ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದಲ್ಲಿ ರಾಣಿ ಚೆನ್ನ ಭೈರಾದೇವಿಯವರ ಕೃತಿ ಕುರಿತು ವಿಚಾರ ಸಂಕಿರಣ

ಭಟ್ಕಳದಲ್ಲಿ ರಾಣಿ ಚೆನ್ನ ಭೈರಾದೇವಿಯವರ ಕೃತಿ ಕುರಿತು ವಿಚಾರ ಸಂಕಿರಣ

Fri, 12 Jan 2024 07:18:30  Office Staff   S O News

ಭಟ್ಕಳ: ಪಟ್ಟಣದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ರಾಣಿ ಚೆನ್ನ ಭೈರಾದೇವಿ ಕೃತಿಯ ಕುರಿತು ವಿಚಾರ ಸಂಕೀರ್ಣ ಹಾಗೂ ಸ್ಥಳೀಯ ಇತಿಹಾಸದ ಕುರಿತು ವಸ್ತು ಪ್ರದರ್ಶನ ಮತ್ತು ಪುಸ್ತಕ ಪ್ರದರ್ಶನ- ಮಾರಾಟ ಕಾರ್ಯಕ್ರಮವು ಬುಧವಾರ ಬೆಳಿಗ್ಗೆ ಶ್ರೀ ಶ್ರೀಧರ ಸ್ವಾಮಿ ಸಭಾಂಗಣದಲ್ಲಿ ನೆರವೇರಿತು. 

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಲೇಖಕ ಚೆನ್ನ ಭೈರಾದೇವಿ ಕಾದಂಬರಿಯ ಕರ್ತೃ ಡಾ. ಗಜಾನನ ಶರ್ಮ ಅವರು ಮಾತನಾಡುತ್ತಾ 
"ಪ್ರಾದೇಶಿಕ ಇತಿಹಾಸವನ್ನು ಮಕ್ಕಳಿಗೆ ತಲುಪಿಸುವ ಕೆಲಸವಾಗಬೇಕು, ಇತಿಹಾಸ ಹಿಂದೆ ನಡೆದ ಸತ್ಯ ಘಟನೆಗಳ ಸಂಗ್ರಹವಾಗಿದೆ, ಇದನ್ನು ಪರಿಣಾಮಕಾರಿಯಾಗಿ ಮಕ್ಕಳ ಮುಂದಿಟ್ಟಾಗ ಅದು ಮಕ್ಕಳ ಮನಸ್ಸನ್ನು ತಲುಪಲು ಸಾಧ್ಯ ಎಂದು ತಿಳಿಸುತ್ತ, ವಿದ್ಯಾರ್ಥಿನಿಯರು ಚೆನ್ನಭೈರಾದೇವಿಯನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು" ಎಂದು ಕರೆ ನೀಡಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದಂತಹ ಇತಿಹಾಸಕಾರರಾದ ಡಾ. ಲಕ್ಷ್ಮೀಶ ಹೆಗಡೆ ಸೋಂದ ಅವರು ಮಾತನಾಡುತ್ತಾ "ಇತಿಹಾಸ ಎಂದಿಗೂ ನಿಂತ ನೀರಲ್ಲ,  
ಇತಿಹಾಸದ ಸಂಗತಿಗಳಿಗೆ ಚ್ಯುತಿ ಬಾರದಂತೆ ಸಮಗ್ರವಾಗಿ ಬರೆದ ಕಾದಂಬರಿಯೇ ಗಜಾನನ ಶರ್ಮ ಅವರ ಚೆನ್ನ ಭೈರಾದೇವಿ ಕೃತಿ" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ, ಪ್ರಾದೇಶಿಕ ಇತಿಹಾಸದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ ಕಾಲೇಜಿನ ಕ್ರಮ ಶ್ಲಾಘನೀಯ" ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದಂತಹ ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಅಧ್ಯಕ್ಷರಾದ ಡಾ.ಸುರೇಶ್ ನಾಯಕರವರು "ಬೇರೆ ಪದವಿಯಂತೆ ಕಲಾ ವಿಭಾಗವು ಅಷ್ಟೇ ಮಹತ್ವವಾಗಿದ್ದು, ಈ ವಿದ್ಯಾರ್ಥಿಗಳಿಗೂ ವಿಫುಲ ಅವಕಾಶಗಳಿವೆ" ಎಂದು ಹೇಳಿದರು.

