ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನೂತನ ವರ್ಷಕ್ಕೆ ಮುರ್ಮು, ಮೋದಿ ಶುಭಾಶಯ

ನೂತನ ವರ್ಷಕ್ಕೆ ಮುರ್ಮು, ಮೋದಿ ಶುಭಾಶಯ

Sun, 01 Jan 2023 22:57:34  Office Staff   PTI

ಬೆಂಗಳೂರು: ರಾಷ್ಟ್ರಪತಿ ದ್ರೌಪದಿಮುರ್ಮು, ಪ್ರಧಾನಿ ನರೇಂದ್ರ ಮೋದಿ, ರಾಹುಲ್‌ಗಾಂಧಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.
ನೂತನ ವರ್ಷವಾದ ೨೦೨೩ ನಮ್ಮ ಜೀವನದಲ್ಲಿ ಹೊಸ ಸ್ಫೂರ್ತಿ, ಗುರಿ ಮತ್ತು ಸಾಧನೆಯನ್ನು ತರಲಿ, ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಅಂತರ್ಗತ ಅಭಿವೃದ್ಧಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಸಂಪರ್ಕ ಮಾಡೋಣ ಎಂದು ರಾಷ್ಟ್ರಪತಿ ದ್ರೌಪದಿಮುರ್ಮು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಹೊಸ ವರ್ಷಕ್ಕೆ ಶುಭಕೋರಿ ೨೦೨೩ರ ವರ್ಷ ಸಂತೋಷ, ಯಶಸ್ಸಿನಿಂದ ಕೂಡಿರಲಿ. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸಿಗುವಂತಾಗಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ೨೦೨೩ರಲ್ಲಿ ಪ್ರತಿ ಬೀದಿ, ಪ್ರತಿ ಹಳ್ಳಿ, ಪ್ರತಿ ನಗರಗಳಲ್ಲಿ ಪ್ರೀತಿಯನ್ನು ಹಂಚುವ ಅಂಗಡಿ ತೆರೆಯಲಿದೆ ಎಂದು ಆಶಿಸುವುದಾಗಿ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ೨೦೨೩ ಎಲ್ಲರ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ತರಲಿ ಎಂದು ಶುಭ ಕೋರಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಸಿವು, ಅಜ್ಞಾನ, ಅನಾರೋಗ್ಯಮುಕ್ತ ಸ್ವಾವಲಂಬಿ ಮತ್ತು ಸ್ವಾಭಿಮಾನಿ ನಾಡನ್ನು ಕಟ್ಟುವ ಸಂಕಲ್ಪ ಕೈಗೊಳ್ಳೋಣ, ಸುಳ್ಳನ್ನು ಸತ್ಯದಿಂದ, ಅನ್ಯಾಯವನ್ನು ನ್ಯಾಯದಿಂದ, ಅಧರ್ಮವನ್ನು ಧರ್ಮದಿಂದ ಎದುರಿಸುವ ಬದ್ಧತೆಯ ಹೊಸ ವರ್ಷ ನಮ್ಮದಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹೊಸ ವರ್ಷ ರಾಜ್ಯದ ಜನತೆಗೆ ಸಮೃದ್ಧಿಯ ವರ್ಷವಾಗಲಿ, ಗ್ಲೋಬಲ್ ಕರ್ನಾಟಕದ ಗುರಿಗೆ ನಿಮ್ಮ ಬೆಂಬಲ ಅತ್ಯಗತ್ಯ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ನಾಡಿನ ಸಮಸ್ತ ಜನರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಹೇಳಿದ್ದು, ೨೦೨೩ನೇ ವರ್ಷ ಕರ್ನಾಟಕದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ. ಹಾಗೂ ಕನ್ನಡಿಗರ ಸ್ವಾಭಿಮಾನದ ಕಹಳೆ ಮೊಳಗಲಿದೆ. ಎಲ್ಲ ಕನ್ನಡಿಗರಿಗೂ ಹೊಸ ವರ್ಷದಲ್ಲಿ ಒಳ್ಳೆಯದಾಗಲಿ ಹಾಗೂ ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ ನೆಲಸಲಿ ಎಂದು ಹಾರೈಸಿದ್ದಾರೆ.


Share: