ಹುಡುಕಾಟವೇ ವಿಜ್ಞಾನ :
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಹೆಚ್.ಆರ್.ರಾಮಕೃಷ್ಣರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ರಾಜ್ಯದಲ್ಲಿ ದಿನಂಪ್ರತಿ ಅವೈಜ್ಞಾನಿಕ ಮತ್ತು ಪರಂಪರೆಯಲ್ಲದವನ್ನು ಸೇರಿಸಿ ಜನತೆಯನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ರಾಜಕಾರಣಿಗಳು, ಮಾಧ್ಯಮಗಳು, ಜ್ಯೋತಿಷಿಗಳು ಪೌರೋಹಿತ ಶಾಹಿಗಳು ಮೌಢ್ಯತೆಗಳನ್ನು ಜೀವಂತವಾಗಿರಿಸುವ ಹುನ್ನಾರ ನಡೆಸಿರುವುದು ವಿಷಾದನೀಯವೆಂದರು.
1609 ಕ್ಕಿಂತಲೂ ಮುಂಚೆ ಆಕಾಶಕಾಯಗಳನ್ನು ಬರಿಗಣ್ಣಿನಿಂದ ನೋಡಲಾಗುತ್ತಿತ್ತು. ಗೆಲಿಲಿಯೋ ಎಂಬ ವಿಜ್ಞಾನಿ ದೂರದರ್ಶಕವನ್ನು ಸಂಶೋಧಿಸಿ ಬರಿಗಣ್ಣಿನಿಂದ ಖಗೋಳ ವೀಕ್ಷಣೆ ಮಾಡುವುದನ್ನು ತಪ್ಪಿಸಿ ಹಲವಾರು ಪ್ರಯೋಗ ನಡೆಸಿ `ಶುಕ್ರ' ಗ್ರಹ ಹೊಳೆಯುತ್ತಿದೆ ಎಂದರು. 1610 ರಲ್ಲಿ ದೂರದರ್ಶಕವನ್ನು ಗುರುಗ್ರಹಕ್ಕೆ ತಿರುಗಿಸಿ ಅಲ್ಲಿ ನಾಲ್ಕು ಚಂದ್ರಗಳನ್ನು ತೋರಿಸಿದ. ಹೀಗೆ ಹಲವಾರು ಆವಿಷ್ಕಾರ ನಡೆಸಿದ ಗೆಲಿಲಿಯೋನನ್ನು `ಆಧುನಿಕ ವಿಜ್ಞಾನದ ಪಿತಾಮಹ' ಎಂದು ಕರೆಯಲಾಗಿದೆ. ವಿದ್ಯಾರ್ಥಿಗಳೆಲ್ಲಾ ಗೆಲಿಲಿಯೋನ ಸಿದ್ದಾಂತಗಳನ್ನು ಸರಿಯಾಗಿ ಅರ್ಥೈಸಿಕೊಂಡು ಎಲ್ಲರಿಗೂ ವೈಜ್ಞಾನಿಕ ತಿಳುವಳಿಕೆ ನೀಡಬೇಕು ಎಂದರು.
ಇದು ಪುಸ್ತಕವಲ್ಲ, ವೈಜ್ಞಾನಿಕ ಹೋರಾಟದ ಅಸ್ತ್ರ
ಖ್ಯಾತ ವಿಜ್ಞಾನಿ ಡಾ.ಎಂ.ಜಿ.ನರಸಿಂನ್ ಅವರು ಎಸ್.ಎಫ್.ಐ ಸಂಸ್ಥಾಪಕ ಮುಖಂಡರು, ಮಾಜಿ ಶಾಸಕರು ಆದ ಜಿ.ವಿ.ಶ್ರೀರಾಮರೆಡ್ಡಿಯವರು ಬರೆದ `ಸೃಷ್ಟಿಯೋ ವಿಕಾಸವೋ?' ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಈ ಕೃತಿಯು ಮೌಢ್ಯ ಪರಂಪರೆಗೆ ಸೆಡ್ಡು ಹೊಡೆದು ವೈಜ್ಞಾನಿಕ ಹೋರಾಟವನ್ನು ನಡೆಸುವ ಅಸ್ತ್ರವಾಗಿದೆ. ಮುಖಪುಟ ಮತ್ತು ಶೀರ್ಷಿಕೆಯಲ್ಲಿಯೇ ಸೃಷ್ಟಿ ಮತ್ತು ವಿಕಾಸದ ಮಧ್ಯೆ ವ್ಯತ್ಯಾಸವಿದೆ ಎಂಬುದು ಗೊತ್ತಾಗುತ್ತದೆ. ಪುಸ್ತಕದಲ್ಲಿ ಬಳಸಿರುವ ಭಾಷೆ ಸರಳವಾಗಿದ್ದು ವಸ್ತುನಿಷ್ಟತೆಯಿಂದ ಕೂಡಿದೆ ಎಂದರು.
