ಭಟ್ಕಳ: ಮೊಗೇರ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ಸರಕಾರ ಮುಂದುವರಿಸದೇ ಇದೇ ರೀತಿಯ ನಿರ್ಲಕ್ಷ ತೋರಿದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ಮಾಡುತ್ತೇವೆ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಆತ್ಮಾರ್ಪಣೆಗೂ ಸಿದ್ಧ ಎಂದು ವಿದ್ಯಾರ್ಥಿ ಮುಖಂಡ ತಿಲಕ ಕೃಷ್ಣಾ ಮೊಗೇರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಧರಣಿ ನಿರತ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈತ ಸಮಾಜದ ವಿದ್ಯಾರ್ಥಿಗಳು ಒಂದು ದಿನ ತರಗತಿ ಬಹಿಷ್ಕರಿಸಿ ಮೆರವಣಿಗೆಯನ್ನು ನಡೆಸಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದೇವೆ. ಪ್ರಮಾಣ ಪತ್ರ ದೊರೆಯದೇ ನಮ್ಮ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ. ಪ್ರತಿಯೊಂದು ಹಂತದಲ್ಲಿಯೂ ನಮಗೆ ತೊಂದರೆಯಾಗಿದ್ದು ನಾವು ಮುಂದಿನ ದಿನಗಳಲ್ಲಿ ನಾವು ಸಕ್ರಿಯವಾಗಿ ಮುಷ್ಕರಕ್ಕೆ ಇಳಿಯುವುದು ಅನಿವಾರ್ಯವಾಗಿದೆ ಎಂದರು.
ಜಾತಿ ಪ್ರಮಾಣ ಪತ್ರಕ್ಕಾಗಿ ಹೋರಾಟ ನಡೆಸುತ್ತಿರುವ ಸಮಾಜದ ಬಗ್ಗೆ ಸರಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ ಎಂದ ಅವರು ಸರಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ. ಇದೀಗ ಸರಕಾರ ಕಣ್ಣೊರೆಸುವ ತಂತ್ರದ ಭಾಗವಾಗಿ ಪರಿಶೀಲನಾ ಸಮಿತಿ ರಚಿಸಿ ಮೂರು ತಿಂಗಳೊಳಗೆ ಸಮಿತಿಗೆ ವರದಿ ಸಲ್ಲಿಸಲು ತಿಳಿಸಿದೆ. ನಮಗೆ ಶೀಘ್ರವಾಗಿ ಎಸ್ಸಿ ಪ್ರಮಾಣ ಪತ್ರ ನೀಡುವುದನ್ನು ಸರಕಾರ ಮುಂದುವರಿಸಬೇಕು. ಎಸ್ಸಿ ಪ್ರಮಾಣ ಪತ್ರವನ್ನು ಸರಕಾರ ನೀಡದೇ ಇರುವುದರಿಂದ ಮೊಗೇರ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಸೌಲಭ್ಯಕ್ಕೆ ತೊಂದರೆಯಾಗಿದೆ. ಸರಕಾರ ನಮಗೆ ನ್ಯಾಯ ಕೊಡದಿದ್ದಲ್ಲಿ ಸಮಾಜದ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ತರಗತಿ ಬಹಿಷ್ಕರಿಸಿ ಭಟ್ಕಳದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸುತ್ತೇವೆ. ಆಗಲೂ ನಮಗೆ ನ್ಯಾಯ ಸಿಕ್ಕಿಲ್ಲವೆಂದಾದರೆ ಆತ್ಮಾರ್ಪಣೆಗೂ ಹಿಂಜರಿಯುವುದಿಲ್ಲ ಎಂದರು.