ಭಟ್ಕಳ, ಅಕ್ಟೋಬರ್ ೨೫: ಕಳೆದ ಕೆಲ ತಿಂಗಳುಗಳಿಂದ ಭಟ್ಕಳ ಬಂದರಿನಲ್ಲಿ ನಡೆಯುತ್ತಿರುವ ಸಾರಾಯಿ ವಿರೋಧಿ ಹೋರಾಟ ದುರದೃಷ್ಟವಶಾತ್ ಜಾತಿ ಬಣ್ಣ ಬಳಿದುಕೊಂಡು ಹಿಂಸಾ ರೂಪಕ್ಕೆ ತಿರುಗಲಾರಂಭಿಸಿದೆ. ಈ ಹಿಂದೆ ನಡೆದ ಬಾರ್ ಬಂದ್, ಅಪಾರ ಪ್ರಮಾಣದ ಸಾರಾಯಿ ನಾಶ ಹಾಗೂ ಮೊನ್ನೆಯಷ್ಟೇ ನಡೆದ ಸಾರಾಯಿ ಬಾಟಲಿ ತಲೆಯ ಮೇಲಿರಿಸಿ ನಡೆದ ಮರವಣಿಗೆ ಪ್ರಕರಣಗಳ ಸಂಬಂಧದ ವಾದ-ವಿವಾದಗಳು ತೆರೆಯ ಹಿಂದೆ ಕಸರತ್ತು ನಡೆಸಿ ಸಂಯೋಜನೆಗೊಂಡಿದ್ದು, ಇಡೀ ಭಟ್ಕಳವನ್ನೇ ಆಪೋಶನ ತೆಗೆದುಕೊಳ್ಳಲು ಸಜ್ಜಾಗಿ ಕುಳಿತಿದೆ. ಇದೇ ವಿಷಯದ ಮೇಲೆಯೇ ಬೂದಿ ಮುಚ್ಚಿದ ಕೆಂಡದಂತಿದ್ದ ಮುನಿಸು ರವಿವಾರ ಮಧ್ಯಾಹ್ನ ೩ ಗಂಟೆಯ ಸುಮಾರಿಗೆ ಎರಡು ಪಂಗಡಗಳ ಹೊಡೆದಾಟದ ರೂಪದಲ್ಲಿ ಸ್ಪೋಟಗೊಂಡಿದೆ.

ಈ ಸಂಬಂಧ ವಸಂತ ನಾರಾಯಣ ನಾಯ್ಕ ಎಂಬುವವರು ಭಟ್ಕಳ ಶಹರ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದಾರೆ. ಆರೋಪಿಗಳನ್ನಾಗಿ ಮಹೇಶ ಖಾರ್ವಿ, ಗೋಪಾಲ ಖಾರ್ವಿ ಹಾಗೂ ಇತರೇ ಮೂವರು ಎಂದು ಹೆಸರಿಸಲಾಗಿದೆ. ಮಹೇಶ ಖಾರ್ವಿಯವರಿಂದಲೂ ಪ್ರತಿ ದೂರು ದಾಖಲಾಗಿದ್ದು, ಆರೋಪಿಗಳನ್ನಾಗಿ ವಸಂತ ನಾರಾಯಣ ನಾಯ್ಕ, ಮೋಹನ ನಾಯ್ಕ ಹಾಗೂ ಗಣಪತಿ ಎಂದು ಗುರುತಿಸಲಾಗಿದೆ. ಹೊಡೆದಾಟದ ಸುದ್ದಿ ತಿಳಿಯುತ್ತಿದ್ದಂತೆಯೇ ಒಂದು ಪಂಗಡದ ನೂರಾರು ಜನರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು. ರಿಕ್ಷಾ ಚಾಲಕರ ವಿರುದ್ಧ ವಿನಾ ಕಾರಣ ಹಲ್ಲೆ ನಡೆಸಲಾಗಿದ್ದು, ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ಜನರು ಠಾಣೆಯ ಒಳಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದಂತೆಯೇ, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.
ವರದಿಗಾರರ ಮೇಲೆ ಹಲ್ಲೆ: ಹಲ್ಲೆ ನಡೆಸಲು ಕಾದು ಕುಳಿತವರಂತೆ ಹಿಂದೂ ಜಾಗರಣಾ ವೇದಿಕೆಯ ಪ್ರಮುಖ ಸೇರಿದಂತೆ ಕೆಲವರು ಪ್ರತಿಭಟನಾಕಾರರ ನಡುವೆ ನುಸುಳಿದ್ದು, ವರದಿಗಾಗಿ ತೆರಳಿದ ಕರಾವಳಿ ಮುಂಜಾವು ವರದಿಗಾರರನ್ನು ಪೊಲೀಸ್ ಠಾಣೆಯ ಎದುರಿನಲ್ಲಿಯೇ ಮನಬಂದಂತೆ ಥಳಿಸಿ, ವರದಿ ಮಾಡದಂತೆ ಕ್ಯಾಮೆರಾ ಕಸಿಯಲು ಮುಂದಾದ ಘಟನೆಯೂ ನಡೆದಿದೆ. ಈ ಸಂಬಂಧ ದೇವಾಡಿಗ ಭಟ್ಕಳ ತಾಲೂಕು ಹಿಂದೂ ಜಾಗರಣಾ ವೇದಿಕೆಯ ಪ್ರಮುಖ ಶ್ರೀನಿವಾಸ ನಾಯ್ಕ, ಗಣಪತಿ ನಾಯ್ಕ ಸೇರಿದಂತೆ ಹಲವರ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತಾ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಶಹರ ಠಾಣಾ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಹಿಂದೂ ಸಂಘಟನೆಯ ಕೆಲ ಕಾನೂನು ಬಾಹೀರ ಕೃತ್ಯಗಳನ್ನು ವರದಿಗಾರ ವಸಂತ ದೇವಾಡಿಗ, ತಮ್ಮ ಕೆಲ ವರದಿಗಳಲ್ಲಿ ಉಲ್ಲೇಖಿಸಿರುವುದೇ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ.