ಬೈಬಲ್ನಲ್ಲಿದ್ದ ದೈವಾಂಶಗಳ ಬಗ್ಗೆ ಜನ ಹೆಚ್ಚು ಆಕರ್ಷಿತರಾಗಿದ್ದ ಆ ಕಾಲದಲ್ಲಿ ಡಾರ್ವಿನ್ ಹೊಸ ಜೀವಿಗಳ ಸಮೂಹ ಹೇಗೆ ಸೃಷ್ಟಿಯಾಗಿದೆ ಎಂಬುದನ್ನು ಪ್ರಶ್ನಿಸಿಕೊಂಡು ಹುಡುಕಾಟವನ್ನು ಪ್ರಾರಂಭಿಸಿದರು. ನಂತರ ಉತ್ತರವನ್ನು ಕಂಡುಕೊಂಡು ಯಾವುದೇ ಜೀವಿ ತನ್ನಿಂದ ತಾನೇ ಸೃಷ್ಟಿಯಾಗಿಲ್ಲ. ಪ್ರಕೃತಿಯ ಮೂಲಕ ವಿಕಾಸಗೊಂಡಿದೆ. ಡಾರ್ವಿನ್ ಅವರ ಈ ವಿಕಾಸವಾದ ಸಿದ್ಧಾಂತವನ್ನು ಎಸ್ಎಫ್ಐ ರಾಜ್ಯಾದ್ಯಂತ ತಿಳಿಸುತ್ತಿರುವುದು ಸಂತೋಷ ಮತ್ತು ಅಭಿನಂದನಾರ್ಹವಾಗಿದೆ ಎಂದು ನರಸಿಂಹನ್ ತಮ್ಮ ವಿಚಾರಗಳನ್ನು ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು.
ಇಂದಿನ ಸ್ಥಿತಿಯಲ್ಲಿ ವಿಜ್ಞಾನದ ಬೆಳವಣಿಗೆ ಅಗತ್ಯ
ಮಾಜಿ ಶಾಸಕರಾದ ಜಿ.ವಿ.ಶ್ರೀರಾಮರೆಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಮೌಢ್ಯತೆ ಹೆಚ್ಚಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ವಿಜ್ಞಾನದ ಬೆಳವಣಿಗೆ ಅಗತ್ಯವಾಗಿದೆ. ವಿಜ್ಞಾನದ ಬೆಳವಣಿಗೆಗೆ ನೀವು ಶ್ರಮವಹಿಸುತ್ತಿದ್ದರೆ ಇನ್ನೊಂದೆಡೆ ಮೌಢ್ಯತೆಗಳಿಗೆ ಬೇಕಾದ ಎಲ್ಲಾ ಬೆಳವಣಿಗೆಗಳ ಪಿತೂರಿ ನಡೆಯುತ್ತಿದೆ.
ವಿಜ್ಞಾನದಲ್ಲಿಯೂ ಉಳಿಗಮಾನ್ಯ ಪದ್ದತಿ ಕೆಲಸ ಮಾಡುತ್ತಿದೆ. ಅದನ್ನು ಕಿತ್ತೆಸೆಯಬೇಕು. ಈ ದೇಶದ ಅಭಿವೃದ್ಧಿಗೆ ಮೌಢ್ಯತೆಗಳು ಅಡ್ಡಿಯಾಗಿವೆ. ಇದರ ವಿರುದ್ಧ ಹೋರಾಟ ನಡೆಸಬೇಕಿದೆ. ಅದಕ್ಕಾಗಿ ಎಲ್ಲರಿಗೂ ಅರ್ಥವಾಗುವಂತೆ ವಿಜ್ಞಾನವನ್ನು ಸರಳವಾಗಿ ಅರ್ಥ ಮಾಡಿಸಬೇಕಿದೆ. ದೇವರು, ಜಾತಿ, ಧರ್ಮದ ಹೆಸರಲ್ಲಿ ನಡೆಯುತ್ತಿರುವ ಶೋಷಣೆಯನ್ನು ತಡೆಗಟ್ಟಲು ವಿಜ್ಞಾನವನ್ನು ಸರಳವಾಗಿ ತಿಳಿಸಬೇಕಿದೆ. ವಿಜ್ಞಾನ ಎಲ್ಲವಕ್ಕೂ ಉತ್ತರ ಕೊಡುವ ಹಂತಕ್ಕೆ ಬಂದಿಲ್ಲ. ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕೊಡುವ ಸಾಮರ್ಥ್ಯ ವಿಜ್ಞಾನಕ್ಕಿದೆ. ಪ್ರಾಣಿಗಳು, ಯಾರಿಂದಲೂ ಸೃಷ್ಟಿಯಾಗಿಲ್ಲ. ಹಂತ, ಹಂತವಾಗಿ ವಿಕಾಸವಾಗಿವೆ ಎಂಬ ಸತ್ಯವನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡಿ ಎಂದರು.
