ಚಿಕ್ಕಮಗಳೂರು ನ.22- ನೆರೆ ಹಾವಳಿಯಿಂದ ತತ್ತರಿಸಿರುವ ಗದಗ ಮತ್ತು ಹಾವೇರಿ ಜಿಲ್ಲೆಗಳ ಸಂತ್ರಸ್ತರು ಕೂಲಿ ಕೆಲಸ ಅರಸಿ ಮಲೆನಾಡಿಗೆ ಕಾಲಿಟ್ಟಿದ್ದು, ಸುಮಾರು ೨೦ ಕುಟುಂಬಗಳು ಮೂಡಿಗೆರೆಗೆ ಬಂದಿಳಿದಿವೆ. ಇತ್ತೀಚೆಗೆ ಇಲ್ಲಿ ಕೂಡ ವಿಪರೀತ ಗಾಳಿ ಮಳೆ ಸುರಿಯುತ್ತಿರುವುದರಿಂದ ಡೇರೆ ಹಾಕಿಕೊಳ್ಳಲು ಸಾಧ್ಯವಾಗದೆ ಪ್ರವಾಸಿ ಮಂದಿರದ ಆವರಣದಲ್ಲಿ ಸೂರಿನಾಸರೆ ಪಡೆದುಕೊಂಡಿವೆ. ಸಧ್ಯಕ್ಕೆ ಸ್ಥಳೀಯ ಪಿಡಬ್ಲೂಡಿ ಗುತ್ತಿಗೆದಾರರು ಈ ಕುಟುಂಬಗಳಿಗೆ ರಸ್ತೆ ಪ್ಯಾಚ್ವರ್ಕ್ ಕೆಲಸ ನೀಡಿದ್ದಾರೆ.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ತಿಂಗಳು ಸುರಿದ ಜಡಿಮಳೆ, ನೆರೆ ಹಾವಳಿಯಿಂದ ಆ ಭಾಗದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಮನೆ-ಮಠ, ಆಸ್ತಿ-ಪಾಸ್ತಿ, ಜಾನುವಾರುಗಳನ್ನು ಕಳೆದುಕೊಂಡವರಿಗೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯ ಸಮರ್ಪಕ ರೀತಿಯಲ್ಲಿ ನಡೆದಿಲ್ಲ. ಸಚಿವರು, ಶಾಸಕರಾದಿಯಾಗಿ ಯಾವ ಜನಪ್ರತಿನಿಧಿಗಳೂ ಸಂತ್ರಸ್ತರಿಗೆ ಅಗತ್ಯ ನೆರವು, ಸೌಕರ್ಯ ಒದಗಿಸಿ ಕೊಟ್ಟಿಲ್ಲ. ಅಲ್ಲಿನ ಕೆಲವು ಗ್ರಾಮಗಳಿಗೆ ಈತನಕ ಅಧಿಕಾರಿಗಳು ಭೇಟಿ ಕೊಡದೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕೆಲಸ ಅರಸಿ ಬಂದವರನ್ನು ’ವಾರ್ತಾಭಾರತಿ’ ಭೇಟಿ ಮಾಡಿದಾಗ ಮಾಹಿತಿ ನೀಡಿದರು.


