ಬೆಂಗಳೂರು : ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿರುವ ಅಲೆಮಾರಿ ಸಮುದಾಯ ಬುಡ್ಗ ಜಂಗಮ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಕ್ರಮ ವಹಿಸುವುದಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬುಡ್ಗ ಜಂಗಮ ಅಲೆಮಾರಿ ಸಮುದಾಯದ ಮುಖಂಡರೊಂದಿಗೆ ವಿಧಾನಸೌಧದಲ್ಲಿಂದು ಸಭೆ ನಡೆಸಿದ ಸಚಿವರು, ಬುಡ್ಗ ಜಂಗಮ ಅಥವಾ ಬೇಡ ಜಂಗಮ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನಿಜವಾದ ಸಮುದಾಯ ಸರ್ಕಾರದ ಸೌಲಭ್ಯದಿಂದ ವಂಚಿತವಾಗುತ್ತಿರುವ ಬಗ್ಗೆ ಸಮುದಾಯದ ಅಹವಾಲಿನ ಬಳಿಕ ಈ ಬಗ್ಗೆ ನಿಜವಾದ ಬುಡ್ಗ ಜಂಗಮದ ಕುಲಶಾಸ್ತ್ರೀಯ ಆದ್ಯಯನ ಕೈಗೊಳ್ಳುವ ಬಗ್ಗೆ ಕ್ರಮ ವಹಿಸುವುದಾಗಿ ಅವರು ತಿಳಿಸಿದರು.
ಅಲ್ಲದೆ ಬುಡ್ಗ ಜಂಗಮ ಸಮುದಾಯಗಳಿಗೆ ನಿಯಮಾನುಸಾರ ಜಾತಿ ಪ್ರಮಾಣ ಪತ್ರ ವಿತರಣೆ, ಶೈಕ್ಷಣಿಕ ಹಾಗೂ ರಾಜಕೀಯ ಅಸಮತೋಲನ ನಿವಾರಣೆ, ಮನೆ, ಜಮೀನು ಸೇರಿದಂತೆ ವಿವಿಧ ಸರ್ಕಾರದ ಸೌಲಭ್ಯಗಳನ್ನು ವಿತರಿಸುವ ಸಂಬಂಧ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಸಚಿವರು ಭರವಸೆ ನೀಡಿದರು.
ಬುಡ್ಗ ಜಂಗಮ ಅಲೆಮಾರಿ ಸಮುದಾಯದ ಪ್ರತಿನಿಧಿಗಳು, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರರಾದ ಡಾ.ಇ.ವೆಂಕಟಯ್ಯ, ಇಲಾಖೆ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಆಯುಕ್ತ ಡಾ.ಕೆ.ರಾಕೇಶಕುಮಾರ್, ಅಲೆಮಾರಿ ಕೋಶದ ವಿಶೇಷಾಧಿಕಾರಿ ಡಾ.ಜಿ.ಪಿ.ದೇವರಾಜು ಮತ್ತಿತರರು ಉಪಸ್ಥಿತರಿದ್ದರು.