ಭಟ್ಕಳ: ಇಲ್ಲಿನ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ತಂಡವೊಂದು ಸೋಮವಾರ ಕಡಲಿನಲ್ಲಿ ಇಳಿದಾಗ ಓರ್ವ ಪ್ರವಾಸಿಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು,ಇಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ನಿವಾಸಿಗಳ 22 ಜನರ ಗುಂಪೊಂದು ಸಿಗಂದೂರು, ಕೊಲ್ಲುರು ಪ್ರವಾಸ ಮುಗಿಸಿ ಸೋಮವಾರ ಮುರುಡೇಶ್ವರಕ್ಕೆ ಆಗಮಿಸಿದ್ದರು. ಸಮುದ್ರದ ಆಳೆತ್ತರ ಅಲೆಯನ್ನು ಲೆಕ್ಕಿಸದೇ ಸಮುದ್ರಕ್ಕಿಳಿದು ಆಟವಾಡುವ ವೇಳೆ ಮೂವರು ಅಲೆಯ ರಭಸಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದರು.
'ಹಸನ್ ಮಜಗಿಗೌಡ (21) ಹಾಗೂ ಸಂಜೀವ ಹೆಬ್ಬಳ್ಳಿ (20) ಎನ್ನುವವರನ್ನು ರಕ್ಷಣೆ ಮಾಡಲಾಗಿದೆ. ಆದರೆ ಸಂತೋಷ ಹುಲಿಗುಂಡೆ (19) ಎನ್ನುವ ಯುವಕ ನೀರಿನಲ್ಲಿ ಕಣ್ಮರೆಯಾದ ಕಾರಣ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ' ಎಂದು ಜೀವರಕ್ಷಕ ಸಿಬ್ಬಂದಿ ತಿಳಿಸಿದ್ದಾರೆ.