ಪತ್ನಿ ಸಮೇತನಾಗಿ ಸುಮಾರು ೨೦ ಕುಟುಂಬಗಳ ಜನರ ತಂಡವನ್ನು ಕೂಲಿ ಕೆಲಸಕ್ಕಾಗಿ ಕರೆತಂದಿರುವ ಇಸ್ಮಾಯಿಲ್ ಅನುಭವಿಸಿದ ಗೋಳು ಹೀಗಿತ್ತು:
ನಾವು ಕಳೆದ ಹದಿನೈದು ದಿನಗಳ ಹಿಂದೆಯೇ ಇಲ್ಲಿಗೆ ಬಂದಿದ್ದೇವೆ. ನಮಗೆ ಸ್ವಂತ ಊರಿನಲ್ಲಿ ನೆಲೆ ಎಂಬುದು ಇಲ್ಲದಂತಾಗಿದೆ. ತಾವು ಜಮೀನಿನಲ್ಲಿ ಬೆಳೆದ ಬೆಳೆಯನ್ನು ಪ್ರವಾಹವು ನೆಲಸಮ ಮಾಡಿದೆ. ಮೂರು ಎಕರೆ ಹೊಲದಲ್ಲಿ ನೆಲಗಡಲೆ, ಶೇಂಗಾ, ಬಿ.ಟಿ. ಹತ್ತಿ ಬೆಳೆದಿದ್ದೆ ಅವೆಲ್ಲ ನಾಶವಾಗಿದೆ. ಆದರೆ ಸರಕಾರದಿಂದ ಈತನಕ ಪರಿಹಾರ ಸೌಲಭ್ಯ ಸಿಕ್ಕಿಲ್ಲ
ಹಾವೇರಿ ಜಿಲ್ಲೆಯ ಸವಣೂರು ಎಂಬಲ್ಲಿನ ಮರಿಯಪ್ಪ ಎಂಬಾತನೂ ತನ್ನ ಪತ್ನಿ ಸಹಿತ ಇವರೊಂದಿಗೆ ಕೂಲಿ ಕೆಲಸಕ್ಕಾಗಿ ಅರಸಿ ಬಂದಿದ್ದಾನೆ. ಆತ ಹೇಳಿದ ಪ್ರಕಾರ ಐದೂವರೆ ಎಕರೆ ಹೊಲದೊಡಯನೀತ. ತನ್ನ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆಯುತ್ತಿದ್ದು, ಜವರಾಯನ ಆರ್ಭಟಕ್ಕೆ ಅವುಗಳನ್ನು ಕಳೆದುಕೊಂಡಿದ್ದಾನೆ.
ಅಲ್ಲದೆ, ಸವಣೂರಿನ ಸಹೋದರರಾದ ನಾಗರಾಜು, ದೇವಪ್ಪ, ಮುಂಡಗೋಡು ಬಳಿಯ ಇಂದೂರಿನ ಗುಲಾಬ್, ಸವಣೂರಿನ ಜಾವಿದ್, ಕುಟುಂಬದ ನಾಲ್ವರೊಂದಿಗೆ ದುರ್ಗಪ್ಪ, ಕುಟುಂಬದ ಎಂಟು ಸದಸ್ಯರ ಜತೆಗೆ ಷಡಾಕ್ಷರಿ ಅಲ್ಲದೆ ಇವರ ಜತೆಗೆ ಬಂದವರಲ್ಲಿ ಸವಣೂರು, ಶಿರಹಟ್ಟಿ, ಮುಂಡಗೋಡು, ಗದಗ, ಮುಂತಾದ ಭಾಗಗಳ ಸಂತ್ರಸ್ತರಿದ್ದಾರೆ.
ಇವರೆಲ್ಲರೂ ಹೇಳಿಕೊಂಡತೆ ಅಲ್ಲಿನ ಬಹುತೇಕ ಕುಟುಂಬಗಳಿಗೆ ನೆಲೆಗಳು ಎಂಬುದು ಇಲ್ಲವೇ ಇಲ್ಲ. ಕುಟೀರ, ಗುಡಿಸಲು, ಡೇರೆಗಳಲ್ಲಿ ವಾಸಿಸುವವರ ಸಂಖ್ಯೆಯೇ ಹೆಚ್ಚು. ನೆರೆ ಹಾವಳಿಗೂ ಮುನ್ನ ಅಲ್ಲಿನ ಜನರ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಕುಡಿಯುವ ನೀರು, ರಸ್ತೆ, ವಸತಿ, ಆರೋಗ್ಯ, ಶಿಕ್ಷಣ, ಅಂಗನವಾಡಿ ಕೇಂದ್ರಗಳು ಬಹುತೇಕ ಕಡೆ ಇಲ್ಲವೇ ಇಲ್ಲ. ಬಹುಪಾಲು ಜನರು ದುಡಿಯುವ ವರ್ಗದವರಾಗಿದ್ದಾರೆ. ಕೊಳಗೇರಿ ವಾಸಿಗಳಂತೂ ಶಿಕ್ಷಣದ ಕೊರತೆಯನ್ನು ಎದುರಿಸುತ್ತಿದ್ದಾರೆ.
ಇವತ್ತಿಗೆ ಅಲ್ಲಿ ಮನೆಗಳಿದ್ದವರೂ ಅವುಗಳನ್ನೂ ಕೂಡ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅರ್ಧಂಬರ್ಧ ಕಳೆದುಕೊಂಡವರು ಮುರುಕಲು ಮನೆಯಲ್ಲಿ ವಾಸಿಸುತ್ತಲಿದ್ದಾರೆ. ಬಹುತೇಕರ ಜಮೀನುಗಳು ನಾಶವಾಗಿವೆ. ಜಾನುವಾರುಗಳನ್ನು ನೆರೆ ನೀರು ಎಳೆದೊಯ್ದಿವೆ. ತಮ್ಮ ಜಮೀನುಗಳಲ್ಲಿ ನೆಲಗಡಲೆ, ಶೇಂಗಾ, ಮೆಕ್ಕೆಜೋಳ, ಬಿ.ಟಿ. ಹತ್ತಿ, ಸೂರ್ಯಕಾಂತಿ, ಮುಂತಾದ ಬೆಳೆಗಳೆಲ್ಲವೂ ನೀರುಪಾಲಾಗಿ ಹೋಗಿವೆ.
ಹೀಗೆ ಸಂತ್ರಸ್ತರಾದ ಕುಟುಂಬಗಳಿಗೆ ಸರ್ಕಾರದಿಂದ ಪೊಳ್ಳು ಭರವಸೆಗಳು ಮಾತ್ರ ಸಿಗುತ್ತಿವೆ. ಮನೆಗಳು ಭಾಗಶಃ ಹಾನಿಗೊಂಡಿದ್ದಕ್ಕೆ ಕೇವಲ ೮೦೦ ರೂ.ಗಳ ಪರಿಹಾರ ನೀಡುತ್ತಿದ್ದಾರೆ. ಅದರಲ್ಲಿ ೨೦೦ ರೂಗಳನ್ನು ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ಬಲವಂತದಿಂದ ಕಿತ್ತುಕೊಳ್ಳುತ್ತಿದ್ದಾರೆ. ತಮಗೆ ಸಿಕ್ಕಿರುವುದು ಕೇವಲ ೬೦೦ ರೂ.ಗಳು ಮಾತ್ರ. ಸಾವಿರಗಟ್ಟಲೆ ಹಣ ಅಥವಾ ಇತರೆ ಪರಿಹಾರ ರೂಪದಲ್ಲಿ ಯಾವುದೇ ತರಹದ ಸಾಮಗ್ರಿಗಳು ತಮ್ಮ ಮನೆಯ ಅಂಗಳಕ್ಕೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.
ತುತ್ತಿಲ್ಲದ ನಿರ್ಗತಿಕರಿಗೆ, ಅನಾಥರಿಗೆ, ವಸತಿಹೀನರಿಗೆ ಅದನ್ನು ನೀಡಿದ್ದಾರೋ ಇಲ್ಲವೋ ಎಂಬುದು ಇವರಿಗಂತೂ ತಿಳಿದಿಲ್ಲ. ಇಲ್ಲಿಗೆ ಕೆಲಸ ಅರಸಿ ಬಂದವರಿಗೆ ಅಂತಹದ್ದೇನೂ ತಲುಪಿಲ್ಲ. ಇವರಂತೆಯೇ ಕೆಲಸ ಅರಸಿ ಹೋಗುವವರು, ಗುಳೇ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆಯಂತೆ. ಉತ್ತರ ಕರ್ನಾಟಕ ಭಾಗದಲ್ಲಿ ಆದರೆ ಸರಕಾರ ಸರಿಯಾದ ಕ್ರಮ ಕೈಗೊಳ್ಳದೇ ಇರುವುದರಿಂದ ಜನರ ಹಾಹಾಕಾರ, ಆಕ್ರಂದನ ಮುಗಿಲುಮುಟ್ಟಿರುವುದಂತೂ ಸ್ಪಷ್ಟವಾಗಿದೆ.