ಉಡುಪಿ: ಸಿಡಿಲು ಬಡಿದು ಇಬ್ಬರಿಗೆ ಗಾಯ
ಕಾರ್ಕಳದಲ್ಲಿ ಐದು ದನಗಳ ಸಾವು
ಉಡುಪಿ: ಶುಕ್ರವಾರ ಮುಂಜಾವ 3 ಗಂಟೆ ಸುಮಾರಿಗೆ ಬಡಿದ ಸಿಡಿಲಿನಿಂದ ಜಿಲ್ಲೆಯ 3 ತಾಲೂಕುಗಳಲ್ಲೂ ವ್ಯಾಪಕ ಹಾನಿ ಸಂಭವಿಸಿದ್ದು, ಪೇತ್ರಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ಸಿಡಿಲಿನಿಂದ ಐದು ಜೆರ್ಸಿ ದನಗಳು ಸಾವನ್ನಪ್ಪಿವೆ.
ಕಾಂತಾವರ ಗ್ರಾಮದಲ್ಲಿ ಬೇಬಿ ಪೂಜಾರ್ತಿ ಎಂಬ ವರ ಮನೆಯ ಹಟ್ಟಿಗೆ ಸಿಡಿಲು ಬಡಿದು ಈ ಸಂದರ್ಭ ಉಂಟಾದ ಬೆಂಕಿ ಆಕಸ್ಮಿಕದಲ್ಲಿ ಎರಡು ಜೆರ್ಸಿ ದನಗಳು ಸಾವನ್ನಪ್ಪಿದವು. ಇದರಿಂದ 15,000 ರೂ. ನಷ್ಟ ಅಂದಾಜು ಮಾಡಲಾಗಿದೆ.
ಇದೇ ಸುಮಾರಿಗೆ ಅದೇ ಗ್ರಾಮದ ರಾಜೀವಿ ಪೂಜಾರ್ತಿ ಎಂಬವರ ಹಟ್ಟಿಗೂ ಸಿಡಿಲು ಬಡಿದು 3 ಜೆರ್ಸಿ ದನ ಗಳು ಮತಪಟ್ಟು 20 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಕಾರ್ಕಳ ತಹಶೀಲ್ದಾರರು ತಿಳಿಸಿದ್ದಾರೆ.
ಉಡುಪಿ ತಾಲೂಕಿನ ಪೇತ್ರಿಯಲ್ಲಿ ವೆಂಕಟ ಮರಕಾಲ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ಗೋಡೆ ಹಾಗೂ ವಿದ್ಯುತ್ ಉಪಕರಣಗಳಿಗೆ ಭಾಗಶ: ಹಾನಿ ಯಾಗಿದೆ. ಮನೆಯಲ್ಲಿದ್ದ ಇಬ್ಬರಿಗೆ ಸಿಡಿಲಿನಿಂದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಬಿಡುಗಡೆಗೊಂಡಿದ್ದಾರೆ. ಮನೆಗೆ 12 ಸಾವಿರ ರೂ. ಅಂದಾಜು ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಪಕ್ಕದ ಚೇರ್ಕಾಡಿ ಗ್ರಾಮದ ಗರಡಿಬೆಟ್ಟು ಎಂಬಲ್ಲಿ ನಾರಾಯಣ ಮಡಿವಾಳರ ವಾಸ್ತವ್ಯದ ಮನೆಗೆ ಸಿಡಿಲು ಬಡಿದುದರಿಂದ 8 ಸಾವಿರ ರೂ.ಗಳ ನಷ್ಟ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕಿನ ನಾಡ ಗ್ರಾಮದ ಬೆಮಲಗುಡ್ಡೆಯ ಸದಾಶಿವ ಹೆಬ್ಬಾರ್ ಎಂಬವರ ಮನೆಗೆ ಸಿಡಿಲು ಬಡಿದು ಹೆಂಚು ಹಾಗೂ ಪಕ್ಕಾಸಿಗಳು ಹಾನಿಗೊಂಡಿವೆ. ಇದರಿಂದ 8 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಕುಂದಾಪುರ ತಹಶೀಲ್ದಾರ್ ತಿಳಿಸಿದ್ದಾರೆ.ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗೆ 8 ಗಂಟೆಯವರೆಗೆ ಉಡುಪಿಯಲ್ಲಿ 0.80ಮಿ.ಮೀ, ಕುಂದಾಪುರದಲ್ಲಿ 5.40ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ ಮಳೆಗಾಲದ ವಾತಾವರಣ ಕಂಡುಬಂದಿದೆ.
40.60 ಲಕ್ಷ ರೂ. ನಷ್ಟ
ಎ.1ರಿಂದ ಇಂದಿನವರೆಗೆ ಮಳೆ-ಗಾಳಿ ಸೇರಿದಂತೆ ಪ್ರಾಕತಿಕ ವಿಕೋಪದಿಂದ ಉಡುಪಿ ಜಿಲ್ಲೆಯಲ್ಲಿ ಒಟ್ಟು 40.60 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಿಂದ ತಿಳಿದುಬಂದಿದೆ. ಇದರಲ್ಲಿ ಉಡುಪಿ ತಾಲೂಕಿನಲ್ಲಿ 25.08 ಲಕ್ಷ ರೂ., ಕುಂದಾಪುರ ತಾಲೂಕಿನಲ್ಲಿ 3.24 ಲಕ್ಷ ರೂ. ಹಾಗೂ ಕಾರ್ಕಳ ತಾಲೂಕಿನಲ್ಲಿ 12.28 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.
ಒಟ್ಟು ನಷ್ಟದಲ್ಲಿ ಕಂದಾಯ ಇಲಾಖೆ ಗಾದ ನಷ್ಟ 32.81 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದ್ದರೆ, ಮೆಸ್ಕಾಂ ಇಲಾಖೆಗೆ 7.79 ಲಕ್ಷ ರೂ.ಗಳೆಂದು ಅಂದಾಜು ಮಾಡಲಾಗಿದೆ.
ಕಂದಾಯ ಇಲಾಖೆಗೆ ಉಡುಪಿ ತಾಲೂಕಿನಲ್ಲಿ ಒಟ್ಟು 255 ಪ್ರಕರಣಗಳಲ್ಲಿ ಅಂದಾಜು 18.32 ಲಕ್ಷ ರೂ. ಹಾನಿ ಸಂಭ ವಿಸಿದ್ದರೆ, ಕುಂದಾಪುರ ತಾಲೂಕಿನಲ್ಲಿ 22 ಪ್ರಕರಣಗಳಲ್ಲಿ 3.11 ಲಕ್ಷ ರೂ. ಹಾಗೂ ಕಾರ್ಕಳ ತಾಲೂಕಿನಲ್ಲಿ 135 ಪ್ರಕರಣಗಳಲ್ಲಿ 11.38 ಲಕ್ಷ ರೂ. ನಷ್ಟವಾಗಿದೆ. ಒಟ್ಟಾರೆ ಯಾಗಿ 412 ಪ್ರಕರಣಗಳಲ್ಲಿ 32.81 ಲಕ್ಷ ರೂ.ಹಾನಿಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೆಸ್ಕಾಂ ಇಲಾಖೆಗೆ ಉಡುಪಿ ತಾಲೂಕಿ ನಲ್ಲಿ 163 ವಿದ್ಯುತ್ ಕಂಬ, ಎಂಟು ಪರಿವರ್ತಕಗಳಿಗೆ ಹಾನಿಯಾಗಿದ್ದು, 4.65 ಕಿ.ಮೀ. ಉದ್ದದ ವಿದ್ಯುತ್ ಮಾರ್ಗಕ್ಕೂ ಹಾನಿ ಸಂಭವಿಸಿದೆ. ಇದರಿಂದ 6.76 ಲಕ್ಷ ರೂ. ಹಾನಿಯಾಗಿದೆ.
ಕುಂದಾಪುರದಲ್ಲಿ ನಾಲ್ಕು ವಿದ್ಯುತ್ ಕಂಬಗಳಿಗೆ ಹಾನಿಯಾದರೆ, ಕಾರ್ಕಳ ತಾಲೂಕಿನಲ್ಲಿ ಎರಡು ಪರಿವರ್ತಕಗಳು ಹಾಗೂ 24 ಕಂಬಗಳಿಗೆ ಹಾನಿಯಾಗಿದೆ ಎಂದು ಮೆಸ್ಕಾಂ ತಿಳಿಸಿದೆ.