ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಾಧ್ಯಮ ಅಕಾಡೆಮಿಯಲ್ಲಿ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿ ಸ್ಥಾಪನೆ

ಮಾಧ್ಯಮ ಅಕಾಡೆಮಿಯಲ್ಲಿ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿ ಸ್ಥಾಪನೆ

Thu, 19 Jan 2023 00:00:43  Office Staff   SOnews

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಕೆಯುಡಬ್ಲ್ಯೂಜೆ ದತ್ತಿ ನಿಧಿಯನ್ನು ಸ್ಥಾಪನೆ ಮಾಡಲಾಗಿದೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಒಂದೂವರೆ ಲಕ್ಷ ರೂ ಚೆಕ್ ನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮತ್ತು ಕಾರ್ಯದರ್ಶಿ ರೂಪ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ತಗಡೂರು, ಎಂಬತ್ತರ ದಶಕದಲ್ಲಿ ಕೆಯುಡಬ್ಲ್ಯೂಜೆ ಹೋರಾಟದ ಫಲವಾಗಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ, ಪತ್ರಿಕಾ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತು. ಅರ್ಜುನ್ ದೇವ್ ಅವರು ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಪತ್ರಿಕಾ ಅಕಾಡೆಮಿಯನ್ನು ಸಮಗ್ರ ಮುನ್ನೋಟದಿಂದ ಮಾಧ್ಯಮ ಅಕಾಡೆಮಿ ಎಂದು ಬದಲಿಸಲಾಯಿತು. ಅಕಾಡೆಮಿ ಜೊತೆಗೆ ಕೆಯುಡಬ್ಲ್ಯೂಜೆ ಅವಿನಾಭಾವ ಸಂಬಂಧ ಹೊಂದಿದೆ. ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಯುಡಬ್ಲ್ಯೂಜೆ ದತ್ತಿ ನಿಧಿಯನ್ನು ಸ್ಥಾಪನೆ ಮಾಡಲಾಗಿದೆ ಎಂದರು.

ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಅಕಾಡೆಮಿ ಹುಟ್ಟಿಗೆ ಕಾರಣವಾದ ಕೆಯುಡಬ್ಲ್ಯೂಜೆ,
ಮಾಧ್ಯಮ ಅಕಾಡೆಮಿಯಲ್ಲಿ ದತ್ತಿ ನಿಧಿ ಸ್ಥಾಪನೆ ಮಾಡಿರುವುದು ಅಭಿಮಾನದ ಸಂಗತಿ. ಪ್ರತಿ ವರ್ಷ ವಾರ್ಷಿಕ ಪ್ರಶಸ್ತಿ ಸಂದರ್ಭದಲ್ಲಿ ಪ್ರತಿಭಾನ್ವಿತ ಹಿರಿಯ ಪತ್ರಕರ್ತರೊಬ್ಬರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದರು.

ಈ ರೀತಿಯಲ್ಲಿ ಸರ್ವ ಸಮ್ಮತವಾದ ತೀರ್ಮಾನ ತೆಗೆದುಕೊಂಡ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ಆಡಳಿತ ಮಂಡಳಿಯನ್ನು ಅಭಿನಂದಿಸುತ್ತೇನೆ ಎಂದರು.
ಅಕಾಡೆಮಿ ಕಾರ್ಯದರ್ಶಿ ರೂಪ ಮಾತನಾಡಿ, ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಾದ ಕೆಯುಡಬ್ಲ್ಯೂಜೆ ಅಕಾಡೆಮಿಯಲ್ಲಿ ಪ್ರಶಸ್ತಿ ಸ್ಥಾಪನೆ ಮಾಡಿರುವುದಕ್ಕೆ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.

ಅಕಾಡೆಮಿ ಸದಸ್ಯರಾದ ಪಬ್ಲಿಕ್ ಟಿವಿ ಯ ಬದ್ರುದ್ದೀನ್, ಶಿವಕುಮಾರ್ ಬೆಳ್ಳಿತಟ್ಟೆ ಮಾತನಾಡಿ, ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವಾಗುವ ಮೂಲಕ ಕೆಯುಡಬ್ಲ್ಯೂಜೆ ಇತಿಹಾಸನಕ್ಕೆ ಹೊಸ ದಿಕ್ಕು ತೋರಿಸಿ, ಹೊಸ ಭಾಷ್ಯ ಬರೆದ ಹೆಗ್ಗಳಿಕೆ ತಗಡೂರು ಅವರದ್ದು. ಇದೊಂದು ನಿರ್ಧಾರ ಎರಡೂ ಸಂಸ್ಥೆಗಳ ನಡುವೆ ಹೊಸ ಸಂಪ್ರದಾಯ ಹುಟ್ಟುಹಾಕಿದೆ ಎಂದರು.

ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಸೋಮಶೇಖರ ಕೆರಗೋಡು, ಖಜಾಂಚಿ ವಾಸುದೇವ ಹೊಳ್ಳ ಮಾತನಾಡಿದರು.
ರಾಜ್ಯ ಸಮಿತಿಯ ಸದಸ್ಯ ದೇವರಾಜ್‌ ಮತ್ತಿತರರು ಹಾಜರಿದ್ದರು.


Share: