ಭಟ್ಕಳ: ಮಾಸ್ಟರ್ ಮೈಂಡ್ ಮೂಲಕ ಕಳ್ಳರ ಹೆಡೆಮುರಿ ಕಟ್ಟುವ ಪೊಲೀಸರಿದ್ದಾರೆ. ಆದರೆ ಇಲ್ಲೊಬ್ಬ ಕಳ್ಳ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿರುವ ಘಟನೆ ಭಟ್ಕಳ ಪಟ್ಟಣದಲ್ಲಿ ನಡೆದಿದೆ.
ಭಟ್ಕಳ ನಗರ ಭಾಗದಲ್ಲಿ ಸೈಕಲ್ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳನ ಮನೆ ಮೇಲೆ ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಸಿಪಿಐ ದಿವಾಕರ ಪಿ,ನೇತೃತ್ವದ ತಂಡ ಮನೆ ಮೇಲೆ ದಾಳಿ ನಡೆಸಿ ಈ ವೇಳೆ ಕಳ್ಳನ ಮನೆಯಲ್ಲಿ 25 ಸೈಕಲ್, 3 ಬೈಕ್ ಜಪ್ತಿ ಮಾಡಿದ್ದಾರೆ. ಈತನನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ವೇಳೆ ಪೊಲೀಸರಿಗೆ, ಬಟ್ಟೆ ಬದಲಿಸಿ ಬರುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಪೊಲೀಸರು ಆತನಿಗೆ ಬಟ್ಟೆ ಬದಲಿಸಲು ಅವಕಾಶ ಕಲ್ಪಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಯಾಮಾರಿಸಿ ಮನೆಯಿಂದ ಆತ ಪರಾರಿಯಾಗಿದ್ದಾನೆ.
ಭಟ್ಕಳ ಪಟ್ಟಣದಲ್ಲಿ ಕೆಲ ದಿನಗಳಿಂದ ಸೈಕಲ್, ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಮನೆ ಮೇಲೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಭಟ್ಕಳ ಪೊಲೀಸರು ಆತ ಕದ್ದ ಸೈಕಲ್, ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸೈಕಲ್, ಬೈಕ್ ಕಳೆದುಕೊಂಡವರು ಸ್ಥಳಕ್ಕೆ ಆಗಮಿಸಿ ತಮ್ಮ ವಾಹನಗಳನ್ನು ಕೊಡುವಂತೆ ಪೊಲೀಸರಲ್ಲಿ ವಿನಂತಿ ಮಾಡಿದರು.
ಕಾರ್ಯಚರಣೆ ಯಲ್ಲಿ ನಗರ ಠಾಣೆ ಪಿಎಸೈಗಳಾದ ಸುಮ ಆಚಾರ್ಯ, ಹನುಮಂತಪ್ಪ ಕುಡಗುಟಿ,ಯಲ್ಲಪ್ಪ ಮಾದರ,ಪ್ರೊಫೆಷನರಿ ಪಿಎಸೈ ಜಗದೀಶ್ ಹಾಗೂ ಎಸೈ ರವಿ ನಾಯ್ಕ,ನವೀನ ಬೋರ್ಕರ್ ಭಾಗಿಯಾಗಿದ್ದರು.
ಘಟನೆ ಸಂಬಂಧ ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.