ಚೆನ್ನ ಭೈರಾದೇವಿ ಪುಸ್ತಕದ ಕುರಿತಾಗಿ ಖ್ಯಾತ ಲೇಖಕರಾದ ಸಂತೋಷಕುಮಾರ ಮೆಹಂದಳೆ, ವಿವೇಕ ಹಂಸ ಪತ್ರಿಕೆಯ ಸಂಪಾದಕ-ಖ್ಯಾತ ಲೇಖಕ ರಘು. ವಿ, ಖ್ಯಾತ ಪತ್ರಕರ್ತ ಗೌರೀಶ್ ಅಕ್ಕಿ, ಹೊನ್ನಾವರದ ಗೌರವ ಕಲ್ಯಾಣಪುರ, ಖ್ಯಾತ ನಟ- ನಿರ್ದೇಶಕ ರಮೇಶ್ ಅರವಿಂದ್ ಹಾಗೂ ಇನ್ನಿತರ ಗಣ್ಯರು ಪುಸ್ತಕದ ಕುರಿತಾಗಿ ಶ್ಲಾಘನೀಯ ವಿಡಿಯೋಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಹಾಗೂ ಟ್ರಸ್ಟಿ ರಮೇಶ ಖಾರ್ವಿ ಉಪಸ್ಥಿತರಿದ್ದರು. ಪ್ರಾಂಶುಪಾಲರ ಶ್ರೀನಾಥ್ ಪೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ಆಯೋಜನೆಯ ಆಶಯವನ್ನು ತಿಳಿಸಿದರೆ, ಬಿಎ - ಬಿಬಿಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಅತಿಥಿಗಳನ್ನು ಪರಿಚಯಿಸಿದರು.  ಉಪನ್ಯಾಸಕರಾದ ಶಾಂತರಾಯ ಗೊಂಡ ಸ್ವಾಗತಿಸಿದರೆ,  ಆನಂದ ದೇವಾಡಿಗ ವಂದಿಸಿದರು.
ಬಿಎ ವಿಭಾಗದ ವಿದ್ಯಾರ್ಥಿ ಕಪಿಲ್ ಭಟ್ ಸ್ಥಳೀಯ ಐತಿಹಾಸಿಕ ಸ್ಥಳಗಳ ಭೇಟಿ ಹಾಗೂ ಪುಸ್ತಕವನ್ನು ಓದಿದ ಸವಿ ಅನುಭವಗಳನ್ನು ಹಂಚಿಕೊಂಡರು ಹಾಗೂ 
ದಿವ್ಯಾ ಪಿ. ಕಾರ್ಯಕ್ರಮವನ್ನು ನಿರೂಪಿಸಿದರು. ವಿಚಾರ ಸಂಕೀರ್ಣದಲ್ಲಿ ವಿವಿಧ ಭಾಗಗಳಿಂದ ಬಂದ ಆಗಮಿಸಿದ ಶ್ರೋತೃಗಳ ಪ್ರಶ್ನೆಗಳಿಗೆ ಡಾ. ಗಜಾನನ ಶರ್ಮ ಹಾಗೂ ಡಾ. ಲಕ್ಷ್ಮೀಶ ಹೆಗಡೆ ಸೋಂದ ಅಷ್ಟೇ ಆಸಕ್ತಿಯಿಂದ ಉತ್ತರಿಸಿದರು.

ರಾಣಿ ಚೆನ್ನಭೈರಾದೇವಿಯ ಇತಿಹಾಸದ ಕುರಿತ ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಮಾರಾಟವು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು ವಿಶೇಷವಾಗಿತ್ತು.


Share: