ಬೆಂಗಳೂರು: ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ರಾಜಕೀಯ ಉಳಿವಿಗಾಗಿ ಭಾಷೆ ಅಥವಾ ಗಡಿ ವಿವಾದವನ್ನು ಬಳಸಿಕೊಳ್ಳಬೇಡಿ ಎಂದು ಒತ್ತಾಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನೆರೆಯ ರಾಜ್ಯಕ್ಕೆ ಕರ್ನಾಟಕ ತನ್ನ ಒಂದು ಇಂಚು ಭೂಮಿಯನ್ನು ಸಹ ಕೊಡುವುದಿಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಕರ್ನಾಟಕದ ಗಡಿ ವಿಚಾರದ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮ ಒಂದಿಂಚೂ ಜಾಗವನ್ನೂ ಬಿಟ್ಟು ಕೊಡುವುದಿಲ್ಲ. ಮಹಾರಾಷ್ಟ್ರದಲ್ಲಿ ರಾಜಕಾರಣ ಯಾವಾಗ ಇಕ್ಕಟ್ಟಿಗೆ ಸಿಲುಕುತ್ತದೋ ಆಗ ಕರ್ನಾಟಕದ ಗಡಿ ವಿಚಾರದ ಬಗ್ಗೆ ಅವರು ಮಾತನಾಡುತ್ತಾರೆ ಎಂದರು.
ಕನ್ನಡ ಮಾತನಾಡುವ ಪ್ರದೇಶಗಳು ಮಹಾರಾಷ್ಟ್ರದಲ್ಲೂ ಇವೆ. ಅವುಗಳನ್ನು ಹೇಗೆ ತೆಗೆದುಕೊಳ್ಳಬೇಕು ಅಂತ ನಾವು ಯೋಚಿಸುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ, ಅಜಿತ್ ಪವಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಗಡಿ ವಿಚಾರದಲ್ಲಿ ಕರ್ನಾಟಕದ ನಿಲುವು ಸ್ಪಷ್ಟವಾಗಿದ್ದು, ನಾವು ಯಾವುದಕ್ಕೂ ಮಣಿಯುವುದಿಲ್ಲ. ನಮ್ಮ ನಿರ್ಧಾರಗಳಿಗೆ ನಾವು ದೃಢವಾಗಿ ನಿಲ್ಲುತ್ತೇವೆ ಎಂಬುದು ಅವರಿಗೂ(ಮಹಾರಾಷ್ಟ್ರ) ತಿಳಿದಿದೆ. ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ರಾಜಕೀಯ ಉಳಿವಿಗಾಗಿ ಭಾಷೆ ಅಥವಾ ಗಡಿ ಸಮಸ್ಯೆಯನ್ನು ಬಳಸಬೇಡಿ ಎಂದು ನಾನು ಬಲವಾಗಿ ಒತ್ತಾಯಿಸುತ್ತೇನೆ" ಎಂದು ಬೊಮ್ಮಾಯಿ ಹೇಳಿದ್ದಾರೆ.