ಭಟ್ಕಳ:ತಾಲೂಕಿನಲ್ಲಿ ಸೋಮವಾರ ಸಂಜೆಯಿAದ ಸುರಿದ ಧಾರಾಕಾರ ಮಳೆ ಮಂಗಳವಾರ ಸೂತಕದ ಛಾಯೆಯನ್ನು ಮೂಡಿಸಿದೆ. ಭಟ್ಕಳ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿದು ಮನೆಯೊಳಗೆ ನಾಲ್ವರು ಸಮಾಧಿಯಾದ ಮನಕುಲುಕುವ ಹೃದಯವಿದ್ರಾವಕ ಘಟನೆ ನಡೆದಿದೆ.
ತಾಲೂಕಿನ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಗೌರಮ್ಮಜ್ಜಿ ಮನೆಯ ಲಕ್ಷ್ಮೀ ನಾರಾಯಣ ನಾಯ್ಕ (೪೮), ಆಕೆಯ ಪುತ್ರಿ ಲಕ್ಷ್ಮೀ ನಾಯ್ಕ (೩೩), ಪುತ್ರ ಅನಂತ ನಾರಾಯಣ ನಾಯ್ಕ (೩೨) ಹಾಗೂ ಸಹೋದರಿಯ ಮಗ ಪ್ರವೀಣ್ ಬಾಲಕೃಷ್ಣ ನಾಯ್ಕ (೨೦) ಮೃತ ದುರ್ದೈವಿಗಳು. ಇವರಲ್ಲಿ ಪ್ರವೀಣ್ ಸೋಮವಾರ ರಾತ್ರಿಯಷ್ಟೆ ಮನೆಗೆ ಬಂದು, ಮಳೆಯ ಕಾರಣ ಉಳಿದುಕೊಂಡಿದ್ದ. ತಾಲೂಕಿನಲ್ಲಿ ಧಾರಕಾರವಾಗಿ ಸುರಿದ ಮಳೆ ಮನೆ ಕುಸಿದು ಬಿಳಲು ಕಾರಣ ಎನ್ನಲಾಗಿದೆ. ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕುಸಿದು ಬಿದ್ದ ಸುದ್ದಿ ತಿಳಿದರೂ ಅಲ್ಲಿ ತೆರಳಲೂ ಸಾಕಷ್ಟು ಹರಸಾಹಸ ಪಡುವಂತಾಯಿತು. ಈ ದುರ್ಘಟನೆ ರಾತ್ರಿ ನಡೆದರುವದು ರಕ್ಷಣಾ ಕಾರ್ಯಕ್ಕೆ ಇನ್ನೊಂದು ತೊಡಕು ಉಂಟಾಯಿತು. ಮುಟ್ಟಳ್ಳಿ ಮನೆ ಕುಸಿದಿರುವ ಸ್ಥಳಕ್ಕೆ ತೆರಳುವ ಮಾರ್ಗದಲ್ಲಿ ನೀರು ನಿಂತು ಯಾವುದೆ ರಕ್ಷಣಾ ಸಾಮಗ್ರಿ ಅಲ್ಲಿ ತೆಗೆದುಕೊಂಡು ಹೊಗಲು ತೊಂದರೆ ಪಡುವಂತಾಯಿತು. ಅಲ್ಲಿನ ಸ್ಥಳೀಯ ಯುವಕರು ಮನೆಯೊಳಗೆ ಸಿಲುಕಿದವರನ್ನು ರಕ್ಷಿಸಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ. ಆದರೆ ವಿಧಿಯ ಅಟ್ಟಹಾಸಕ್ಕೆ ನಾಲ್ವರು ಬಲಿಯಾಗಿರುವದು ದುರ್ದೈವ. ಸತತ ನಾಲ್ಕು ತಾಸುಗಳ ಕಾರ್ಯಚರಣೆ ಬಳಿಕ ಮೊದಲು ೨ ಶವ ನಂತರ ಮತ್ತೆರಡು ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ಮನೆಯ ನಾಲ್ಕು ಸದಸ್ಯರ ಸಾವಿಗೆ ಗ್ರಾಮಸ್ಥರು ಮಮ್ಮಲಮರಗಿದ್ದು ಗ್ರಾಮಕ್ಕೆ ಗ್ರಾಮವೆ ಶೋಕಸಾಗರದಲ್ಲಿ ಮುಳುಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲೈಮುಗಿಲನ್, ಎಸಿ ಮಮತಾದೇವಿ, ತಹಸೀಲ್ದಾರ ಸುಮಂತ ಬಿ.ಇ., ಶಾಸಕ ಸುನೀಲ ನಾಯ್ಕ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಅಗ್ನಿಶ್ಯಾಮಕ ದಳದ ಪಿಎಸ್ಐ ರಮೇಶ ಸೇರಿ ಗ್ರಾಮಸ್ಥರು ಇದ್ದರು.