ಅಲಹಾಬಾದ್: ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ.
2020 ಸೆಪ್ಟೆಂಬರ್ 14ರಂದು ಪ್ರಬಲ ಜಾತಿಯಾದ ಠಾಕೂರ್ ಸಮುದಾಯದ ನಾಲ್ವರು ವ್ಯಕ್ತಿಗಳು ದಲಿತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಘಟನೆ ಸಂಭವಿಸಿದ ಹಾಥರಸ್ಸಿಗೆ ಕಪ್ಪನ್ ಅವರು 2020 ಅಕ್ಟೋಬರ್ 5ರಂದು ತೆರಳುತ್ತಿದ್ದ ಸಂದರ್ಭ ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.
ಜಾತಿ ಆಧಾರಿತ ಗಲಭೆ ಆರಂಭಿಸುವ ಹಾಗೂ ಕೋಮು ಸಾಮರಸ್ಯ ಕದಡುವ ಉದ್ದೇಶವನ್ನು ಕೇರಳ ಮೂಲದ ಕಪ್ಪನ್ ಹೊಂದಿದ್ದರು ಎಂದು ಪೊಲೀಸರು ಮೊದಲು ಆರೋಪಿಸಿದ್ದರು. ಆನಂತರ ಅವರ ವಿರುದ್ಧ ದೇಶದ್ರೋಹ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ನಿಯಮಗಳ ಅಡಿಯಲ್ಲಿ ಆರೋಪಗಳನ್ನು ಸೇರಿಸಿದ್ದರು.
ಜಾಮೀನು ನಿರಾಕರಿಸಿ ಮಥುರಾ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಕಪ್ಪನ್ ಅವರು ಸಲ್ಲಿಸಿದ ಮೇಲ್ಮನವಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಪಹಾಲ್ ಅವರ ಲಕ್ಷ್ಮಿ ಪೀಠ ತಿರಸ್ಕರಿಸಿದೆ.
ಕಪ್ಪನ್ ಅವರು ಜವಾಬ್ದಾರಿಯುತ ಪತ್ರಕರ್ತನಂತೆ ಬರೆದಿಲ್ಲ ಹಾಗೂ ಮುಸ್ಲಿಮರನ್ನು ಪ್ರಚೋದಿಸುವ ಘಟನೆಗಳ ಕುರಿತು ವರದಿ ಮಾಡಿದ್ದಾರೆ ಎಂದು 5,000 ಪುಟಗಳ ಆರೋಪ ಪಟ್ಟಿಯಲ್ಲಿ ಉತ್ತರಪ್ರದೇಶ ವಿಶೇಷ ಕ್ಷಿಪ್ರ ಕಾರ್ಯ ಪಡೆ 2021 ಎಪ್ರಿಲ್ನಲ್ಲಿ ಪ್ರತಿಪಾದಿಸಿತ್ತು.
ಪತ್ರಕರ್ತರು ಇಂತಹ ಕೋಮುವಾದದ ವರದಿ ಮಾಡಬಾರದು. ಕಪ್ಪನ್ ಮಾತ್ರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಹಸ್ಯ ಕಾರ್ಯಸೂಚಿಯಾದ ಮುಸ್ಲಿಮರ ಪ್ರಚೋದನೆಗೆ ವರದಿ ಮಾಡುತ್ತಿದ್ದರು. ಅವರು ಮಾವೋವಾದಿಗಳು ಹಾಗೂ ಕಮ್ಯುನಿಸ್ಟರ ಬಗ್ಗೆ ಅನುಕಂಪ ತೋರಿಸಿ ಕೆಲವು ವರದಿಗಳನ್ನು ಬರೆದಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಿದ್ದರು.