ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದೆ ತಪ್ಪಾಯ್ತು. ಭಟ್ಕಳ ಯುವಕನ ಪಜೀತಿ

ಭಟ್ಕಳ: ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದೆ ತಪ್ಪಾಯ್ತು. ಭಟ್ಕಳ ಯುವಕನ ಪಜೀತಿ

Fri, 03 Feb 2023 02:15:37  Office Staff   S O News

ಭಟ್ಕಳ: ತಾಲ್ಲೂಕಿನ ಯುವಕನೊಬ್ಬ ದುಬೈ ಮಾರ್ಕೆಟ್‌ನಲ್ಲಿ ಮೊಬೈಲ್  ಫೋನ್ ಖರೀದಿಸಿ ಊರಿಗೆ ಬಂದಿದ್ದ.  ಖರೀದಿಸಿದ ಮೊಬೈಲ್ ಗೆ ಸಿಮ್ ಹಾಕುತ್ತಿದ್ದಂತೆ ಪೊಲೀಸರು ಆತನನ್ನ ಹುಡುಕಿ ಭಟ್ಕಳಕ್ಕೆ ಬಂದ ಘಟನೆ ನಡೆದಿದೆ.

ಮಧ್ಯಪ್ರದೇಶದ ಇಂದೂರು ಪೊಲೀಸರು ಮೊಬೈಲ್ ಟ್ರ್ಯಾಕ್ ಮಾಡಿ ಭಟ್ಕಳ ತಲುಪಿದ್ದಾರೆ. ಪೊಲೀಸ್ ಠಾಣೆಯಿಂದ  ಯುವಕನಿಗೆ ಠಾಣೆಗೆ ಬರುವಂತೆ ಕರೆ ಬಂದಿದ್ದು,  ಮೊಬೈಲ್ ಫೋನನ್ನು ಪೊಲೀಸರು  ವಶಪಡಿಸಿಕೊಂಡಿದ್ದಾರೆ.

ಆರು ತಿಂಗಳ ಹಿಂದೆ  ಯುವಕ ದುಬೈ ಮಾರ್ಕೆಟ್ ನಿಂದ ಸೆಕೆಂಡ್ ಹ್ಯಾಂಡ್ ಐಫೋನ್ ಮೊಬೈಲ್ ಖರೀದಿಸಿದ್ದ.  ದುಬೈನಲ್ಲಿ ಆರು ತಿಂಗಳ ಕಾಲ ಆ  ಮೊಬೈಲ್ ಬಳಸಿದ್ದಾನೆ, ಅಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಯುವಕ ಭಟ್ಕಳ ತಲುಪಿದ ನಂತರ ಮೊಬೈಲ್‌ಗೆ ಭಾರತೀಯ ಸಿಮ್ ಅಳವಡಿಸಿಕೊಂಡ ನಂತರ ಸಮಸ್ಯೆ ಆರಂಭವಾಗಿದೆ. 

ಮೊಬೈಲ್ ಬಳಕೆದಾರ ಯುವಕ ತನ್ನ ಮೊಬೈಲ್ ವ್ಯವಹಾರ ಮಾಡಿದ ಬಗ್ಗೆ ಸಾಹಿಲ್ ಆನ್‌ಲೈನ್ ಸುದ್ದಿ  ಮಾಧ್ಯಮ ಕಚೇರಿಗೆ ಬಂದು ವಿವರ ನೀಡಿದ್ದಾರೆ‌. ತಾನು ಐದು ದಿನಗಳ ಹಿಂದೆ ಮೊಬೈಲ್‌ಗೆ ಇಂಡಿಯನ್ ಸಿಮ್ ಹಾಕಿದ್ದೇನೆ.  ಭಟ್ಕಳ ಪೊಲೀಸರೊಂದಿಗೆ ಇಂದೂರ್  ಪೊಲೀಸರು ನೇರವಾಗಿ ಮನೆಗೆ ತೆರಳಿ ನನ್ನ ತಂದೆಗೆ ನಾನು ಎಲ್ಲಿದ್ದೇನೆ ಎಂದು ವಿಚಾರಿಸಿದ್ದಾರೆ.  ಆ ಸಮಯದಲ್ಲಿ ನಾನು ಮನೆಯಲ್ಲಿ ಇರಲಿಲ್ಲ.  ನಂತರ ನನಗೆ ಕರೆ ಬಂದಿತು ಮತ್ತು ನನಗೆ ಠಾಣೆಗೆ ಬರಲು ಸೂಚಿಸಿದರು. ನಾನು ನನ್ನ ಸಹೋದರ ಮತ್ತು ಸ್ನೇಹಿತನೊಂದಿಗೆ ಠಾಣೆಗೆ ತಲುಪಿದೆ.  ಆಗ ಮಧ್ಯಪ್ರದೇಶದ ಇಂದೋರ್‌ನ ರೈಲ್ವೇ ಪೊಲೀಸರು ಭಟ್ಕಳ ಪೊಲೀಸ್ ಠಾಣೆಗೆ ತಲುಪಿರುವುದು ಗೊತ್ತಾಯಿತು. 

