ಕುಂದಾಪುರ, ಮೇ ೩: ೨೫ ವರ್ಷಗಳ ನಂತರ ವಿಶ್ವದಾದ್ಯಂತ ಚದುರಿಹೋಗಿರುವ ಭಂಡಾರ್ಕಾರ್ಸ್ ಕಾಲೇಜಿನ ೮೪-೮೫ರ ಸಾಲಿನ ಬಿ.ಕಾಂ ವಿದ್ಯಾರ್ಥಿಗಳು ’ಸ್ನೇಹ ಸಮ್ಮಿಲನ’ದ ಹೆಸರಿನಲ್ಲಿ ಒಂದೆಡೆ ಸೇರಿರುವುದು ಕಾಲೇಜಿನ ಇತಿಹಾಸದ ಹೊಸ ಪುಟ ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ ಬಣ್ಣಿಸಿದ್ದಾರೆ. ಅವರು ಭಾನುವಾರ ಸ್ಥಳೀಯ ಶೆರೋನ್ ಹೊಟೇಲ್ ಸಭಾಂಗಣದಲ್ಲಿ ’ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾಲೇಜಿನ ಚಟುವಟಿಕೆಗಳಲ್ಲಿ ನಿರಂತರ ಭಾಗವಹಿಸುವುದರ ಮೂಲಕ ಈ ಸಮ್ಮಿಲನದ ಸ್ಫೂರ್ತಿಯನ್ನು ಉಳಿಸಿಕೊಳ್ಳಬೇಕು ಎಂದು ಅವರು ನುಡಿದರು.

ಮುಖ್ಯ ಅತಿಥಿ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ವಿದ್ಯಾರ್ಥಿ ಜೀವನವು ಜಾತಿಮತಗಳನ್ನು ಮೀರಿದ ನಡಿಗೆಯಾಗಿದ್ದು ಆ ಸುಮಧುರ ಕ್ಷಣಗಳು ನಿರಂತರವಾಗಿರಲು ಇಂತಹ ಕಾರ್ಯಕ್ರಮಗಲು ಅಗತ್ಯ ಎಂದು ಹೇಳಿದರು.


ವಿಶ್ರಾಂತ ಉಪನ್ಯಾಸಕ ಮೋಹನದಾಸ ಪೈ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ೨೫ವರ್ಷಗಳ ಹಿಂದೆ ಈ ವಿದ್ಯಾರ್ಥಿಗಳಿಗೆ ಪಾಠ ಹೇಳಿದ ೨೧ ಉಪನ್ಯಾಸಕರು ಮತ್ತು ಬೋಧಕೇತರ ಸಿಬಂದಿಗಳಾದ ಕೆ.ವಿಠಲ. ಮೋಹನ ಶೆಣೈ ಅವರಿಗೆ ಹಾರ್ದಿಕವಾಗಿ ಸನ್ಮಾನಿಸಲಾಯಿತು. ’ಸ್ನೇಹ ಸಮ್ಮಿಲನ’ದ ಸಂಘಟಕರಾದ ಕೃಷ್ಣಾನಂದ ಚಾತ್ರ, ಸಮಿತಿಯ ಕಾರ್ಯದರ್ಶಿ ಒಜಲಿನ್ ರೆಬೆಲ್ಲೊ ಉಪಸ್ಥಿತರಿದ್ದರು. ಪತ್ರಕರ್ತ ವಿನಯ ಪಾಯಸ್ ಸ್ವಾಗತಿಸಿ, ಪ್ರಭಾಕರ ಕುಂಭಾಸಿ ಪ್ರಸ್ತಾವನೆಗೈದರು. ಗಂಗಾಧರ ಆಚಾರ್ ಮತ್ತು ರಾಜೀವ ಕೋಟ್ಯಾನ್ ಸನ್ಮಾನಿತರ ಪರಿಚಯ ನೀಡಿದರು. ಡಾ.ಕೃಷ್ಣ ಕಾಂಚನ್ ಮತ್ತು ವಿನಯ ಪಾಯಸ್ ಕಾಲೇಜು ನೆನಪುಗಳ ಕುರಿತ ಕವನ ವಾಚಿಸಿದರು. ಪತ್ರಕರ್ತ ರಾಜೇಶ್ ಕೆ.ಸಿ ಮತ್ತು ವೀಣಾ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ೮೪-೮೫ರ ಸಾಲಿನ ೧೨೫ಕ್ಕೂ ಮಿಕ್ಕಿದ ಬಿ.ಕಾಂ ಸಹಪಾಠಿಗಳು ಮತ್ತು ಅವರ ಕುಟುಂಬದವರು ಸಮಾರಂಭದಲ್ಲಿ ಭಾಗವಹಿಸಿದ್ದು ಅವರ ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ದಿನವಿಡೀ ನಡೆದವು.
ಚಿತ್ರ, ವರದಿ: ನೊಯೆಲ್ ಚುಂಗಿಗುಡ್ಡೆ.