ಸಕಲೇಶಪುರ, ಡಿಸೆಂಬರ್ ೨೧:ಪಶ್ಚಿಮ ಘಟ್ಟದ ಉಳುವಿಗೆ ನಡೆಸುತ್ತಿರುವ ನಿಮ್ಮ ಚಳವಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಖ್ಯಾತ ಪರಿಸರವಾದಿ ಸುಂದರ್ ಲಾಲ್ ಬಹುಗುಣ ಹೇಳಿದ್ದಾರೆ.
ಸೋಮವಾರ ತಾಲ್ಲೂಕಿನ ಹೊಂಗಡಹಳ್ಳ ಗ್ರಾಮದಲ್ಲಿ ಪಶ್ಚಿಮ ಘಟ್ಟದ ಉಳುವಿಗೆ ಚಳವಳಿ ನಡೆಸುತ್ತಿರುವ ಗ್ರಾಮಸ್ಥರು ಮತ್ತು ಪರಿಸರವಾದಿಗಳೊಂದಿಗೆ ನಡೆದ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಕೃತಿ ನಮ್ಮ ತಾಯಿ ಇದ್ದ ಹಾಗೆ, ಈ ತಾಯಿಯನ್ನು ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ನದಿ, ಬೆಟ್ಟ, ಕಾಡು ಮತ್ತು ಮಣ್ಣನ್ನು ರಕ್ಷಣೆ ಮಾಡುವುದು ಧಾರ್ಮಿಕ ಕೆಲಸ ಇದನ್ನು ಛಲ ಬಿಡದೆ ಮಾಡಬೇಕು. ಈ ಹೋರಾಟದ ದಾರಿಯಲ್ಲಿ ಹಲವಾರು ಸಮಸ್ಸೆಗಳು ಎದುರಾಗುತ್ತವೆ. ಆದರೆ ಹೋರಾಟದ ಕೊನೆಯಲ್ಲಿ ಸತ್ಯಕ್ಕೆ ಜಯ ಸಿಗಲಿದೆ, ಈ ಚಳವಳಿಯ ಜೊತೆ ನಾನಿದ್ದೇನೆ ಎಂದು ಘೋಷಿಸಿದರು.
ಸಮಾಜದ ರಕ್ಷಣೆಗೆ ಬುದ್ಧ ಕಾಡಿಗೆ ಹೋದ, ಗಾಂದಿ ಗುಂಡಿಗೆ ಬಲಿಯಾದರು ಇಲ್ಲಿಯು ಜಯ ಸಿಕ್ಕಿದ್ದು ನ್ಯಾಯಕ್ಕೆ, ದೇವರು ಮೊದಲು ಕಷ್ಟ ಕೊಡುತ್ತಾನೆ. ಏಕೆಂದರೆ ಹೋರಾಟದ ಹಾದಿಯಲ್ಲಿ ನಮಗೆ ಬದ್ದತೆ, ಪ್ರಾಮಾಣಿಕತೆ ಇದೆಯೇ ಎಂಬುದನ್ನು ಪರೀಕ್ಷಿಸುತ್ತಾನೆ ನಂತರ ಸತ್ಯಕ್ಕೆ ಜಯ ಈ ಬಗ್ಗೆ ಚಿಂತೆ ಬೇಡ ಎಂದರು.
ಹಿಮಾಲಯದಲ್ಲಿ ಮರ ಕಡಿಯುವುದರ ವಿರುದ್ದ ಸತತವಾಗಿ ಎಂಟು ವರ್ಷಗಳ ಕಾಲ ಹೋರಾಟ ನಡೆಯಿತು, ಈ ಚಳವಳಿಯಲ್ಲಿ ಹೆಣ್ಣು ಮಕ್ಕಳು ಸೇರಿದಂತೆ ಎಲ್ಲರು ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ಕೆಲವರನ್ನು ಜೈಲಿಗೆ ಅಟ್ಟಲಾಯಿತು ಆದರೆ ಎಂಟು ವರ್ಷಗಳ ನಂತರ ಹೋರಟಕ್ಕೆ ಜಯ ಸಿಕ್ಕಿತು. ಸರಕಾರಕ್ಕೆ ಇದನ್ನು ಅರಿವು ಮಾಡಿಕೊಡುವುದಕ್ಕೆ ಸಮಯ ಬೇಕಾಗುತ್ತದೆ, ನಾವು ಬೆಂಬಿಡದೆ ಹೋರಾಟ ಮಾಡಬೇಕಾಗುತ್ತದೆ, ಪ್ರಪಂಚದ ಎಲ್ಲಾ ಪ್ರದೇಶದಲ್ಲು ಜನರು ಪ್ರಕೃತಿಯ ಉಳಿವಿಗಾಗಿ ನಮ್ಮಂತೆಯೆ ಹೋರಾಟ ನಡೆಸುತ್ತಿದ್ದಾರೆ ಎಂದರು.
ಪಶ್ಚಿಮ ಘಟ್ಟದ ಉಳುವಿಗೆ ನಡೆಸುತ್ತಿರುವ ನಿಮ್ಮ ಚಳವಳಿಗೆ ಎಲ್ಲರ ಬೆಂಬಲವಿದೆ ಹೆದರಬೇಡಿ ನದಿ, ಬೆಟ್ಟ, ಕಾಡಿನಲ್ಲಿ ದೇವರಿದ್ದಾನೆ ಅದನ್ನು ರಕ್ಷಣೆ ಮಾಡುವುದು ಅನಿವಾರ್ಯವಾಗಿದೆ ಇದು ದೇವರ ಕೆಲಸ ಎಂದರು.
ಈ ಸಂದರ್ಭದಲ್ಲಿ ಸುಂದರ ಲಾಲ್ ಬಹುಗುಣ ಅವರ ಪತ್ನಿ ವಿಮಲ, ಪುತ್ರ, ಅಪ್ಪಿಕೊ ಚಳವಳಿಯ ಪಾಂಡುರಂಗ ಹೆಗಡೆ, ಇಲ್ಲಿಯ ಪರಿಸರವಾದಿಗಳಾದ ಕಿಶೋರ್ ಕುಮರ್, ಕಸಾಪ ಅಧ್ಯಕ್ಷ ಪ್ರಸಾದ್ ರಕ್ಷಿದಿ, ನಾಗರೀಕ ಸಮಿತಿಯ ಸಾ. ಸು ವಿಶ್ವನಾಥ್, ಹೊಂಗಡಹಳ್ಳ ಚಂದ್ರು ಮುಂತಾದವರು ಇದ್ದರು.