ಧಾರವಾಡ : ಹುಬ್ಬಳ್ಳಿಯ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ನವರಿಗೆ ಪ್ರಕರಣವೊಂದರಲ್ಲಿ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಗುರ್ಲ ಹೊಸೂರ, ಚಿದಂಬರ ನಗರದ ನಿವಾಸಿಯಾದ ಸತೀಶ ಇಜಂತಕರ ಎಂಬುವವರು ತಮ್ಮ ಮಗಳಾದ ಬನಶ್ರೀ ಹೆಸರಿನಲ್ಲಿ ಆದಿತ್ಯ ಗೋಲ್ಡ್ ಪರ್ಚೇಜ್ ಯೋಜನೆಯಡಿ ಒಟ್ಟು 19 ಕಂತುಗಳಲ್ಲಿ ರೂ.2,00,000/- ಬಂಗಾರದ ಆಭರಣ ಪಡೆಯಲು ಕಟ್ಟಿದ್ದರು. ಸದರಿ ಹಣಕ್ಕೆ ಸಮಾನಾಂತರವಾಗಿ ಒಟ್ಟು 64,011 ಗ್ರಾಂ. ಬಂಗಾರವನ್ನು ಯೋಜನಾ ಅವಧಿ ಮುಕ್ತಾಯವಾದರೂ ಸದರಿ ಯೋಜನೆಯ ನಿಯಮಾನುಸಾರ ತನಗೆ ಹುಬ್ಬಳ್ಳಿಯ ಲಕ್ಷ್ಮೀ ಗೋಲ್ಡ್ ಪ್ಯಾಲೇಸರವರು ಬಂಗಾರ ಹಿಂದಿರುಗಿಸದೇ ಸತಾಯಿಸಿ ಸೇವಾ ನ್ಯೂನ್ಯತೆ ಎಸಗಿರುತ್ತಾರೆಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಈ ದೂರನ್ನು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಸದಸ್ಯರು ಯೋಜನೆಯ ಒಪ್ಪಂದದಂತೆ ದೂರುದಾರರಿಂದ ಹಣ ಪಡೆದು ಅದಕ್ಕೆ ಸಮಾನಾಂತರ ಮೌಲ್ಯದ ಬಂಗಾರ ಕೊಡದೇ ಲಕ್ಷ್ಮೀ ಗೋಲ್ಡ್ ಪ್ಯಾಲೇಸರವರು ದೂರುದಾರನಾದ ತನ್ನ ಗ್ರಾಹಕನಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ತೀರ್ಪು ನೀಡಿ ಅಗತ್ಯವಿರುವ ಹೆಚ್ಚಿನ ಹಣ ಪಡೆದು ಫಿರ್ಯಾದಿದಾರರಿಗೆ 64,011 ಗ್ರಾಂ. ತೂಕದ 24 ಕ್ಯಾರೇಟನ ಚಿನ್ನ ನೀಡುವಂತೆ ಹಾಗೂ ಸೇವಾ ನ್ಯೂನ್ಯತೆ ಎಸಗಿದ್ದಕ್ಕಾಗಿ ಫಿರ್ಯಾದಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.25,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡಲು ಆದೇಶಿಸಿದ್ದಾರೆ.