ನಾನು ಬಳಸುತ್ತಿರುವ ಮೊಬೈಲ್ ಎರಡು ವರ್ಷಗಳ ಹಿಂದೆ ಅಂದರೆ 2021 ರಲ್ಲಿ ಇಂದೋರ್ ರೈಲು ನಿಲ್ದಾಣದಲ್ಲಿ ಕಳ್ಳತನವಾಗಿದೆ ಎಂದು ಅವರು ಹೇಳಿದ್ದಾರೆ. ಮೊಬೈಲ್ ಬಗ್ಗೆ ಕೇಳಿದಾಗ ನಾನು ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ವಿವರ ನೀಡಿದ್ದಾರೆ‌.

ಭಾರತದಲ್ಲಿ ಕದ್ದ ಮೊಬೈಲ್ ಫೋನ್ ಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಅತ್ಯಂತ ಕಷ್ಟಕರವಾದ ಕಾರಣ ಮತ್ತು ಸಿಕ್ಕಿಬೀಳುವ ಭಯ ಹೆಚ್ಚಾಗಿರುವುದರಿಂದ ಕದ್ದ ಮೊಬೈಲ್ ಫೋನ್ ಗಳನ್ನು ಬೇರೆ ದೇಶಗಳಿಗೆ ಸಾಗಿಸಿ ಮಾರಾಟ ಮಾಡಲಾಗುತ್ತಿದೆ ಎಂದು ನಂಬಲಾಗಿದೆ.  ದುಬೈನ ಸೆಕೆಂಡ್ ಹ್ಯಾಂಡ್ ಮಾರ್ಕೆಟ್‌ನಿಂದ ಇಂದೋರ್ ನಲ್ಲಿ ಕದ್ದ ಮೊಬೈಲ್ ಬಂದಿದ್ದು, ಆ ಮೊಬೈಲ್ ಹುಡುಕಿಕೊಂಡು ಪೋಲೀಸರು ಭಟ್ಕಳಕ್ಕೆ ಬಂದಿದ್ದಾರೆ. ಕಳ್ಳ ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುವ ಸೆಕೆಂಡ್ ಹ್ಯಾಂಡ್ ಮೊಬೈಲ್  ಎಷ್ಟೊಂದು ಅವಾಂತರಗಳನ್ನು ಸೃಷ್ಟಿಸಬಹುದು ಎಂಬುದಕ್ಕೆ ಭಟ್ಕಳದ ಈ ಘಟನೆ ಸಾಕ್ಷಿಯಾಗಿದೆ. ಸೆಕೆಂಡ್ ಹ್ಯಾಂಡ್ ಮೊಬೈಲ್ ಗಳು ಇವತ್ತಲ್ಲ ನಾಳೆ ನಿಮ್ಮನ್ನು ದೊಡ್ಡ ಮಟ್ಟದ ಸಂಕಷ್ಟಕ್ಕೆ ಸಿಲುಕಬಹುದು. ಈ ಬಗ್ಗೆ ಜನರು ಜಾಗೃತರಾಗಬೇಕಾಗಿದೆ.


Share: