ಬಂಟ್ವಾಳ, ಏಪ್ರಿಲ್ ೨೪: ವಿಟ್ಲ ಸಮೀಪದ ಪೆರಾಜೆ ಗ್ರಾಮದ ಗಡಿಯಾರದ ಕಾನೂನು ಮಾಹಿತಿ ಕೇಂದ್ರದಲ್ಲಿ ಶುಕ್ರವಾರ ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಅವರ ೧೨೦ನೇ ಜನ್ಮದಿನಾಚರಣಾ ಕಾರ್ಯಕ್ರಮವನ್ನು ದ.ಕ ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಮಿತ್ರ ಹೆರಾಜೆ ಉದ್ಘಾಟಿಸಿದರು.
ದೇಶದ ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮಹಾ ಮಾನವತಾವಾದಿ ಹಾಗೂ ಸಮಾನತಾವಾದಿಯಾಗಿದ್ದಾರೆ. ಅವರ ಜನ್ಮ ದಿನಾಚರಣೆ ದೇಶದೆಲ್ಲೆಡೇ ಅರ್ಥಪೂರ್ಣವಾಗಿ ಆಚರಣೆಯಾಗಬೇಕು ಎಂದು ದ.ಕ ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಮಿತ್ರ ಹೆರಾಜೆ ಹೇಳಿದರು.
ಅವರು ಶುಕ್ರವಾರ ವಿಟ್ಲ ಸಮೀಪದ ಪೆರಾಜೆ ಗ್ರಾಮದ ಗಡಿಯಾರದ ಕಾನೂನು ಮಾಹಿತಿ ಕೇಂದ್ರದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಅವರ ೧೨೦ನೇ ಜನ್ಮದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಗರಿಕ ಹಕ್ಕು ಮತ್ತು ಕಾನೂನನ್ನು ರೂಪಿಸಿದ ಅಂಬೇಡ್ಕರ್ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ತಾರತಮ್ಯ, ಅಸ್ಪಶ್ಯತೆಯನ್ನು ತೊಲಗಿಸಿ ದಲಿತರು, ಶೋಷಿತರು, ಅಲ್ಪಸಂಖ್ಯಾತರು ಹಾಗೂ ಸ್ತ್ರೀಯರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ತಮ್ಮ ಬದುಕನ್ನೇ ಮುಡಿಪಾಗಿಟ್ಟರು ಎಂದು ಪುತ್ತೂರು ನಗರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಕೆ. ತಿಳಿಸಿದರು.
ದೀನರ ಬದುಕಿಗೆ ಬೆಳಕಾದ ಅಂಬೇಡ್ಕರ್ ಜನ್ಮದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಬೇಕೆಂದು ನಿವೃತ್ತ ಹಿರಿಯ ಅಂಚೆ ನಿರೀಕ್ಷಕ ಎಂ.ಎನ್.ನಾಯಕ್ ಅಭಿಪ್ರಾಯ ಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಸಾಮಾಜಿಕ ಕಾರ್ಯಕರ್ತ ಪುಷ್ಪರಾಜ ಹೆಗ್ಡೆ ವಹಿಸಿದ್ದರು.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪುರುಷೋತ್ತಮ ಸಿ.ಆರ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಶರತ್ಕುಮಾರ್, ವಿಟ್ಲ ಪೊಲೀಸ್ ಉಪ ಅಧೀಕ್ಷಕ ಸವಿತ್ರ ತೇಜ, ತಾಲೂಕು ಪಂಚಾಯತ್ ಸದಸ್ಯ ಕೆ.ಕುಶಾಲಪ್ಪ ಗೌಡ, ಸಾಹಿತಿ, ಜಿಲ್ಲಾ ಬೈರ ಸಮಾಜ ಸಂಘದ ಕಾರ್ಯದರ್ಶಿ ಕೊರಗಪ್ಪ ಸಿಂಗಾರಕೋಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ. ಸಂಘಟಕ ಗೋಪಾಲ ಕಾಡುಮಠ, ದಲಿತ ಮುಖಂಡರಾದ ನೀಲಯ್ಯ ಏಮಾಜೆ, ರಾಜೀವ ವಿಟ್ಲ, ಪೂವಪ್ಪ ಮುಂಡಾಳ, ಶಶಿಧರ ಕಾಡುಮಠ ಉಪಸ್ಥಿತರಿದ್ದರು.