ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಿಎಫ್‌ಐನ ಇಬ್ಬರು ಮುಖಂಡರ ಮನೆ ಮೇಲೆ ದಾಳಿ:ಮಹತ್ವದ ದಾಖಲೆಗಳ ಪರಿಶೀಲನೆ

ಪಿಎಫ್‌ಐನ ಇಬ್ಬರು ಮುಖಂಡರ ಮನೆ ಮೇಲೆ ದಾಳಿ:ಮಹತ್ವದ ದಾಖಲೆಗಳ ಪರಿಶೀಲನೆ

Thu, 29 Sep 2022 17:28:28  Office Staff   so news

ಭಟ್ಕಳ: ದೇಶಾದ್ಯಂತ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ಮುಂದಿನ 5 ವರ್ಷಗಳವರೆಗೆ ನಿಷೇಧಿಸಿ ಕೇಂದ್ರ ಗೃಹ ಇಲಾಖೆ ಪ್ರಕಟಣೆ ಹೊರಡಿಸಿದ ಬೆನ್ನಿಗೆ, ಭಟ್ಕಳದಲ್ಲಿ ಅಧಿಕಾರಿಗಳು ಸಂಘಟನೆಯ ಮುಖಂಡರ ಬೆನ್ನು ಹತ್ತಿದ್ದಾರೆ.ಬುಧವಾರ ಸಂಜೆ ಪಿಎಫ್‌ಐ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಶೋಧ ಕಾರ್ಯ ನಡೆದಿದೆ.
ಕತ್ತಲು ಆವರಿಸಬೇಕು ಎನ್ನುವಷ್ಟರಲ್ಲಿ, ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಭಟ್ಕಳ ಸಹಾಯಕ ಆಯುಕ್ತ ಮಮತಾದೇವಿ, ತಹಸೀಲ್ದಾರ ಡಾ.ಸುಮಂತ್‌, ಡಿವಾಯ್‌ಎಸ್ಪಿ ಕೆ.ಯು.ಬೆಳ್ಳಿಯಪ್ಪ, ಸಿಪಿಐ ಮಹಾಬಲೇಶ್ವರ ನಾಯ್ಕ, ಎಸೈ ಭರತ್ ಹಾಗೂ ಸಿಬ್ಬಂದಿಗಳು 2 ತಂಡಗಳಗಾಗಿ ಭಟ್ಕಳ ಮೂಸಾನಗರ ಮುಖ್ಯರಸ್ತೆಯಲ್ಲಿರುವ ಓಯಾಸಿಸ್ ಬಿಲ್ಡಿಂಗ್
ಪಕ್ಕದ ಪಿಎಫ್‌ಐ ಮುಖಂಡ ಕರೀಮ್‌ ಅವರ ಬಾಡಿಗೆ ಮನೆ ಹಾಗೂ ತಾಲೂಕಿನ ಹೆಬಳೆ ಹನೀಫಾಬಾದ್‌ನಲ್ಲಿ ಸಲ್ಮಾನ್ ಅವರ ಮನೆಗಳಿಗೆ ತೆರಳಿ ಶೋಧ ಕಾರ್ಯ ನಡೆಸಿದರು. ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳ ದಾಳಿಯಿಂದ ಮನೆ ಮಂದಿ ಒಂದು ಕ್ಷಣ ಗಾಬರಿಗೆ ಒಳಗಾಗಿದ್ದು ಕಂಡು ಬಂತು. ಅಧಿಕಾರಿಗಳ ದಾಳಿಯ ವೇಳೆ ಕರೀಮ್, ಸಲ್ಮಾನ್ ಇಬ್ಬರೂ ಮನೆಯಲ್ಲಿ ಇರಲಿಲ್ಲ. ಕರೀಮ್ ಹಾಗೂ ಸಲ್ಮಾನ್ ಎಲ್ಲಿ ಹೋಗಿದ್ದಾರೆ ಎಂದು ಅಧಿಕಾರಿಗಳು ಪ್ರಶ್ನಿಸಿದ್ದು, ಈ ಬಗ್ಗೆ ತಮಗೆ ಮಾಹಿತಿ ಇಲ್ಲ. ಎಂದು ಮನೆಯಲ್ಲಿದ್ದವರು ತಿಳಿಸಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ. ಪಿಎಫ್‌ಐ ಸಂಘಟನೆಗೆ ಸಂಬಂಧಿಸಿದ ಬರಹ, ಸಾಹಿತ್ಯ ಬಾವುಟ, ಇನ್ನಿತರೇ ದಾಖಲೆಗಳ ಬಗ್ಗೆ ಅಧಿಕಾರಿಗಳು ವಿಚಾರಿಸಿದ್ದು, ಸಂಘಟನೆಗಳ ಮುಖಂಡರ ಬ್ಯಾಂಕ್‌ ಖಾತೆಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಆದರೆ ಬಂಧನ ಭೀತಿಯಿಂದ ತಲೆ ತಪ್ಪಿಸಿಕೊಂಡಿರುವ ಮುಖಂಡರು ಹಾಗೂ ಪಿಎಫ್‌ಐ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ನೋಟೀಸ್ ನೀಡುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಮಾತನಾಡಿರುವ ಡಿವಾಯ್‌ಎಸ್ಪಿ ಕೆ.ಯು.ಬೆಳ್ಳಿಯಪ್ಪ ದಾಳಿಯ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

 


Share: