ಉಳ್ಳಾಲ: ತೀವೃ ಮಳೆಯಿಂದ ಸಂಕಷ್ಟಕ್ಕೆ ಈಡಾಗಿರುವವರ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಈಗಾಗಲೇ ನಮ್ಮ ಬಳಿ ರಾಷ್ಟ್ರೀಯ ವಿಪತ್ತು ನಿರ್ವಹಣೆಗಾಗಿ 750 ಕೋಟಿ ರೂಪಾಯಿ ಹಣ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಉಳ್ಳಾಲದಲ್ಲಿ ಮಾತನಾಡಿದ ಸಿಎಂ, ಅತಿವೃಷ್ಠಿಯಿಂದ ಹಾನಿಗೊಳಗಾಗಿರುವವರ ರಕ್ಷಣಾ ಕಾರ್ಯಕ್ಕೆ ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಹಣ ಇದೆ. ಯಾವುದೇ ಕೊರತೆ ಆಗದ ರೀತಿಯಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದರು.
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾದ ಹಾನಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೀಕ್ಷಣೆ ಮಾಡಿದರು.
ಕೊಡುಗು ಜಿಲ್ಲೆಯಲ್ಲಿ ಕೆಲವು ಭಾಗದಲ್ಲಿ ಭೂ ಕುಸಿತ ಆಗಿದೆ. ಕಾವೇರಿ ಮತ್ತು ಹಾರಂಗಿ ನದಿ ಪಾತ್ರದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ದಕ್ಷಿಣ ಕನ್ನಡದ ಸುಳ್ಯದಲ್ಲಿ ಭೂ ಕುಸಿತ ಮತ್ತು ಭೂ ಕಂಪನ ಆಗಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.ನೇ ತ್ರಾವತಿ ಮತ್ತು ಉಪ್ಪಿನಂಗಡಿಯ ಕುಮಾರದೊರೆ ಸಂಗಮದಲ್ಲಿ ತೋಟಗಳ ಹಾನಿಯಾಗಿದೆ.
ಬಂಟ್ವಾಳದಲ್ಲಿ ರಸ್ತೆಗಳು ಹಾನಿಯಾಗಿದ್ದು ಭೂ ಕುಸಿತವೂ ಉಂಟಾಗಿದೆ . ಅದನ್ನೆಲ್ಲವನ್ನು ವೀಕ್ಷಿಸಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ ಮಾಡಿಕೊಂಡು ಬಂದಿದ್ದೇನೆ.
ಉಳ್ಳಾಲದಲ್ಲಿ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಕಡಲ ಕೊರೆತ ಆಗಿದ್ದು, ಇದರ ವೀಕ್ಷಣೆಗಾಗಿ ಎಂದು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.