ಭಟ್ಕಳ, ಡಿಸೆಂಬರ್ 21:ರಸ್ತೆಯ ಮೇಲೆ ಕೊಳಚೆ ನೀರು ಹರಿದು ಹೋಗುತ್ತಿದ್ದರೂ, ಜನರ ಆರೋಗ್ಯವನ್ನು ನಿರ್ಲಕ್ಷಿಸಿರುವ ಸ್ಥಳೀಯ ಪುರಸಭೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿರುವ ಚೌಥನಿ ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆಯ ಮೇಲೆ ಗಿಡ ನೆಟ್ಟು ಪ್ರತಿಭಟನೆ ವ್ಯಕ್ತಪಡಿಸಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಅಧಿಕಾರಿಗಳು ಬಂದು ಸಮಸ್ಯೆಗೆ ಪರಿಹಾರ ಸೂಚಿಸುವವರೆಗೂ ರಸ್ತೆಯಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದ ಗ್ರಾಮಸ್ಥರು ಮಧ್ಯಾಹ್ನದವರೆಗೂ ಪ್ರತಿಭಟನೆಯನ್ನು ಮುಂದುವರೆಸಿದರು. ಸ್ಥಳಕ್ಕಾಗಮಿಸಿದ ಸಿಪಿಐ ಗುರುಮತ್ತೂರು, ಎಸೈ ಮಂಜುನಾಥ ಗೌಡ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಫಲಕಾರಿಯಾಗದೇ ಹೋಯಿತು. ಗ್ರಾಮಸ್ಥರ ಪರವಾಗಿ ಪುರಸಭಾ ಸದಸ್ಯ ಕೃಷ್ಣಾನಂದ ಪೈ, ವೆಂಕಟೇಶ ನಾಯ್ಕ, ಅಬ್ದುಲ್ ಜಬ್ಬಾರ್, ಲಚ್ಮಯ್ಯ, ರಾಜೇಶ, ವಸಂತ, ಗಣಪತಿ ನಾಯ್ಕ, ಫೈಸಲ್, ಖಾಜಾ, ಫ್ರಾನ್ಸಿಸ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಭಟ್ಕಳ ಪುರಸಭಾಧ್ಯಕ್ಷರ ಆಗಮನ: ಭಟ್ಕಳ ಪುರಸಭಾಧ್ಯಕ್ಷ ಪರ್ವೇಜ್ ಕಾಶೀಮ್ಜಿ ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಅಹವಾಲುಗಳನ್ನು ಆಲಿಸಿದರು. ಇಲ್ಲಿಯ ಕೆಲವು ಮನೆಗಳಿಂದ ಹರಿದು ಬರುವ ಶೌಚಾಲಯದ ನೀರು ನೇರವಾಗಿ ರಸ್ತೆಯನ್ನು ಅತಿಕ್ರಮಿಸಿಕೊಳ್ಳುತ್ತಿದೆ. ಅಕ್ಕಪಕ್ಕದ ಗದ್ದೆಗಳೂ ಕೊಳಚೆ ನೀರಿನಿಂದ ನರಕಯಾತನೆಯನ್ನು ಅನುಭವಿಸುತ್ತಿವೆ. ರಸ್ತೆಗೆ ಹೊಂದಿಕೊಂಡಿರುವ ದೇವಸ್ಥಾನಕ್ಕೂ ಹೊಲಸು ನೀರಿನ ವಾಸನೆ ಬಡಿಯುತ್ತಿದೆ. ಸಮಸ್ಯೆಯ ಬಗ್ಗೆ ಭಟ್ಕಳ ಪುರಸಭೆ ಹಾಗೂ ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಈ ಹಿಂದೆ ಹಲವು ಬಾರಿ ದೂರು ಸಲ್ಲಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರೊಂದಿಗೆ ಸುತ್ತಮುತ್ತಲಿನ ಕೆಲವು ಮನೆಗಳಿಗೆ ಭೇಟಿ ನೀಡಿದ ಅಧ್ಯಕ್ಷರು, ರಸ್ತೆಗೆ ಕೊಳಚೆ ನೀರು ಬಿಡದಂತೆ ತಾಕೀತು ಮಾಡಿದರು. ಇದು ಹೀಗೆಯೇ ಮುಂದುವರೆದರೆ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಚರಂಡಿ ದುರವಸ್ಥೆಯ ಶಾಶ್ವತ ಪರಿಹಾರಕ್ಕಾಗಿ ಎಡಿಬಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಆದಷ್ಟು ಬೇಗ ಈ ಎಲ್ಲ ಸಮಸ್ಯೆಯನ್ನು ಬಗೆ ಹರಿಸುವ ಭರವಸೆಯನ್ನು ಅವರು ವ್ಯಕ್ತಡಿಸಿದ್ದಾರೆ. ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಕೃಷ್ಣಪ್ಪ, ಆರೋಗ್ಯಾಧಿಕಾರಿ ಅನಿಲ್ ಪ್ರಭು, ಅಭಿಯಂತರ ಅನಂತ ಪಟಗಾರ ಮುಂತಾದವರು ಉಪಸ್ಥಿತರಿದ್ದರು.