ಭಟ್ಕಳ: ಶಾಲಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಸಮುದ್ರದ ಅಲೆಗೆ ಸಿಲುಕಿ ಸಮುದ್ರ ಪಾಲಾದ ಘಟನೆ ಮುರುಡೇಶ್ವರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಚಿತ್ರದುರ್ಗದ ವಿದ್ಯಾರ್ಥಿ ಮೊಹಮ್ಮದ್ ಫಾಜಿಲ್ (೧೬) ಎಂದು ಗುರುತಿಸಲಾಗಿದೆ. ಈತ ಚಿತ್ರದುರ್ಗದ ಚುನ್ಮುಲಾದ್ರಿ ನ್ಯಾಶನಲ್ ಪ್ರೌಢ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿ ಎನ್ನಲಾಗಿದೆ.
ಚಿತ್ರದುರ್ಗದಿಂದ ಒಟ್ಟೂ 120 ವಿದ್ಯಾರ್ಥಿಗಳು ಹಾಗೂ 4 ಶಿಕ್ಷಕರು ಸೇರಿ ಪ್ರವಾಸಕ್ಕೆಂದು ಬಂದಿದ್ದು ಶಿರಸಿ, ಜೋಗ, ಗೋಕರ್ಣ ಇತ್ಯಾದಿಗಳನ್ನು ನೋಡಿಕೊಂಡು ಶುಕ್ರವಾರ ಬೆಳಿಗ್ಗೆ ಮುರ್ಡೇಶ್ವರ ತಲುಪಿದ್ದರು ಎನ್ನಲಾಗಿದೆ.
ತಂಡದಲ್ಲಿ ಕೆಲವು ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದು ನೀರಿನಲ್ಲಿ
ಆಟವಾಡುತ್ತಾ ಇರುವಾಗ ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.
ಸುಮಾರು ಒಂದು ಗಂಟೆಗಳ ಕಾಲ ಹುಡುಕಾಟದ ಬಳಿಕ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಲೈಫ್ ಗಾರ್ಡ್ಗಳ ನಿರ್ಲಕ್ಷ್ಯದಿಂದಲೇ ಬಾಲಕನ ಸಾವಾಗಿದೆ ಎಂದು ಸ್ಥಳೀಯರ ಆರೋಪ ಮಾಡಿದ್ದು ಜನರಿಗೆ ಸೂಚನೆ ನೀಡುವ, ರಕ್ಷಣೆ ಮಾಡುವ ಬದಲು ಬೋಟಿಂಗ್ನಲ್ಲಿ ಲೈಫ್ ಗಾರ್ಡಗಳು ನಿರತರಾಗಿದ್ದರು ಹೀಗಾಗಿ ದುರಂತ ಸಂಭವಿಸಿದೆ ಎಂದು ದೂರಿದ್ದಾರೆ.
ಮುರ್ಡೇಶ್ವರ ಪೊಲೀಸರು ಸಿ.ಪಿ.ಐ. ಮಹಾಬಲೇಶ್ವರ ನಾಯ್ಕ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ್ದಾರೆ.