೧೪೪ ಜಾರಿ: ರವಿವಾರ ನಡೆದ ಗಲಭೆಯ ಕಾರಣ ತಾಲೂಕಿನಲ್ಲಿ ಬಿಸಿ ವಾತಾವರಣ ನೆಲೆಸಿದ್ದು, ಮುಂಜಾಗ್ರತಾ ಕ್ರಮವಾಗಿ ಭಟ್ಕಳ ಶಹರ, ಮುಟ್ಟಳ್ಳಿ, ಮುಂಡಳ್ಳಿ, ಬಂದರ್, ಕರಿಕಲ್ ಭಾಗಗಳಲ್ಲಿ ತಾಲೂಕು ದಂಡಾಧಿಕಾರಿ ಎಸ್.ಎಮ್ ನಾಯ್ಕ ಐಪಿಸಿ ಸೆಕ್ಷನ್ ೧೪೪ನ್ನು ಜಾರಿಗೊಳಿಸಿದ್ದಾರೆ. ಡಿವಾಯ್ಎಸ್ಪಿ ವೇದಮೂರ್ತಿ, ಸಿಪಿಐ ಗುರುಮತ್ತೂರು ನೇತೃತ್ವದಲ್ಲಿ ತಾಲೂಕಿನಾದ್ಯಂತ ಬಿಗಿ ಬಂದೋಬಸ್ತ ಏರ್ಪಡಿಸಲಾಗಿದೆ.

ಶಾಂತಿ ಸಮಾಲೋಚನೆ: ಘಟನೆಯು ವಿಕೋಪಕ್ಕೆ ಹೋಗುವುದನ್ನು ತಡೆಯಲು ಸೇವಾ ವಾಹಿನಿಯ ಅಧ್ಯಕ್ಷ ಸುರೇಂದ್ರ ಶ್ಯಾನಭಾಗ, ಬಿಜೆಪಿ ಹಿರಿಯ ಧುರೀಣ ಎನ್.ಜಿ.ಕೊಲ್ಲೆ, ಹಿಂದೂ ಜಾಗರಣಾ ವೇದಿಕೆಯ ಉತ್ತರಪ್ರಾಂತ ಸಂಚಾಲಕ ಗೋವಿಂದ ನಾಯ್ಕ, ಜಿಲ್ಲಾ ಸಂಚಾಲಕ ದಿನೇಶ ನಾಯ್ಕ, ಶ್ರೀಧರ ನಾಯ್ಕ ಉಪಸ್ಥಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತಾ ಶಾಂತಿ ಸಭೆ ನಡೆಸಿದರು. ಕಾನೂನು ಬಾಹೀರವಾದ ಎಲ್ಲ ಚಟುವಟಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವರಿಷ್ಠಾಧಿಕಾರಿಗಳು ಎಚ್ಚರಿಸಿದ್ದಾರೆ.