ರಾಯಚೂರು: ಭಾರತ ಸರ್ಕಾರವು ಎಲ್ಲ ಮಕ್ಕಳಿಗೂ ಉತ್ತಮ ಹಾಗೂ ಉಜ್ವಲ ಭವಿಷ್ಯದ ದೃಷ್ಟಿಯಿಂದ ಹಾಗೂ ಹಲವಾರು ದೃಷ್ಟಿಕೋನದಿಂದ ಮಕ್ಕಳನ್ನು ದೇಶದ ಸತ್ಪçಜೆಗಳಾಗುವಂತೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತಮ ಕಾರ್ಯವನ್ನು ಅನುಷ್ಠಾನಗೊಳಿಸುತ್ತಿದ್ದಾರೆಂದು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಹೇಳಿದರು.
ಅವರು ಸೋಮವಾರ ನಗರದ ಜಿಲ್ಲಾ ಪಂಚಾಯತಿಯ ಐ.ಎನ್.ಎಸ್ ಸಭಾಂಗಣದಲ್ಲಿ ಪಿಎಂ ಕೇರ್ ಯೋಜನೆಯಡಿಯಲ್ಲಿ ಅನುಮೋದಿತ ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕುರಿತು ವಿಡಿಯೋ ಕಾನ್ಫರೆನ್ಸ್ ನಡೆಸಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ 0-18 ವರ್ಷ ವಯೋಮಾನದ ಮಕ್ಕಳಿಗೆ ನಿಗದಿಪಡಿಸಿರುವ ನಿಶ್ಚಿತ ಮೊತ್ತವನ್ನು ಅಂಚೆ ಕಚೇರಿಯಲ್ಲಿ ಠೇವಣಿ ಇಡಲಾಗುವುದು. ಈ ಸಂಬಂಧ ಎಲ್ಲಾ ಅನುಮೋದಿತ ಮಕ್ಕಳ ಖಾತೆಯನ್ನು ಅಂಚೆ ಕಚೇರಿಯಲ್ಲಿ ತೆರೆಯಲಾಗಿದೆ ಎಂದರು.
ಅಂಚೆ ಕಚೇರಿಯಲ್ಲಿ ಫಲಾನುಭವಿ ಮತ್ತು ಜಿಲ್ಲಾಧಿಕಾರಿಗಳ ಜಂಟಿ ಖಾತೆಯಲ್ಲಿ ಇಟ್ಟಿರುವ ಇಡಿಗಂಟಿನ ಮೇಲೆ ಲಭ್ಯವಾಗುವ ಬಡ್ಡಿ ಹಣವನ್ನು 18 ವರ್ಷ ಪೂರ್ಣಗೊಂಡ ನಂತರ 23ವಯಸ್ಸಿನವರೆಗೆ ಸೈ-ಫಂಡ್ ರೀತಿಯಲ್ಲಿ ಮಾಹೆಯಾನ ಒದಗಿಸಲಾಗುವುದು ಎಂದು ಹೇಳಿದರು.
ಫಲಾನುಭವಿಗಳು 23ವರ್ಷಕ್ಕೆ ಬಂದಾಗ ಇಡಿಗಂಟಿನ ರೂಪದಲ್ಲಿ .10,00,000/ ರೂ.ಗಳ ಆರ್ಥಿಕ ನೆರವನ್ನು ಅವರುಗಳ ಮುಂದಿನ ಭವಿಷ್ಯದ ಉದ್ದೇಶಕ್ಕಾಗಿ ಕಲ್ಪಿಸುವುದರ ಜೊತೆಗೆ ಫಲಾನುಭವಿಗಳ ವಿದ್ಯಾಭ್ಯಾಸ ಮತ್ತು ಉನ್ನತ ಶಿಕ್ಷಣಕ್ಕೆ ನೆರವು ಒದಗಿಸುವುದು ಹಾಗೂ ಫಲಾನುಭವಿಗಳಿಗೆ 5,00,000ರೂ.ಗಳ ವರೆಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ದೇವದುರ್ಗದ ನಾಲ್ಕು ಮಕ್ಕಳಿಗೆ ಸೌಲಭ್ಯ: ಕೋವಿಡ್ನಿಂದ ತಂದೆ, ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಕೇಂದ್ರದ ಪಿಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಸೌಲಭ್ಯ ಒದಗಿಸಲಾಗುತ್ತದೆ. ಜಿಲ್ಲೆಯ ದೇವದುರ್ಗ ತಾಲೂಕಿನ ನಾಲ್ಕು ಮಕ್ಕಳಿಗೆ ಈ ಯೋಜನೆಯಡಿ ಸಮಗ್ರ ಕಿಟ್ (ಆಂಚೆ ಪಾಸ್ ಪುಸ್ತಕ, ಆಯುಷ್ಮಾನ್ ಕಾರ್ಡ್, ಪ್ರಧಾನಿಯವರಿಂದ ಪತ್ರ, ಪಿಎಂ ಕೇರ್ ಪ್ರಮಾಣ ಪತ್ರ) ಗಳನ್ನು ನಗರದ ಜಿಲ್ಲಾ ಪಂಚಾಯತಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ ಜಹಾರ್ ಖಾನಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಮಂಗಳ ಹೆಗಡೆ, ಜಿಲ್ಲಾ ಮ್ಕಕಳ ಸಂಕ್ಷಣಾಧಿಕಾರಿ ಮನ್ಸೂರ್ ಅಹ್ಮದ್, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಬಸವರಾಜ ಬ್ಯಾಗವಾಟ್ ಸಿಬ್ಬಂದಿಗಳಾದ ಹನುಮೇಶ್, ಕಿರಿಲಿಂಗಪ್ಪ, ಶಿವರಾಜ್, ನರಸಿಂಹ ಸೇರಿದಂತೆ ಇತರರು ಇದ್ದರು.