ಭಟ್ಕಳ: ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣ ಮುರುಡೇಶ್ವರ ಕಡಲತೀರದಲ್ಲಿ ನಡೆಯುತ್ತಿದ್ದ ಜಲ ಕ್ರೀಡೆ ಹಾಗೂ ಜಲ ಸಾಹಸ ಕ್ರೀಡೆಗೆ ನೀಡಲಾಗಿರುವ ಕಾರ್ಯಾದೇಶವನ್ನು ಉತ್ತರಕನ್ನಡ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಉಪನಿರ್ದೇಶಕರು ರದ್ದುಗೊಳಿಸಿ ಆದೇಶ ನೀಡಿದ್ದಾರೆ.
ವಾಯ್ಕೆಆರ್ ಆಟ್ವೆಂಚರ್ ಸ್ಪೋರ್ಟ್ಸ್ ಮತ್ತು ಇಕೋ ಟೂರಿಸಂ ಇವರು ಮೇಲ್ಮನವಿ ಪ್ರಾಧಿಕಾರ ಹಾಗೂ ಸರಕಾರದ ಕಾರ್ಯದರ್ಶಿಗಳು ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಇವರಿಗೆ ಕಾರ್ಯಾದೇಶವನ್ನು ರದ್ದುಪಡಿಸಲು ಕೋರಿ ಮೇಲ್ಮನವಿ ಸಲ್ಲಿಸಿದ್ದು,
ಸದರಿ ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಟೆಂಡರ್ ಕಾರ್ಯಾದೇಶವನ್ನು ರದ್ದುಪಡಿಸಲು ತೀರ್ಪು ನೀಡಿರುವುದನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮುರುಡೇಶ್ವರ ಕಡಲತೀರದಲ್ಲಿ ನಡೆಸುತ್ತಿರುವ ಜಲ ಸಾಹಸ ಕ್ರೀಡೆಯನ್ನು ಸ್ಥಗಿತಗೊಳಿಸಲು ಹಾಗೂ ಕಡಲ ತೀರದಲ್ಲಿ ಇರುವ ತಮ್ಮ ಟಿಕೇಟ್ ಕೌಂಟರ್, ತಂಪು ಪಾನೀಯ ಅಂಗಡಿ, ಜಲ ಸಾಹಸ ಕ್ರೀಡೆ ಉಪಕರಣಗಳನ್ನು ಕಡಲತೀರದಿಂದ ತೆರವುಗೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.