ಭಟ್ಕಳ: ನೂತನ ನ್ಯಾಯಲಯ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ತಾಂತ್ರಿಕ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಮಂಜೂರಿಯಾಗುವ ಭರವಸೆ ಇದೆ ಎಂದು ಜಿಲ್ಲಾ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಹೇಳಿದರು.
ಅವರು ಇಲ್ಲಿನ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆಯನ್ನು ನಡೆಸಿ ನಂತರ ಭಟ್ಕಳ ವಕೀಲರ ಸಂಘದ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿ ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರುಗಳ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ ಎಂದ ಅವರು ನ್ಯಾಯಾಲಯದಲ್ಲಿಯ ವ್ಯವಸ್ಥೆಗಳನ್ನು ಹೆಚ್ಚಿಸುವುದೊಂದೇ ನಮ್ಮ ಗುರಿಯಾಗಿರದೇ ಸಮಾಜಕ್ಕೆ ನಾವು ಉತ್ತಮ ಕೊಡುಗೆಯನ್ನು ನೀಡುವ ಗುರಿಯನ್ನು ಕೂಡಾ ಹೊಂದಿರಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಕಟ್ಟಡ ಸಮಿತಿಯ ಅಧ್ಯಕ್ಷ ಎಂ.ಎಲ್. ನಾಯ್ಕ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ನ್ಯಾಯವಾದಿ, ನೋಟರಿ ಆರ್.ಆರ್. ಶ್ರೇಷ್ಟಿಯವರು ಭಟ್ಕಳ ವಕೀಲರ ಸಂಘವು ಅನೇಕ ಹಿರಿಯ ವಕೀಲರನ್ನು ಹೊಂದಿದ್ದು ಈಗಾಗಲೇ ಸಂಘದ ಸದಸ್ಯರು, ಶಾಸಕರಾಗಿ, ಮಂತ್ರಿಗಳಾಗಿದ್ದಾರೆ, ಜಿಲ್ಲಾ ನ್ಯಾಯಾಧೀಶರು, ನ್ಯಾಯಾಧೀಶರು, ಸರಕಾರಿ ಸಹಾಯಕ ಅಭಿಯೋಜಕರು ಕೂಡಾ ಆಗಿದ್ದು ಇದೊಂದು ಉತ್ತಮ ವಕೀಲರ ಸಂಘ ಎಂದರು. ನ್ಯಾಯಾಲಯದ ಕಟ್ಟಡವೇನೋ ನೀಲ ನಕ್ಷೆಯಂತೆ ಕಟ್ಟಲಾಗುತ್ತದೆ. ಆದರೆ ನೂತನ ಕಟ್ಟಡಕ್ಕೆ ಪೀಠೋಪಕರಣಗಳ ಅವಶ್ಯಕತೆ ಇರುತ್ತದೆ. ಅಲ್ಲದೇ ನ್ಯಾಯಾಲಯದಲ್ಲಿ ಸಿಬ್ಬಂದಿಗಳ ಕೊರತೆ, ಜೆರಾಕ್ಸ್ ಮಿಷನ್ ಅವಶ್ಯಕತೆಯ ಕುರಿತು ವಿವರಿಸಿದರು.