ವಿರೋಧದ ನಡುವೆಯೂ ಜ್ಯೋತಿಷ್ಯ ಶಾಸ್ತ್ರದ ತೂರಿಕೆ
ಜ್ಯೋತಿಷ್ಯಶಾಸ್ತ್ರ ಮತ್ತು ವೈಜ್ಞಾನಿಕ ಶಿಕ್ಷಣ ಪದ್ಧತಿ ಕುರಿತು ನಡೆದ ಗೋಷ್ಠಿ ವಿಚಾರ ಮಂಡಿಸಿದ ಗಾಂಧಿ ಸೆಂಟರ್ ಆಫ್ ಸೈನ್ಸ್ ಅಂಡ್ ಹ್ಯೂಮನ್ ವಾಲ್ಯೂಸ್ ಬೆಂಗಳೂರಿನ ನಿರ್ದೇಶಕರಾದ ಡಾ.ಎಸ್.ಬಾಲಚಂದ್ರರಾವ್ ಮಾತನಾಡಿ, ವಿ.ವಿ.ಗಳಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಸೇರಿಸಬೇಕು. ಅದಕ್ಕಾಗಿಯೇ ಪ್ರತ್ಯೇಕ ವಿ.ವಿ. ರಚಿಸಬೇಕು ಎಂದು ಎನ್.ಡಿ.ಎ ಸರಕಾರ ಸಾಕಷ್ಟು ಪ್ರಯತ್ನ ನಡೆಸಿತು. ವ್ಯಾಪಕವಾದ ಹೋರಾಟದ ಪರಿಣಾಮ ಅದು ಜಾರಿಯಾಗಲಿಲ್ಲ. ದುರಂತವೆಂಬಂತೆ ಕರ್ನಾಟಕ ಸರಕಾರ ಈಗ ಇದರತ್ತ ಮುಖ ಮಾಡುತ್ತಿದೆ. ಶಿಕ್ಷಣದಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಲು ವಿದ್ಯಾರ್ಥಿ ಚಳುವಳಿಗಳು ಬಲಗೊಳ್ಳಬೇಕಿದೆ.
ಯಾವುದೇ ಗ್ರಹ, ನಕ್ಷತ್ರಗಳು ವ್ಯಕ್ತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಜಾತಕ ನೋಡಿ ಮದುವೆ ಮಾಡುವುದು, ಶಾಂತಿಗಾಗಿ ಹೋಮ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಜ್ಯೋತಿಷ್ಯ ಶಾಸ್ತ್ರದ ಅಂಧಶ್ರದ್ಧೆ ಇಂದು ಇಡೀ ಸಮಾಜವನ್ನು ಕಾಡುತ್ತಿದೆ. ಮಾಧ್ಯಮಗಳು ಅಂಧಶ್ರದ್ಧೆಯನ್ನು ಪ್ರಸಾರ ಮಾಡಿ ಜನರನ್ನು ಭಯಬೀತಿ ಗೊಳಿಸುತ್ತಿದ್ದಾರೆ. ಜ್ಯೋತಿಷ್ಯ ಹೇಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ವಿಷಾದಕರ ಸಂಗತಿ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ ಸರಕಾರ ವಿಜ್ಞಾನವನ್ನು ನಾಶಪಡಿಸಿ ಸಮಾಜವನ್ನು ಹಿಂದಕ್ಕೊಯ್ಯುವ ಹುನ್ನಾರ ನಡೆಸಿದೆ. ಇತಿಹಾಸವನ್ನು ವಿಕೃತಗೊಳಿಸಿ ಕೋಮುವಾದೀಕರಣದ ವಿಚಾರಗಳನ್ನು ಪಠ್ಯಗಳಲ್ಲಿ ತುರುಕುತ್ತಿದ್ದಾರೆ. ವೈಜ್ಞಾನಿಕ ಮನೋಭಾವ ಮೂಡಿಸುವ ಶಿಕ್ಷಣ ಜಾರಿಯಾಗಬೇಕಿದೆ. ಏಕೆಂದರೆ ವಿಜ್ಞಾನ ಪ್ರತಿಯೊಂದು ಕ್ಷೇತ್ರಕ್ಕೂ ಅವಶ್ಯವಾಗಿದೆ.
