ಮುಂಡಗೋಡ: ಸರಕಾರಿ ಮರಮಟ್ಟು ಸಂಗ್ರಹಾಲಯದಿಂದ ಲಾರಿಯಲ್ಲಿ ಸಾಗವಾನಿ ನಾಟಾ ತುಂಬಿಸಿ ಸಾಗಾಟಿಸುತ್ತಿರುವಾಗ ಶಿರಸಿ ಎಕ್ಕಂಬಿ ತನಿಖಾ ಗೇಟ್ ಬಳಿ ಸಿಕ್ಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರನ್ನು ಸೇವೆಯಿಂದ ಅಮಾನತ್ ಮಾಡಲಾಗಿದೆ.
ಅಕ್ರಮವಾಗಿ ಸಾಗವಾನಿ ನಾಟಾ ಸಾಗಿಸುತ್ತಿದ್ದ ಪ್ರಕರಣ ದಲ್ಲಿ ಸಾಮಗ್ರಿಗಳ ಪರಿಶೀಲನೆ ಮತ್ತು ಆರೋಪದ ಸಮರ್ಥನೆಗೆ ಮೇಲ್ನೋಟದ ಸಾಕ್ಷ್ಯವಿದೆ ಎಂಬುದು ಪರಾಮರ್ಶೆಯಿಂದ ಮನದಟ್ಟಾಗಿರುವುದರಿಂದ ಮುಂಡಗೋಡ ಸರಕಾರಿ ಮರಮಟ್ಟು ಸಂಗ್ರಹಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಉಪ ವಲಯ ಅರಣ್ಯಾಧಿಕಾರಿ ಹಾಗೂ
ಮೋಜಣಿದಾರರಾದ ಸುರೇಶ ವಿ.ವಡ್ಡರ್, ಮಾರುತಿ ಗ.ಸೋರಗಾಂವಿ, ಮಹೇಶ ಎಮ್. ಬೋರಕರ್, ಹನುಮಂತ ಭೀ, ಬಂಡಿವಡ್ಡರ್, ಗುರುಚಂದ್ರ ಎಮ್. ಬ್ಯಾಳಿಯವರನ್ನು ಸೇವೆಯಿಂದ ಅಮಾನತ್ ಮಾಡಲಾಗಿದೆ ಎಂದು ಕೆನರಾ ವೃತ್ತ ಶಿರಸಿ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿಯೂ ಆಗಿರುವ ಕೆ.ಎ. ವಸಂತ ರೆಡ್ಡಿ ಆದೇಶದಲ್ಲಿ ತಿಳಿಸಿದ್ದಾರೆ.