಂತ ನಾಯ್ಕ, ಮಾಜಿ ಸೈನಿಕ |
ಚಾಲಕ ಹೊನ್ನಾವರದ ರವಿ ಬೋವಿ ಈತನಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾನೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ಸಪೆಕ್ಟರ್ ದಿವಾಕರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಅವೈಜ್ಞಾನಿಕ ಕಾಮಗಾರಿ, ಪದೇ ಪದೇ ಅಪಘಾತ: ಈ ಭಾಗದಲ್ಲಿ ಕಳೆದ ೨-೩ ವರ್ಷಗಳಿಂದ ಅವೈಜ್ಞಾನಿಕ ಕಾಮಗಾರಿಯನ್ನು ಮಾಡಿದ್ದು ಒಂದು ಕಡೆಯಲ್ಲಿ ಮಣ್ಣು ತುಂಬಿಸಿ ದಿಬ್ಬ ಮಾಡಿಟ್ಟರೆ ಇನ್ನೊಂದು ಕಡೆಯಲ್ಲಿ ಸೇತುವೆ ಮಾಡಿ ಸಂಪರ್ಕ ರಸ್ತೆಯನ್ನು ಮಾಡದೇ ವರ್ಷಾನುಟ್ಟಲೆಯಿಂದ ಜನತೆ ತೀವ್ರ ತೊಂದರೆ ಪಡುತ್ತಿದ್ದಾರೆ. ಒಮ್ಮೆಲೇ ಕುಂದಾಪುರ ಕಡೆಯಿಂದ ಬರುವ ವಾಹನಗಳು ತಿರುವಿನಲ್ಲಿ ಬರುತ್ತಿರುವಾಗ ರಸ್ತೆ ಪಕ್ಕದಲ್ಲಿ ಬೆಳೆದಿದ್ದ ಗಿಡ-ಗಂಟಿಗಳು ಅಡ್ಡ ಬರುತ್ತಿದ್ದು ಎದುರಿನಿಂದ ಬರುತ್ತಿರುವ ವಾಹನ ಕಾಣಿಸುವುದೇ ಇಲ್ಲ. ತಕ್ಷಣ ಐ.ಆರ್.ಬಿ.ಯವರು ಹೊಸದಾಗಿ ನಿರ್ಮಾಣ ಮಾಡಿದ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮಾಡಿದಲ್ಲಿ ಪದೇ ಪದೇ ಅಪಘಾತವಾಗುವುದನ್ನು ತಪ್ಪಿಸಬಹುದು.