ವಿಜ್ಞಾನಿಗಳು ಕೂಡಾ ರಾಕೆಟ್ ಉಡಾವಣೆ ಮಾಡುವಾಗ ಜ್ಯೋತಿಷ್ಯ ಕೇಳುವಂತಾಗಿದೆ. ಜ್ಯೋತಿಷ್ಯಗಳು ದೇವಸ್ಥಾನದ ಸಂಪಾದನೆಗೆ ದುಡಿಯುತ್ತಿದ್ದಾರೆ. ಆರೋಗ್ಯ ವಲಯದಲ್ಲಿಯೂ ಜ್ಯೋತಿಷ್ಯಶಾಸ್ತ್ರ ವ್ಯಾಪಕವಾದ ಪರಿಣಾಮ ಬೀರಿದೆ. ಮೌಢ್ಯತೆಯನ್ನು ತುಂಬುವ ಜ್ಯೋತಿಷ್ಯವನ್ನು ಶಾಲಾ, ಕಾಲೇಜುಗಳಲ್ಲಿ ಅಳವಡಿಸುವ ಪ್ರಯತ್ನ ನಡೆಯುತ್ತಿದೆ. ಇದರ ವಿರುದ್ಧ ನಿಮ್ಮ ಚಳುವಳಿ ಪ್ರಬಲಗೊಳ್ಳಬೇಕು ಎಂದು ಜನಶಕ್ತಿ ವಾರಪತ್ರಿಕೆಯ ಸಂಪಾದಕರಾದ ಎಸ್.ವೈ.ಗುರುಶಾಂತ್ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಖ್ಯಾತ ವಿಮರ್ಶಕ ಪ್ರೊ. ಕಿ.ರಂ.ನಾಗರಾಜ ಮಾತನಾಡಿ ಜ್ಯೋತಿಷ್ಯವು ಒಂದು ಮಾರುಕಟ್ಟೆಯ ವಿಷಯವಾಗಿದೆ. ರಾಜಕಾರಣಿಗಳು, ಉದ್ಯಮಗಳು, ಬಂಡವಾಳಿಗರು ಜ್ಯೋತಿಷ್ಯಕ್ಕೆ ದುಂಬಾಲು ಬಿದ್ದಿದ್ದಾರೆ. ಸರಕಾರಿ ಅಧಿಕಾರಿಗಳು ಇದನ್ನು ರಕ್ಷಿಸುತ್ತಿದ್ದಾರೆ. ಸರಕಾರಿ ಖರ್ಚುಗಳಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಚಾರ ನಡೆಯುತ್ತಿದೆ.
ವಿಜ್ಞಾನಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಹೆಚ್ಚು ಹೆಚ್ಚು ಓದಬೇಕು. ಶಿಕ್ಷಕರಲ್ಲಿ ವಿಜ್ಞಾನ ಅಳವಡಿಸಲು ಎಲ್ಲರನ್ನು ವೈಜ್ಞಾನಿಕತೆಯೆಡೆಗೆ ಕೊಂಡೊಯ್ಯಲು ಎಸ್ಎಫ್ಐ ತನ್ನ ಚಳುವಳಿಗಳನ್ನು ಪ್ರಬಲಗೊಳಿಸಬೇಕೆಂದರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಎನ್. ಅನಂತ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರಾದ ಹೆಚ್.ಆರ್.ನವೀನ್ ಕುಮಾರ್ ವಹಿಸಿದ್ದರು. ಪ್ರಸಾದ್ ಗಣ್ಯರನ್ನು ಸ್ವಾಗತಿಸಿದರು. ಹುಳ್ಳಿ ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಕ್ರಾಂತಿಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
- ಗುರುರಾಜ ಎಸ್. ದೇಸಾಯಿ, ಕೊಪ್ಪಳ
- ಸೌಜನ್ಯ: ಜನಶಕ್ತಿ