ನವದೆಹಲಿ, ನವೆಂಬರ್ 3: ಬೆಂಗಳೂರು, ಮುಂಬೈ, ಕೋಲ್ಕತಾ, ಅಹಮದಾಬಾದ್ಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ನೌಕಾಪಡೆ ಗುಪ್ತಚರರು ನೀಡಿದ ತಪ್ಪು ಎಚ್ಚರಿಕೆ ಸರ್ಕಾರವನ್ನು ಬೇಸ್ತು ಬೀಳಿಸಿದ ಪ್ರಸಂಗ ಸೋಮವಾರ ನಡೆದಿದೆ.
ಈ ನಗರಗಳ ಮೇಲೆ ಮುಂಬೈ ಮಾದರಿಯಲ್ಲಿ ಸಮುದ್ರ ಮಾರ್ಗದ ಮೂಲಕ ಲಷ್ಕರ್ ಉಗ್ರರು ಬಂದು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ನೌಕಾ ಗುಪ್ತಚರರು ಎಚ್ಚರಿಕೆ ನೀಡಿ, ನೌಕಾಪಡೆಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದರು. ಕೂಡಲೇ ಎಚ್ಚೆತ್ತ ಗೃಹ ಇಲಾಖೆಯು ‘ಈ ಮಾಹಿತಿ ಎಲ್ಲಿಂದ ಬಂತು’ ಎಂದು ರಕ್ಷಣಾ ಸಚಿವಾಲಯವನ್ನು ಪ್ರಶ್ನಿಸಿದಾಗ ‘ಪಾಕಿಸ್ತಾನ ಅರಬ್ಬಿ ಸಮುದ್ರದಲ್ಲಿ ವಾಡಿಕೆಯಂತೆ 6 ವಾರಗಳ ತಾಲೀಮು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಷ್ಟೇ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿತ್ತು’ ಎಂದು ಉತ್ತರಿಸಿತು. ಇದರಿಂದಾಗಿ ತಪ್ಪು ಕಲ್ಪನೆಯಿಂದ ನೌಕಾ ಗುಪ್ತಚರರು ದಾಳಿ ನಡೆವ ಬಗ್ಗೆ ಮುನ್ಸೂಚನೆ ನೀಡಿದ್ದರು ಎಂದು ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ
ಸೌಜನ್ಯ: ಕನ್ನಡಪ್ರಭ