ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರೀಕರ ಆದ್ಯ ಕರ್ತವ್ಯ: ನಾಗಣ್ಣ ಗೌಡ

ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರೀಕರ ಆದ್ಯ ಕರ್ತವ್ಯ: ನಾಗಣ್ಣ ಗೌಡ

Sun, 08 Jan 2023 20:18:25  Office Staff   SO News

ಉಡುಪಿ : ಬಾಲ್ಯವಸ್ಥೆಯಲ್ಲಿಯೇ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಿ, ಶಿಕ್ಷಣ ನೀಡುವುದು ಸೇರಿದಂತೆ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ , ಮಕ್ಕಳ ಹಕ್ಕುಗಳನ್ನು ಅನುಷ್ಠಾನಗೊಳಿಸಿ, ಅವರುಗಳನ್ನು ಭವಿಷ್ಯದ ಸತ್ಪ್ರಜೆಗಳನ್ನಾಗಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಹೇಳಿದರು.

 ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಆರ್.ಟಿ.ಇ-2009, ಬಾಲ ನ್ಯಾಯ ಮಂಡಳಿ( ಮಕ್ಕಳ ಪಾಲನೆ ಪೋಷಣೆ) ಕಾಯ್ದೆ-2015 ಹಾಗೂ ಪೋಕ್ಸೋ ಕಾಯ್ದೆ-2012 ಅನುಷ್ಠಾನ ಕುರಿತು ಭಾಗೀದಾರ ಇಲಾಖೆಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವ ಉದ್ದೇಶದಿಂದ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ. ಇವುಗಳ ಅನುಷ್ಠಾನ ಸಮರ್ಪಕವಾಗಿ ಆದಲ್ಲಿ ಮಾತ್ರ ಮಕ್ಕಳ ವಿಕಾಸ ಉತ್ತಮಗೊಳ್ಳುವುದರೊಂದಿಗೆ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಕೇಳಿ ಬರುತ್ತಿವೆ, ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವುದರ ಜೊತೆಗೆ ಶಿಕ್ಷಣ ಒದಗಿಸುವ ಬಗ್ಗೆ ವಿಶೇಷ ಒತ್ತು ನೀಡಬೇಕು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಜನರ ಸಹಭಾಗಿತ್ವ ಅಷ್ಠೆ ಮಹತ್ವದಾಗಿದೆ ಎಂದರು.

ಕೋವಿಡ್ ಸಾಂಕ್ರಾಮಿಕ ರೋಗದ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಗಳಲ್ಲಿ ಶಿಕ್ಷಣ ನೀಡುವುದು ಅನಿವಾರ್ಯವಾಗಿತ್ತು ಆದರೆ ಮಕ್ಕಳು ನಂತರದ ದಿನಗಳಲ್ಲಿಯೂ ಅದಕ್ಕೆ ದಾಸರಾಗಿದ್ದಾರೆ, ಅವರನ್ನು ಇದರಿಂದ ಹೊರತರಲು ಮುಂದಾಗಬೇಕಾಗಿದೆ. ಮಕ್ಕಳಿಗೆ ದಂಡಿಸಿ ಸರಿದಾರಿಗೆ ತರುವ ಬದಲು ಮನಪರಿವರ್ತನೆ ಮಾಡುವ ಮೂಲಕ ಸರಿದಾರಿಗೆ ತರಬೇಕು ಎಂದರು.

ಆರ್ಥಿಕವಾಗಿ ಸಬಲರಾಗಿರುವವರು ಪೌಷ್ಠಿಕ ಆಹಾರ ಸೇವಿಸದೇ , ಉಳ್ಳದೇ ಇರುವವರು ಪೌಷ್ಠಿಕ ಆಹಾರದ ಕೊರತೆಯಿಂದಾಗಿ ರಕ್ತ ಹೀನತೆ ಹೊಂದುತ್ತಾರೆ. ಇಂತಹ ಹೆಣ್ಣುಮಕ್ಕಳು ಗರ್ಭಿಣಿಯರಾದಾಗ ಆರೋಗ್ಯವಂತ ಮಗುವನ್ನು ಜನ್ಮ ನೀಡಲು ಸಾಧ್ಯವಾಗುವುದಿಲ್ಲ ಈ ಬಗ್ಗೆ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯ ಎಂದರು.

 ವಿದ್ಯಾರ್ಥಿ ನಿಲಯಗಳಲ್ಲಿ ಇದ್ದು ವ್ಯಾಸಂಗ ಮಾಡುತ್ತಿರುವ ಮಕ್ಕಳ ಜೊತೆಯಲ್ಲಿನ ಅಲ್ಲಿನ ವಾರ್ಡನ್ ಗಳು ಸ್ನೇಹಪರರಾಗಿರುವ ಜೊತೆಗೆ ಮಕ್ಕಳ ಚಟುವಟಿಕೆ ಹಾಗೂ ಶಿಕ್ಷಣದ ಬಗ್ಗೆ ನಿಗಾ ವಹಿಸಬೇಕು, ಅಸ್ಪತೆಗಳಲ್ಲಿ ಚಿಕಿತ್ಸೆಗೆ ಬರುವ ಗರ್ಭಿಣಿಯರಿಗೆ ಆದ್ಯತೆಯ ಮೇಲೆ ಚಿಕಿತ್ಸೆ ನೀಡಬೇಕು ಮತ್ತು ಆರೋಗ್ಯ ಸಲಹೆಗಾರರನ್ನು ನೇಮಿಸಬೇಕು ಎಂದು ಸಲಹೆ ನೀಡಿದರು.

ಸಮಾಜದ ಅನಿಷ್ಠ ಪದ್ದತಿಗಳಾದ ಬಾಲ್ಯ ವಿವಾಹ , ಬಾಲ ಕಾರ್ಮಿಕ ಪದ್ದತಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಸೂಕ್ತ , ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಧಿಕಾರಿಗಳು ಕ್ರಮವಹಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಎಎಸ್ಪಿ ಸಿದ್ದಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕ ಶಿವಕುಮಾರಯ್ಯ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯ ಶ್ಯಾಮಲಾ ಕುಂದರ್ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Share: