ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬರಿದಾಗುತ್ತಿರುವ ಕಡವಿನಕಟ್ಟೆ ಡ್ಯಾಂ:ಬಿಸಿಲತಾಪ ಹೆಚ್ಚಾದಲ್ಲಿ ಕುಡಿವ ನೀರಿಗಾಗಿ ಹಾಹಾಕಾರ

ಬರಿದಾಗುತ್ತಿರುವ ಕಡವಿನಕಟ್ಟೆ ಡ್ಯಾಂ:ಬಿಸಿಲತಾಪ ಹೆಚ್ಚಾದಲ್ಲಿ ಕುಡಿವ ನೀರಿಗಾಗಿ ಹಾಹಾಕಾರ

Sun, 21 May 2023 17:38:54  Office Staff   SO News

ಭಟ್ಕಳ:ಹೆಚ್ಚುತ್ತಿರುವ ಬಿಸಿಲ ತಾಪಮಾನಕ್ಕೆ ಕಡವಿನಕಟ್ಟೆ ಡ್ಯಾಂನಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇದೇ ರೀತಿಯ ತಾಪಮಾನ ಮುಂದುವರಿದರೆ ಪಟ್ಟಣ ಮತ್ತಿತರ ಭಾಗಗಳಲ್ಲಿ ಕುಡಿಯುವ ನೀರಿಗೆ ತೀರಾ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.
ಪಟ್ಟಣದ ಕುಡಿಯುವ ನೀರು ಸರಬರಾಜಿನ ಏಕೈಕ ಮೂಲವಾಗಿರುವ ಈ ಡ್ಯಾಂನಲ್ಲಿ ಏಪ್ರಿಲ್ ಮೊದಲ ವಾರದಲ್ಲಿಯೇ ನೀರಿನ ಒಳಹರಿವು ಕಡಿಮೆಯಾಗಿ, ತಳದಲ್ಲಿನ ಹೂಳು ಕಾಣಿಸುತ್ತಿದೆ. ಶೀಘ್ರದಲ್ಲಿ ಮಳೆ ಬರದೇ ಇದ್ದಲ್ಲಿ ಕಷ್ಟವಾಗಲಿದೆ, 
ಈ ಡ್ಯಾಂ ನಿರ್ಮಿಸಿರುವ ಉದ್ದೇಶವೇ ಕೃಷಿ ಚಟುವಟಿಕೆಗೆ ನೀರು ನೀಡುವುದಾಗಿದ್ದು, ನಂತರದ ದಿನಗಳಲ್ಲಿ ಭಟ್ಕಳ ಪಟ್ಟಣ, ಶಿರಾಲಿ, ಜಾಲಿ, ಮಾವಿನಕುರ್ವೆ ಮುಂತಾದ ಕಡೆ ಕುಡಿಯಲು ಪೂರೈಸಲಾಯಿತು.
ಈಗ ತು೦ಬಿದ ಹೂಳಿನಿಂದಾಗಿ ಬೇಸಿಗೆಯಲ್ಲಿ ನೀರು ಸಹಜವಾಗಿ ಕಡಿಮೆಯಾಗುತ್ತದೆ. ನಿರ್ಮಾಣವಾದಾಗಿನಿಂದ ಇಂದಿನ ತನಕವೂ ಕೂಡಾ ಕೃಷಿಕರಿಗೆ ಶಿರಾಲಿ, ಸಾರದಹೊಳೆ, ಬೇಂಗ್ರೆ ಇತ್ಯಾದಿಯಾಗಿ ಸಾವಿರಾರು ಎಕರೆ ಭೂಮಿಗೆ ನೀರುಣಿಸುತ್ತಾ ರೈತರ ಪಾಲಿಗೆ ಸಂಜೀನಿಯಾಗಿತ್ತು. ಮಳೆಗಾಲದ ನಂತರ ಕೃಷಿಕರು ಈ ನೀರನ್ನೇ ನಂಬಿ ಎರಡು ಬೆಳೆ ಬೆಳೆಯುತ್ತಿದ್ದರು. ಈಗ ನೀರಿನ ಹರಿವು ಸರಿಯಾಗಿ ಇಲ್ಲದೇ ಇರುವುದರಿಂದ ಒಂದೇ ಬೆಳೆಗೆ ಕೃಷಿಕರು ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಈ ಡ್ಯಾಂ ಮೊದಲು ಭಟ್ಕಳ ಪಟ್ಟಣಕ್ಕೆ ಇಲ್ಲಿಂದ ನೀರು ಸರಬರಾಜು ಮಾಡಲು ರೈತರ ವಿರೋಧಿಸಿದರು. ಆದಾಗ್ಯೂ ಬೃಹತ್ ಪಂಪ್ ಹಾಕಲಾಯಿತು.ಬಳಿಕ ಶಿರಾಲಿ ಮತ್ತು ಮಾವಿನಕುರ್ವೆ ಗ್ರಾಮ ಪಂಚಾಯಿತಿ, ಜಾಲಿ ಪಟ್ಟಣ ಪಂಚಾಯಿತಿಗೂ ಕುಡಿಯುವ ನೀರು ಸರಬರಾಜು ಮಂಜೂರಿ ಮಾಡಿಸಿ ಇಲ್ಲಿಂದಲೇ ನೀರು ಸರಬರಾಜು ಮಾಡಲಾಯಿತು. ಆದರೆ, ಡ್ಯಾಂನಲ್ಲಿ ಹೂಳು ತೆಗೆಯಿಸಲು ಮತ್ತು ಹೆಚ್ಚಿನ ನೀರಿನ ಸಂಗ್ರಹಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಯಾರೂ
ಮುಂದಾಗದೇ ಇರುವುದು ವಿಪರ್ಯಾಸ. 
ಡ್ಯಾಂನ ಹೂಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆಯಿಸಿದರೆ ಮಾತ್ರ ನೀರಿನ ಸಂಗ್ರಹ ಹೆಚ್ಚಿಸಬಹುದಾಗಿದೆ. 
ಬೇಸಿಗೆಯಲ್ಲಿ ನೀರು ಕಡಿಮೆಯಾಗುವುದರಿಂದ ಕುಡಿಯುವ ನೀರಿಗಾಗಿ ಇದನ್ನು ಅವಲಂಬಿಸಿರುವವರು ಈಗಿಂದಲೇ ಜಾಗೃತೆ ವಹಿಸುವುದು ತೀರಾ ಅಗತ್ಯ ವಾಗಿದೆ.
ಈ ಕುರಿತು ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರ ಗಮನಹರಿಸಬೇಕಿದೆ. ಕಡವಿನಕಟ್ಟೆ ಡ್ಯಾಂ ಬಗ್ಗೆ ನಿರ್ಲಕ್ಷ್ಯ ಮುಂದುವರಿದಲ್ಲಿ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ತಲೆದೋರಬಹುದಾಗಿದೆ.


Share: