ಬಂಟ್ವಾಳ, ಮಾರ್ಚ್ 2 :ತುಳು ಭಾಷೆ, ಸಂಸ್ಕೃತಿ ಹಾಗೂ ಆಚಾರ-ವಿಚಾರಗಳ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುವ ಮೂಲಕ ಮುಂದಿನ ಜನಾಂಗಕ್ಕೆ ತುಳುನಾಡಿನ ಗತವೈಭವದ ಅರಿವು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಕಾಡೆಮಿಯು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ತುಳು ಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಹೇಳಿದರು.
ವಿಶಿಷ್ಠವಾದ ತುಳು ಸಂಸ್ಸೃತಿಯನ್ನು ಉಳಿಸಿಕೊಂಡು, ಬೆಳೆಸುವ ಜವಾಬ್ದಾರಿ ಪ್ರತೀಯೋರ್ವ ತುಳುವನಲ್ಲಿ ಇರಬೇಕು. ತುಳು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಊರ ಜನರು ಉತ್ತೇಜನ ನೀಡುವಂತಾಗಬೇಕು ಎಂದು ಅವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಬಿ.ಸಿ.ರೋಡ್ ಯಕ್ಷಲೋಕ ಸಾಂಸ್ಕೃತಿಕ ಸಂಗಮದ ವತಿಯಿಂದ ವಾಮದಪದವು ಗಣೇಶ ಮಂಟಪದಲ್ಲಿ ನಡೆದ ತುಳು ಸಾಂಸ್ಕೃತಿಕ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘದ ದ.ಕ. ಜಿಲ್ಲಾ ಅಧ್ಯಕ್ಷರಾದ ಡಾ| ದುರ್ಗಾಪ್ರಸಾದ್ ಎಂ.ಆರ್. ಉದ್ಘಾಟಿಸಿದರು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ, ಸೃಜನಶೀಲತೆಗೆ ಅವಕಾಶ ನೀಡುವುದು ಪಾಲಕರ ಕರ್ತವ್ಯ. ಇಂದು ಮಕ್ಕಳ ಪ್ರತಿಭಾ ವಿಕಸನಕ್ಕೆ ಹಲವಾರು ಅವಕಾಶಗಳಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದರು.
ವಿಟ್ಲ ಅಧ್ಯಾಪಕರ ಸಹಕಾರಿ ಸಂಘ ಅಧ್ಯಕ್ಷ ರಮೇಶ್ ನಾಯಕ್ ರಾಯಿ, ಹಿರಿಯ ಸಾಮಾಜಿಕ ಕಾರ್ಯಕರ್ತ ಗಣೇಶ್ ಪೈ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಬಂಟ್ವಾಳ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸತೀಶ್ ಕುಮಾರ್, ಆಲದಪದವು ಅಕ್ಷರಭಾರತಿ ವಿದ್ಯಾಲಯದ ಸಂಚಾಲಕ ಮೋಹನ ರೈ, ಅಕ್ಷರ ಪ್ರತಿಷ್ಠಾನದ ಅಧ್ಯಕ್ಷ ಡಾ| ರಾಮಕೃಷ್ಣ ಎಸ್., ಯಕ್ಷಲೋಕ ಸಂಯೋಜಕಿ ಪ್ರತಿಮಾ ಗೋಪಾಲ ಅಂಚನ್ ಉಪಸ್ಥಿತರಿದ್ದರು.
ಯಕ್ಷಲೋಕದ ಸಂಚಾಲಕ ಗೋಪಾಲ ಅಂಚನ್ ಸ್ವಾಗತಿಸಿದರು. ಪದ್ಮನಾಭ ಶೆಟ್ಟಿ ವಂದಿಸಿದರು. ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಮಲ್ಲಿಕಾ ಜ್ಯೋತಿಗುಡ್ಡೆ ತಂಡದವರಿಂದ ನೃತ್ಯ-ಸಂಗೀತ, ಯಕ್ಷಗಾನ ಶಿಕ್ಷಕ ಯೋಗೀಶ್ ಅಳದಂಗಡಿ ನಿರ್ದೇಶನದ ಮಕ್ಕಳ ತಂಡದವರಿಂದ ವೀರ ಅಭಿಮನ್ಯು ಯಕ್ಷಗಾನ ಹಾಗೂ ಸತೀಶ್ ಪೂಂಜಾ ತಂಡದವರಿಂದ ಜಾನಪದ ದರ್ಶನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.