ಚಿಕ್ಕಮಗಳೂರು , ಡಿಸೆಂಬರ್ 21: ಜಿಲ್ಲೆಯ ಒಂದು ಸ್ಥಾನಕ್ಕಾಗಿ ನಡೆದಿದ್ದ ಮೇಲ್ಮನೆ ಚುನಾವಣೆ ಎಣಿಕೆ ಕಾರ್ಯ ನಗರದ ಎಸ್.ಟಿ.ಜೆ ಕಾಲೇಜಿನಲ್ಲಿ ಸೋಮವಾರ ನಡೆದಿದ್ದು, ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಎ.ವಿ. ಗಾಯಿತ್ರಿ ಶಾಂತೇಗೌಡ ಜಯಗಳಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿ ಸ್ಪರ್ಧಿ ಬಿಜೆಪಿಯ ಬೋಜೇಗೌಡ ವಿರುದ್ಧ ೧೯೯ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಎಣಿಕೆ ಕಾರ್ಯವು ಬೆಳಿಗ್ಗೆ ೮ ರಿಂದ ಆರಂಭವಾದ ಬಳಿಕ ೧೦ ಗಂಟೆ ಹೊತ್ತಿಗೆ ಮುಗಿದಿದ್ದು ಚುನಾವಣಾಧಿಕಾರಿಗಳು ಎ.ವಿ. ಗಾಯಿತ್ರಿ ಶಾಂತೇಗೌಡರ ಗೆಲುವನ್ನು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಹೊರಾಂಗಣದಲ್ಲಿ ಕುತೂಹಲದಿಂದ ಕಾದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಮತ ಎಣಿಕೆ ಕಾರ್ಯದಲ್ಲಿ ಗೊಂದಲ ಕಂಡುಬರಬಾರದು ಎಂಬ ಉದ್ದೇಶದಿಂದ ಎಸ್.ಟಿ.ಜೆ. ಕಾಲೇಜಿನ ಕೊಠಡಿಗಳಲ್ಲಿ ೧೦ ಟೇಬಲ್ಗಳನ್ನು, ೭೫ ಮಂದಿ ಅಧಿಕಾರಿಗಳು ಎಣಿಕೆ ನಡೆಸಿದರು. ಪ್ರತಿ ಟೇಬಲ್ನಲ್ಲಿ ಒಮ್ಮೆ ೨೫೦ ಮತಗಳನ್ನು ಎಣಿಕೆ ಮಾಡಲಾಯಿತು. ಒಟ್ಟು ೨೬೯೨ ಮತಗಳಲ್ಲಿ ೨೬೭೫ ಮತ ಚಲಾವಣೆಯಾಗಿತ್ತು. ಅವುಗಳಲ್ಲಿ ಕಾಂಗ್ರೆಸ್ನ ಗಾಯಿತ್ರಿ ೧೩೮೭ ಮತ ಪಡೆದರೆ ಬೋಜೇಗೌಡ ೧೧೮೮ ಮತಗಳನ್ನು ಪಡೆದಿದ್ದಾರೆ. ೧೦೦ ಮತಗಳು ತಿರಸ್ಕೃತಗೊಂಡಿವೆ.
ಆ ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬೋಳರಾಮೇಶ್ವರ ದೇವಸ್ಥಾನ ಬಳಿ ಸಮಾವೇಶಗೊಂಡು ಗಾಯಿತ್ರಿ ಶಾಂತೇಗೌಡ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಉತ್ತಮ ಸೇವೆಯ ನಿರೀಕ್ಷೆ ಹೊಂದಿ ತನ್ನನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿದ್ದಾರೆ. ತನ್ನ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ತಾರತಮ್ಯ ಪಕ್ಷ ಬೇದ, ಪಕ್ಷಪಾತ ನಡೆಸದೆ ಅಭಿವೃದ್ಧಿ ಚಟುವಟಿಕೆಗಳತ್ತ ಗಮನ ಹರಿಸುತ್ತೇವೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ ಬಿಜೆಪಿ ಸರಕಾರದ ಜನವಿರೋಧಿ ಮತ್ತು ದುರಾಡಳಿತದ ಪರಿಣಾಮ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪರ್ಯಾಯ ಮಾರ್ಗ ಅನುಸರಿಸಿದ್ದಾರೆ. ಇದನ್ನು ಬಿಜೆಪಿ ಶಾಸಕರು, ಮುಖಂಡರು ಗಮನಿಸಿ ಒಪ್ಪಿಕೊಳ್ಳಬೇಕು ಎಂದು ತಿಳಿಸಿದರು.
ಡಿ.೧೮ ರಂದು ನಡೆದ ಚುನಾವಣೆ ಸಂದರ್ಭದಲ್ಲಿ ಜಿ.ಪಂ. ಮತಗಟ್ಟೆ ಸಂಖ್ಯೆ ೨ ರಲ್ಲಿ ಚುನಾವಣಾ ನಿಯಮವನ್ನು ಉಲ್ಲಂಘಿಸಿ ಮತದಾನ ನಡೆದಿತ್ತೆಂಬ ಗಂಭೀರ ಆರೋಪದ ಹಿನ್ನಲೆಯಲ್ಲಿ ಭಾನುವಾರ ಮತಗಟ್ಟೆಯೊಂದರಲ್ಲಿ ಮರು ಮತದಾನ ನಡೆದಿತ್ತು.
ಈ ಸಂದರ್ಭದಲ್ಲಿ ಎಸ್.ಎಲ್. ಬೋಜೇಗೌಡ, ಹೆಚ್.ಹೆಚ್. ದೇವರಾಜ್, ಎಸ್.ಟಿ. ರಾಜೇಂದ್ರ, ಕೆ. ಮಹಮ್ಮದ್, ಎ.ಎನ್. ಮಹೇಶ್, ಕೆ.ರಾಜು, ಜೆಡಿಎಸ್, ಕಾಂಗ್ರೆಸ್, ಸಿಪಿಐ ಮತ್ತು ಬಿಎಸ್ಪಿ ಮುಖಂಡರು ಶುಭಾಶಯ ವಿನಿಮಯ ಮಾಡಿಕೊಂಡರು.