ಪಡುಬಿದ್ರಿ,ಡಿಸೆಂಬರ್ 26: ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಸೋಲಲು ನನ್ನ ಸಮಾಜ ಬಾಂಧವರೇ ಕಾರಣ. ಇತರ ಸಮಾಜದವರು ಅಲ್ಲ. ನನ್ನ ಸಮುದಾಯದ ಮಂದಿಯೇ ನನ್ನ ವಿರುದ್ಧ ಅಪಪ್ರಚಾರ ನಡೆಸಿದರು ಈ ಮಾತನ್ನು ಹೇಳಿದವರು ಕೇಂದ್ರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ. ಸಂದರ್ಭ ಶುಕ್ರವಾರ ಹೆಜಮಾಡಿಯ ಬಿಲ್ಲವರ ಸಂಘದ ಕನಸಿನ ಸೌಧವನ್ನು ಉದ್ಘಾಟಿಸಿ ಮಾತನಾಡುತ್ತಿದರು.
ನಾನು ಬಿಲ್ಲವ ಸಮಾಜಕ್ಕೆ ಏನೂ ಮಾಡಿಲ್ಲ ಎನ್ನುತ್ತಾರೆ. ಅವರಿಗೇನು ಗೊತ್ತು ನಾನು ಮಾಡಿದ ಕೆಲಸ. ತಾನು ರಾಜಕೀಯ ಜೀವನದುದ್ದಕ್ಕೂ ಬಿಲ್ಲವರಿಗಾಗಿ ಕೋಟಿಗಟ್ಟಲೆಯ ಕೆಲಸವನ್ನು ಮಾಡಿದ್ದೇನೆ. ಆದರೆ ನಾನು ಸಮಾಜಕ್ಕೆ ಏನೂ ಮಾಡಿಲ್ಲ ಎಂಬ ಬಗ್ಗೆ ಅಪಪ್ರಚಾರ ನಡೆಸುತ್ತಾರೆ.
ನನ್ನವರನ್ನು ನಾನು ನಮ್ಮ ಸಮಾಜ ಎಂದುಕೊಂಡು ನಾನು ಪ್ರೀತಿಸಿದ ನನ್ನ ಸಮಾಜ ಬಾಂಧವರೇ ನನ್ನ ಬೆನ್ನಿಗೆ ಚೂರಿ ಹಾಕಿದರು ನನಗದು ಬೇಸರ. ಆದರೂ ನಾನು ಎಂದಿಗೂ ಜಗ್ಗಲಾರೆ. ಸಮಾಜದ ಒಗ್ಗಟ್ಟಿಗಾಗಿ ಅಂದು ಶ್ರಮಿಸಿದ ನನ್ನನ್ನು ರಾಜಕೀಯವಾಗಿ ಮುಗಿಸಲು ಪಣತೊಟ್ಟರು.
ಆದರೆ ನಮ್ಮ ಸಮಾಜ ಬಾಂಧವರಿಗೆ ಇದು ಅರ್ಥವಾಗುವುದಿಲ್ಲ. ನಾನು ಸಮಾಜಕ್ಕೆ ಮಾಡಿದ ಕೆಲಸವನ್ನು ಇದುವರೆಗೂ ಹೇಳಿಲ್ಲ. ಈಗ ಹೇಳಲೇ ಬೇಕಾಯಿತು. ಒಳ್ಳೆಯ ಕೆಲಸ ಮಾಡುವವನನ್ನು ಟೀಕೆ ಮಾಡಲು ತುಂಬಾ ಸುಲಭ, ಕೆಲಸ ಮಾಡಿಸಲು ಅವರಿಂದಾಗದು. ಸಮಾಜಕ್ಕಾಗಿ ಕೆಲಸ ಮಾಡದವ, ಏನೂ ಕೊಡದವ ಮಾತ್ರ ಟೀಕೆ ಮಾಡುತ್ತಾರೆ.
ವರದಿ: ಹಮೀದ್ ಪಡುಬಿದ್ರಿ.