ಬೆಂಗಳೂರು/ಚಿತ್ರದುರ್ಗ: ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬ್ಯಾಂಕ್ಗಳು ರೈತರ ಆಸ್ತಿ ಜಪ್ತಿ ಮಾಡುವುದಕ್ಕೆ ಅಂತ್ಯ ಹಾಡಲು ಕಾನೂನಿನ ತಿದ್ದುಪಡಿ ತಂದು ಆಸ್ತಿಪಾಸ್ತಿ ಜಪ್ತಿ ಮಾಡುವುದನ್ನು ನಿಷೇಧ ಮಾಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಈ ಮುಂಚೆ ನೋಟೀಸ್ ನೀಡಿ ರೈತರ ಆಸ್ತಿಯನ್ನು ಬ್ಯಾಂಕ್ಗಳು ಜಪ್ತಿ ಮಾಡುತ್ತಿದ್ದವು, ಇನ್ನು ಮುಂದಿನ ದಿನದಲ್ಲಿ ಹಾಗಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠ ಆಯೋಜಿಸಿದ್ದ ಲಿಂಗೈಕ್ಯಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 30 ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರುಬದ್ಧತೆಯಿಂದ ಕೆಲಸ ಮಾಡುವ ಕ್ರಿಯಾಶಕ್ತಿಯೇ ಭಕ್ತಿಯ ಶಕ್ತಿ. ಗುರುಗಳಿಂದ ಪ್ರೇರಣೆ ಪಡೆದು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಮ್ಮ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರೈತರ ಮಕ್ಕಳಿಗೆ ವಿದ್ಯಾನಿಧಿ ರೂಪಿಸಲಾಯಿತು. 14 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗಿದೆ. ರೈತ ಕೂಲಿಕಾರ ಮಕ್ಕಳಗೆ, ನೇಕಾರರಿಗೆ, ಮೀನುಗಾರರಿಗೆ, ಆಟೋ ರಿಕ್ಷಾ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗೆ ಯೋಜನೆ ವಿಸ್ತರಣೆಯಾಗಿದೆ. ಶಿಕ್ಷಣದಿಂದ ಉದ್ಯೋಗ ನೀಡಬಹುದೆಂದು ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.
ರಾಜ್ಯದ ಮಕ್ಕಳು ಹಣದ ಕೊರತೆಯಿಂದ ಓದು ನಿಲ್ಲಿಸಬಾರದು, ಅವರ ಭವಿಷ್ಯ ಉಜ್ವಲವಾಗಿ ನಿರ್ಮಾಣವಾಗಲಿ ಎಂದು ಈ ಕೆಲಸ ಮಾಡಲಾಗಿದೆ. ನೀರಾವರಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ ಎಂದರು.
3 ಲಕ್ಷ ದವರೆಗೆ ಬಡ್ಡಿರಹಿತ ಸಾಲ ನೀಡಿದರೂ ಅತಿವೃಷ್ಟಿ, ಅನಾವೃಷ್ಟಿ ಕಾರಣದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿದೆ. ಕೆರೆ ಕಟ್ಟೆ ತುಂಬಿ ನೀರು ಇನ್ನು 2-3 ವರ್ಷಗಳಿಗೆ ತೊಂದರೆ ಇಲ್ಲ. ಕೆಲವೆಡೆ ಪ್ರವಾಹವಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ರಾಷ್ಟ್ರೀಯ ಯೋಜನೆ
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುವ ಅಂತಿಮ ಘಟ್ಟದಲ್ಲಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅದರ ಅನುಮೋದನೆ ದೊರೆತ ಕೂಡಲೇ 14 ಸಾವಿರ ಕೋಟಿ ರೂ.ಗಳ.ನೆರವು ನಮಗೆ ಬರಲಿದೆ. ಇದನ್ನು ಪೂರ್ಣ ಮಾಡಲು ಹಣಕಾಸಿನ ಶಕ್ತಿ ದೊರೆಯುತ್ತದೆ ಎಂದರು.
ದುಡ್ಡು ಸಂಬಂಧಗಳನ್ನು ಕೆಡಿಸುತ್ತದೆ. ಯಾವಾಗ ಬದುಕು ವ್ಯವಹಾರವಾಗುತ್ತದೆಯೋ ಆಗ ಸಂಬಂಧಗಳು ಉಳಿಯುವುದಿಲ್ಲ. ಬದುಕು ಬದುಕಾಗಿಯೇ ಇರಬೇಕು. ತತ್ವ ಜ್ಞಾನದಲ್ಲಿ ಪಾಪ ಪುಣ್ಯವಿದೆ. ವ್ಯಾಪಾರದಲ್ಲಿ ಲಾಭ ನಷ್ಟವಿದೆ ಎಂದರು.
ಗುರುಗಳು ತಮ್ಮ ಪುಸ್ತಕ ಹಣದ ಝೇಂಕಾರ, ಸಂಬಂಧಗಳಿಗೆ ಸಂಚಕಾರ ಪುಸ್ತಕದಲ್ಲಿ ಹೇಳಿದ್ದಾರೆ. ಬದುಕನ್ನು ಸುಧಾರಿಸಲು ಮಾಡಬೇಕಾದ ಅಂಶಗಳಿವೆ. ಪರರ ನಿಂದನೆಗೆ ವೃಥಾ ವ್ಯಾಕುಲ ಪಡಬೇಡ, ದ್ವೇಷಕ್ಕಾಗಿ ತೆಗಳಿಕೆ , ತೆಗಳಿಕೆ ಅಲ್ಲ. ಇವುಗಳ ಮಧ್ಯೆ ಸ್ಥಿತಪ್ರಜ್ಞಾನಾಗಿರಬೇಕು ಎನ್ನುವುದೇ ತರಳಬಾಳು ಭೃಹನ್ಮಠದ ತತ್ವ. ಸಮಕಾಲೀನ, ಪ್ರಗತಿ ಪರ ಚಿಂತನೆ, ಆಶೀರ್ವಾದ, ಹಿರಿಯ ಗುರುಗಳ ಆಶೀರ್ವಾದಗಳನ್ನು ಅಳವಡಿಸಿಕೊಂಡು ಸರ್ಕಾರ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಸರ್ಕಾರ ಈ ತತ್ವಗಳಿಗೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುತ್ತದೆ. ಮಠಕ್ಕೆ ಪ್ರೀತಿ ಪಾತ್ರರಾದ ರೈತರು, ದುಡಿಯುವ ವರ್ಗಕ್ಕೆ ಅತಿ ಹೆಚ್ಚು ಮಹತ್ವ ನೀಡಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು. ದುಡಿಮೆಯೇ ದೊಡ್ಡಪ್ಪ ಎಂಬ ಮಠದ ಮೂಲ ತತ್ವ, ಆದರ್ಶ ಗಳಂತೆ ನಡೆದುಕೊಳ್ಳಲಾಗುವುದು ಎಂದರು.