ಭಟ್ಕಳ: ಭಟ್ಕಳದ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಜಾದ್ ನಗರದಲ್ಲಿ ಅಪಹರಣಕ್ಕೊಳಗಾದ ಸ್ಥಳೀಯ ನಿವಾಸಿ ಬಾಲಕನನ್ನು ಪೊಲೀಸರು ಗೋವಾದ ಕಲಂಗುಟ್ ಕಡಲತೀರದಲ್ಲಿ ಸೋಮವಾರ ಬೆಳಿಗ್ಗೆ ರಕ್ಷಿಸಿದ್ದಾರೆ. ಕುಟುಂಬದಲ್ಲಿ ಹಣದ ವ್ಯವಹಾರದ ಸಂಬಂಧ ಬಾಲಕನ ಅಜ್ಜನೇ (ತಾಯಿಯ ಮಾವ) ಅಪಹರಣ ಮಾಡಿಸಿದ್ದು ವಿಚಾರಣೆಯಲ್ಲಿ ಬಯಲಾಗಿದೆ.
ನಗರದಲ್ಲಿ ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, 'ಪ್ರಕರಣ ಸಂಬಂಧ ಆರೋಪಿ, ಭಟ್ಕಳದ ಬಂದ್ರಿಯಾ ಕಾಲೊನಿ, ನಿವಾಸಿ ಮೊಹಮ್ಮದ್ ಅನೀಸ್ ತಂದೆ ಶಂಶುದ್ದೀನ ಬಾಷ ಮತ್ತು ಹೆಬಳೆ ಫಿರ್ಧೋಸ ನಗರ ನಿವಾಸಿ ಅಬ್ರಾರ್ ಶೇಖ ತಂದೆ ಮೋಹಿದ್ದೀನ ಶೇಖ ಹಾಗೂ ಹನೀಫಾ ಬಾದ ನಿವಾಸಿ ಆದ ಮೊಹಮ್ಮದ್ ಮಂಜೂರ ತಂದೆ ಅಬ್ದುಲ್ ಕರೀಂ ಶಾಬಾಂದ್ರೀ ಎಂಬುವನನ್ನು ಬಂಧಿಸಲಾಗಿದೆ.
ಕೃತ್ಯಕ್ಕೆ ಬಳಸಿದ ಚಾಕು ಮತ್ತು ವಾಹನವನ್ನು ಜಪ್ತಿ ಮಾಡಲಾಗಿದೆ ಎಂದರು.
'ಪ್ರಕರಣದ ತನಿಖೆ ಸಂಬಂಧ ಭಟ್ಕಳ ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಲಾಗಿತ್ತು. ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳು ಮತ್ತು ತಾಂತ್ರಿಕ ದಾಖಲೆಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ' ಎಂದು ತಿಳಿಸಿದರು.
'ಬಾಲಕನ ತಂದೆ ಮಸ್ಕತ್ನಲ್ಲಿ ಉದ್ಯೋಗದಲ್ಲಿದ್ದಾರೆ. ಅವರಿಗೆ ಮತ್ತು ಪತ್ನಿಯ ಮಾವ, ಪ್ರಮುಖ ಆರೋಪಿಯಾಗಿರುವ ಇನಾಯತ್ ಉಲ್ಲಾ ನಡುವೆ ಹಣದ ವ್ಯವಹಾರವಿತ್ತು. ಅದನ್ನು ಬಗೆಹರಿಸಲು ಒತ್ತಡ ಹೇರುವ ಸಲುವಾಗಿ ಬಾಲಕನನ್ನು ಅಪಹರಣ ಮಾಡಿಸಿದ್ದರು. ಸೆರೆ ಸಿಕ್ಕಿರುವ ಆರೋಪಿ ಅನೀಸ್, ಇನಾಯತ್ ಅವರ ಕೋಳಿ ಅಂಗಡಿಯನ್ನು ನಡೆಸುತ್ತಿದ್ದ. ಇನಾಯತ್ ಅವರ ಸೂಚನೆಯ ಮೇರೆಗೆ ಈ ಕೃತ್ಯ ನಡೆದಿದೆ' ಎಂದು ತಿಳಿಸಿದರು.
ಆ.20ರಂದು ರಾತ್ರಿ 8ಕ್ಕೆ ಬಾಲಕ ಮನೆಯ ಸಮೀಪದ ಅಂಗಡಿಯಲ್ಲಿ ಬ್ರೆಡ್ ಖರೀದಿಸಿ ವಾಪಸಾಗುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳು ಅಪಹರಿಸಿದ್ದರು. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
'ಈ ಪ್ರಕರಣದ ನಂತರ ಭಟ್ಕಳದಲ್ಲಿ ಮಕ್ಕಳನ್ನು ಹೊರಗೆ ಕಳುಹಿಸಲು ಪಾಲಕರು ಭಯ ಪಡುತ್ತಿರುವ ಮಾಹಿತಿಯಿದೆ. ಆದರೆ, ಇದು ಸಂಪೂರ್ಣ ಕೌಟುಂಬಿಕ ಗಲಾಟೆಯಾಗಿದೆ. ಹಾಗಾಗಿ ಪಾಲಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಕಾರ್ಯಸರಣಿಯಲ್ಲಿ ಭಾಗವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಎಸ್.ಪಿ ಅಭಿನಂದಿಸಿದ್ದಾರೆ.
ಬಾಲಕನ ಅಪಹರಣಕ್ಕೆ ಸಂಬಂಧಿಸಿ ಭಾನುವಾರ ಬಾಲಕ ಶಿವಮೊಗ್ಗದಲ್ಲಿ ಪತ್ತೆಯಾಗಿರುವುದಾಗಿ ಸುದ್ದಿ ಹರಡಿಸಲಾಗಿದ್ದು, ಸುದ್ದಿ ತಿಳಿದ ಆರೋಪಿಗಳು ಗೋವಾದಲ್ಲಿ ಅರಾಮವಾಗಿದ್ದರು ಎನ್ನಲಾಗಿದೆ.