ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಕ್ಷದ ಕಾರ್ಯಕರ್ತರ ಹಿತಕಾಪಾಡಲು ಕುಮಟಾ ಕ್ಷೇತ್ರದಲ್ಲೇ ವಾಸ್ತವ್ಯ: ನಿವೇದಿತ್ ಆಳ್ವಾ

ಪಕ್ಷದ ಕಾರ್ಯಕರ್ತರ ಹಿತಕಾಪಾಡಲು ಕುಮಟಾ ಕ್ಷೇತ್ರದಲ್ಲೇ ವಾಸ್ತವ್ಯ: ನಿವೇದಿತ್ ಆಳ್ವಾ

Wed, 07 Jun 2023 04:16:22  Office Staff   SO News

ಹೊನ್ನಾವರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಹಗಲು-ರಾತ್ರಿ ಪರಿಶ್ರಮಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಿತ ಕಾಪಾಡುವುದೇ ನನ್ನ ಪ್ರಥಮ ಆದ್ಯತೆ ಎಂದು ಹೊನ್ನಾವರ-ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ನಿವೇದಿತ್ ಆಳ್ವಾ ನುಡಿದರು. 

ಮಂಗಳವಾರ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿ ಮಾತನಾಡುತ್ತಿದ್ದರು. ನಾನೆಂದೂ ಸೋಲಿಗೆ ಅಂಜಿ ಓಡುವವನಲ್ಲ. ಚುನಾವಣೆಯ ಸಂದರ್ಭದಲ್ಲಿ ಜನತೆಗೆ ಕೊಟ್ಟ ಮಾತಿನಂತೆ ನಡೆಯುತ್ತೇನೆ ಎಂದರು. 

ಚುನಾವಣೆಯ ನಂತರ ನಿವೇದಿತ್ ಆಳ್ವಾ ಕ್ಷೇತ್ರ ಬಿಟ್ಟು ತೆರಳುತ್ತಾರೆ ಅನ್ನುವ ವಿರೋಧಿಗಳ ಮಾತನ್ನು ನಂಬದಿರಿ ಎಂದರು. ಸದ್ಯದಲ್ಲೆ ಸಾರ್ವಜನಿಕರ ಹಿತದೃಷ್ಠಿಯಿಂದ ಮೋರಬಾದಿಂದ ನನ್ನ ವಾಸ್ತವ್ಯವನ್ನು ಕುಮಟಾ ನಗರಕ್ಕೆ ಸ್ಥಳಾಂತರಿಸಿ, ಕುಮಟಾ ನಗರದಲ್ಲೆ ನನ್ನ ಕಛೇರಿ ಸ್ಥಾಪಿಸಿ ಜನತೆಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದರು. 

ಚುನಾವಣಾ ಪ್ರಚಾರ ಭಾಷಣದಲ್ಲಿ ನಾನು ಹೇಳಿದ ಮಾತು ನಿಜವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವುದು ನಿಜವಾಗಿದೆ. ಅದೇ ರೀತಿ ರಾಜ್ಯದಲ್ಲಿ ಜೆ.ಡಿ.ಎಸ್. ಎರಡಂಕಿ ದಾಟಲ್ಲಾ ಮತ್ತು ಜೆ.ಡಿ.ಎಸ್.ಗೆ ಮತ ಹಾಕಿದಲ್ಲಿ ಅದು ಬಿ.ಜೆ.ಪಿ.ಗೆ ವರದಾನವಾದಂತೆ ಎಂದಿದ್ದೂ ನಿಜವಾಗಿದೆ ಎಂದರು. ಸದ್ಯದಲ್ಲೇ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತಗಳಿಗೆ ಚುನಾವಣೆ ಘೋಷಣೆಯಾಗುವ ಸಂಭವವಿದ್ದು, ಚುನಾವಣೆಗೆ ಕಾರ್ಯಕರ್ತರು ಸಜ್ಜಾಗುವಂತೆ ಕರೆ ನೀಡಿದರು.

ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ  ಬಂದರು, ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸೋಲು, ಪಕ್ಷದ ಕಾರ್ಯಕರ್ತರಲ್ಲಿ ಒಂದು ರೀತಿಯ ಸೂತಕದ ವಾತಾವರಣ ನಿರ್ಮಿಸಿದೆ ಎಂದು ವಿಷಾದ ವ್ಯಕ್ತ ಪಡಿಸಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶ್ರಮ ಪಟ್ಟು ಕೆಲಸ ಮಾಡಿದರು ಸಹ, ಆರಂಭದಲ್ಲಿದ್ದ ವೇಗ ಕೊನೆ ಕ್ಷಣದಲ್ಲಿ ದಿಕ್ಕು ತಪ್ಪಿರುವ ಬಗ್ಗೆ ಪಕ್ಷ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿ ಸೋಲೇ ಗೆಲುವಿನ ಮೆಟ್ಟಿಲು. ಕೊನೆ ಕ್ಷಣದ ಸೋಲಿನಿಂದ ನಿವೇದಿತ್ ಆಳ್ವಾ ದೃತಿಗೆಡದೇ, ಮುಂದಿನ ಗೆಲುವಿಗಾಗಿ ಮುನ್ನುಗ್ಗುವಂತೆ ಮನವಿ ಮಾಡಿದರು.
 ನಿವೇದಿತ್ ಆಳ್ವಾ ಶಾಸಕರಾಗಿದ್ದರೇ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದಿಂದ ಕ್ಷೇತ್ರದ ಅಭಿವೃದ್ದಿಗಾಗಿ ಸಾವಿರಾರು ಕೋಟಿ ರೂಪಾಯಿ ಹರಿದು ಬರುತ್ತಿತ್ತು ಎಂದರು. ಆದರೂ ನಮಗೆ ನಿವೇದಿತ್ ಆಳ್ವಾರವರೇ ನಮ್ಮ ಶಾಸಕರಿದ್ದಂತೆ ಎಂದರು.

ಕೆ.ಪಿ.ಸಿ.ಸಿ.ಸದಸ್ಯ ಎಂ. ಎನ್. ಸುಬ್ರಮಣ್ಯ ಮಾತನಾಡಿ, ಸೋಲಿನ ಕಾರಣವನ್ನು ಪಕ್ಷದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಪ್ರತಿಯೊಬ್ಬರೂ ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದರು. ಪಕ್ಷದ ಮುಖಂಡರಲ್ಲಿಯ ಪರಸ್ಪರ ವಿಶ್ವಾಸದ ಕೊರತೆಯೇ ಸೋಲಿಗೆ ಮೂಲ ಕಾರಣ ಎಂದು ನೇರವಾಗಿ ನುಡಿದರು. ಬೂತ್, ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಬೇರೆ ಸ್ಥಳದಿಂದ ಆಮದಾದ, ಪಕ್ಷಕ್ಕೆ ಸಂಬಂಧಿಸದ ಮುಖಂಡರ ಅನಗತ್ಯ ಹಸ್ತಕ್ಷೇಪದಿಂದ, ಸ್ಥಳಿಯ ಪಕ್ಷದ ಪ್ರಾಮಾಣಿಕ ಮುಖಂಡರಿಗೆ ಉಂಟಾದ ಇರಿಸುಮುರುಸುವಿಕೆಯೇ ಪಕ್ಷದ ಸೋಲಿಗೆ ಮೂಲ ಕಾರಣ ಎಂದರು.

ಸಭೆಯಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಪಕ್ಷದ ಮುಖಂಡರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಸತೀಶ ನಾಯ್ಕ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಾಮೋದರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್.ಗೌಡ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯ್ಯಾ ಶೇಖ, ಬ್ಲಾಕ್ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಮೀನುಗಾರ ಮುಖಂಡ ಸುರೇಶ ಮೇಸ್ತ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.


Share: