ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ತಾಲೂಕು ಕಸಾಪದಿಂದ ಸಂಸ್ಥಾಪನಾ ದಿನಾಚರಣೆ

ಭಟ್ಕಳ ತಾಲೂಕು ಕಸಾಪದಿಂದ ಸಂಸ್ಥಾಪನಾ ದಿನಾಚರಣೆ

Fri, 06 May 2022 07:47:52  Office Staff   SO NEWS

ಭಟ್ಕಳ : ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯು ಇಲ್ಲಿನ ಬಂದರ ರಸ್ತೆಯಲ್ಲಿರುವ  ಸಿದ್ದಾರ್ಥ ಪ.ಪೂ.ಕಾಲೇಜಿನಲ್ಲಿ  ನಡೆಯಿತು. ಕಾರ್ಯಕ್ರಮವನ್ನು  ಸಾಹಿತಿ ಡಾ.ಆರ್.ವಿ ಸರಾಫ್ ದೀಪಬೆಳಗಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಾಹಿತ್ಯ ಪರಿಷತ್ತು
 ಕನ್ನಡ ನಾಡು, ನುಡಿ,ಸಂಸ್ಕøತಿ, ಪರಂಪರೆಯನ್ನು ಉಳಿಸಿ ಬೆಳೆಸಿ, ವಿಶ್ವದಾದ್ಯಂತ ಪಸರಿಸುವ ಕಾರ್ಯವನ್ನು ಮಾಡುತ್ತ ಬಂದಿದೆ. ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿ 1915ರಲ್ಲಿ ಸ್ಥಾಪನೆಗೊಂಡು ಸಾಹಿತ್ಯಿಕ ಕಾರ್ಯಕ್ರಮಗಳು, ಪುಸ್ತಕ ಪ್ರಕಟಣೆ, ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತ ಕನ್ನಡ ನಾಡು ನುಡಿಯ ಕೆಲಸವನ್ನು ನಿರ್ವಹಿಸುತ್ತಾ ಬಂದಿದೆ. ಪರಿಷತ್ತಿನ ಜೊತೆಗೆ ನಾವೆಲ್ಲರೂ ಕನ್ನಡ ನಾಡು ನುಡಿಗೆ ನಮ್ಮಿಂದಾದ ಕೊಡುಗೆಯನ್ನು ನೀಡುವ ಮೂಲಕ ಕನ್ನಡ ನುಡಿ ಸೇವೆಯನ್ನು ಮಾಡಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಸಾಹಿತ್ಯ ಪರಿಷತ್ತು  ಏಕೀಕೃತ ಕರ್ನಾಟಕ ರಾಜ್ಯ ರಚನೆಗೂ ಪೂರ್ವದಲ್ಲೇ ಸ್ಥಾಪನೆಗೊಂಡು ಕನ್ನಡಿಗರನ್ನು ಸಂಘಟಿಸಿ ಏಕೀಕರಣ ಹೋರಾಟಕ್ಕೆ ಸಾಂಸ್ಥಿಕ ಸ್ವರೂಪವನ್ನು ನೀಡಿದೆ. ಕನ್ನಡ ನಾಡು ನುಡಿಯನ್ನು ಕಟ್ಟುವದನ್ನೇ ಧ್ಯೇಯವನ್ನಾಗಿರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಕನ್ನಡಿಗರೆಲ್ಲರ ಹೆಮ್ಮೆಯ ಸಂಸ್ಥೆ ಎಂದು ನುಡಿದರು. ಸಾಹಿತಿ, ಶಿಕ್ಷಕಿ ಪೂರ್ಣಿಮಾ ಕರ್ಕಿಕರ್ ಕನ್ನಡ ಮನಸ್ಸುಗಳ ಮೇಲೆ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಹಿನ್ನೆಲೆ, ನಾಡು ನುಡಿಗೆ ಸಂಬಂಧಿಸಿದಂತೆ  ನಿರ್ವಹಿಸುತ್ತಿರುವ ಕಾರ್ಯಗಳ ಕುರಿತು ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾಹಿತಿ ನಾರಾಯಣ ಯಾಜಿ ಮಾತನಾಡಿದರಲ್ಲದೇ ಅವರ ಹಾಗೂ  ಶ್ರೀಮತಿ ಜಯಾ ಯಾಜಿಯವರು ರಚಿಸಿದ ಕೃತಿಗಳನ್ನು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಗ್ರಂಥಾಲಯಕ್ಕೆ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲೆ ಅರ್ಚನಾ ಯು. ಮಾತನಾಡಿದರು.  ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರೆ ಕಸಾಪ ಸದಸ್ಯ ಪಾಂಡುರಂಗ ಅಳ್ವೆಗದ್ದೆ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯವಿದ್ಯಾರ್ಥಿಗಳು ಹಾಜರಿದ್ದರು. 

 


Share: