ಭಟ್ಕಳ: ಭಟ್ಕಳ ಪುರಸಭೆಯಿಂದ ಸತತ ಎರಡು ದಿನದಿಂದ ಪ್ಲಾಸ್ಟಿಕ್ ವಸ್ತುಗಳ ಮಾರಾಟದ ಅಂಗಡಿಗಳ ಮೇಲೆ ತಾಲೂಕಿನ 3 ಕಡೆಗಳಲ್ಲಿ ದಾಳಿ ನಡೆಸಿ ಒಟ್ಟು 40 ಕೆಜಿ ಪ್ಲಾಸ್ಟಿಕ್ ಚೀಲ ಹಾಗೂ 30 ಕೆಜಿ ಪ್ಲಾಸ್ಟಿಕ್ ಇಯರ್ ಬಟ್ಸ್ ವಶಪಡಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದ್ದರು ತಾಲೂಕಿನಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದರಿಂದ ಪುರಸಭೆ ಮುಖ್ಯಾಧಿಕಾರಿ ಸುರೇಶ ನೇತೃತ್ವದಲ್ಲಿ ಭಟ್ಕಳ ಬಸ್ ನಿಲ್ದಾಣದಲ್ಲಿರುವ ಅಂಗಡಿ ಹಾಗೂ ಹೋಟೆಲ ಮೇಲೆ ದಾಳಿ ನಡೆಸಿ ಸುಮಾರು 20 ಕೆಜಿ ಪ್ಲಾಸ್ಟಿಕ್ ಚೀಲ ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ನಗರದ ತಾಸೀನ್
ಸೂಪರ್ ಮಾರ್ಕೆಟ್ ನಲ್ಲಿ 30 ಕೆಜಿ ಆಗುವಷ್ಟು ಪ್ಲಾಸ್ಟಿಕ್ ಇಯರ್ ಬಟ್ಸ್ ಮತ್ತು ಮುಟ್ಟಳ್ಳಿ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಭಟ್ಕಳ ರೈಲ್ವೆ ನಿಲ್ದಾಣದಲ್ಲಿರುವ ಅಂಗಡಿ ಹಾಗೂ ನಿಲ್ದಾಣದ ಸಮೀಪ ಇರುವ ಗೂಡಗಂಡಿ ಮೇಲೆ ದಾಳಿ ನಡೆಸಿದ್ದಾರೆ.
ಭಾನುವಾರ ವಾರದ ಸಂತೆಯ ಅಂಗಡಿಗಳ ಮೇಲೆ ದಾಳಿ ಮಾಡಿ ವ್ಯಾಪಾರಸ್ಥರಿಂದ 20 ಕೆಜಿಯಷ್ಟು ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡಿದ್ದು, ಈ ವೇಳೆಯಲ್ಲಿ ವ್ಯಾಪಾರಸ್ಥರಿಗೂ ಹಾಗೂ ಅಧಿಕಾರಿಗಳ ನಡುವೆ ಕೆಲ ಸಮಯ ಮಾತಿನ ಚಕಮಕಿ ಕೂಡ ನಡೆಯಿತು.
ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗ್ರತಿ ಮೂಡಿಸುವ ಪತ್ರವನ್ನು ಅಂಗಡಿಕಾರರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ , ಪುರಸಭೆ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್, ಕಾರವಾರದ ಮಾಲಿನ್ಯ ಅಧಿಕಾರಿ, ಕಂದಾಯ ಅಧಿಕಾರಿ ದಯಾನಂದ, ಮುಟ್ಟಳ್ಳಿ ಪಂಚಾಯತ ಪಿ.ಡಿ.ಓ ರಾಜೇಶ್ವರಿ ಚಂದಾವರ ಹಾಗೂ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.